ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 26 : ಪ್ರವಾದಿ ಮಹಮದ್ ಪೈಗಂಬರ್ರವರ ಜನ್ಮದಿನದ ಪ್ರಯುಕ್ತ ಮುಸ್ಲಿಂ ಬಾಂಧವರಿಂದ ಈದ್ಮಿಲಾದ್ ಮೆರವಣಿಗೆ ನಗರದಲ್ಲಿ ಬುಧವಾರ ವಿಜೃಂಭಣೆಯಿಂದ ನಡೆಯಿತು.

ಚಾಂದಿನಿಯನ್ನು ಹೊತ್ತು ಸಾಗಿದ ಎತ್ತಿನ ಗಾಡಿಯನ್ನು ಹೂವು, ಬಲೂನು ಹಾಗೂ ಬಣ್ಣ ಬಣ್ಣದ ವಸ್ತ್ರಗಳಿಂದ ಅಲಂಕರಿಸಲಾಗಿತ್ತು. ದ್ವಿಚಕ್ರ ವಾಹನ, ಆಟೋ, ಅಪೆಗಾಡಿ, ಕಾರುಗಳಲ್ಲಿ ದೊಡ್ಡ ದೊಡ್ಡ ಹಸಿರು ಭಾವುಟಗಳನ್ನಿಡಿದು ಮೆರವಣಿಗೆಯಲ್ಲಿ ಪ್ರವಾದಿ ಮಹಮದ್ ಪೈಗಂಬರ್, ಅಲ್ಲಾನನ್ನು ಪ್ರಾರ್ಥಿಸುತ್ತ ಸಾಗುತ್ತಿದ್ದರೆ ಇನ್ನು ಕೆಲವರು ಅಲ್ಲಲ್ಲಿ ಕುಣಿದು ಕುಪ್ಪಳಿಸುತ್ತಿದ್ದುದು ಕಂಡು ಬಂದಿತು.
ಬಡಾ ಮಕಾನ್ನಿಂದ ಹೊರಟ ಮೆರವಣಿಗೆ ಹೊರಪೇಟೆ, ಗೋಪಾಲಪುರ ರಸ್ತೆ, ಉಮರ್ ಸರ್ಕಲ್, ಅಂಜುಮಾನ್ ಸರ್ಕಲ್, ಎಸ್.ಬಿ.ಐ. ವೃತ್ತದ ಮೂಲಕ ಸಂಚರಿಸಿ ಗಾಂಧಿ ವೃತ್ತದಿಂದ ಆನೆಬಾಗಿಲು, ಕೋಳಿ ಬುರುಜನಟ್ಟಿಯಿಂದ ಅಗಸನಕಲ್ಗೆ ತೆರಳಿ ಮಕ್ಕಾ ಮಸೀದಿಯಲ್ಲಿ ಪ್ರಾರ್ಥಿಸಿ ನಂತರ ಗಾಂಧಿ ವೃತ್ತಕ್ಕೆ ಆಗಮಿಸಿ ಮೆರವಣಿಗೆಯನ್ನು ಅಂತ್ಯಗೊಳಿಸಿತು.
ಎಸ್.ಬಿ.ಎಂ.ಸರ್ಕಲ್ಗೆ ಮೆರವಣಿಗೆ ಆಗಮಿಸುತ್ತಿದ್ದಂತೆ ಪೊಲೀಸರು ವಾಹನಗಳ ಸಂಚಾರವನ್ನು ನಿಯಂತ್ರಿಸಿ ಮೆರವಣಿಗೆ ಸರಾಗವಾಗಿ ಸಾಗಲು ಅನುವು ಮಾಡಿಕೊಟ್ಟರು. ಅಲ್ಲಲ್ಲಿ ಬಂದ ಅಂಬ್ಯುಲೆನ್ಸ್ ವಾಹನಗಳಿಗೆ ಮೆರವಣಿಗೆಯಲ್ಲಿದ್ದವರು ಯಾವುದೇ ಅಡಚಣೆಯಾಗದಂತೆ ನೋಡಿಕೊಂಡರು.
ಜಾಮಿಯ ಮಸೀದಿ ಮುತುವಲ್ಲಿ ಸಾಧಿಕ್, ಕಾರ್ಯದರ್ಶಿ ಮುಹಿಬ್, ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂ ಆಲಿ, ಎಂ.ಸಿ.ಓ.ಬಾಬು, ನಗರಸಭೆ ಮಾಜಿ ಅಧ್ಯಕ್ಷ ಮಹಮದ್ ಅಹಮದ್ ಪಾಷ, ಹೆಚ್.ಶಬ್ಬೀರ್ಭಾಷಾ, ಸೈಯದ್ ಅಲ್ಲಾಭಕ್ಷಿ, ಬಾಬು, ಸೈಯದ್ ಇಸ್ಮಾಯಿಲ್, ಎ.ಜಾಕಿರ್ಹುಸೇನ್ ಸೇರಿದಂತೆ ಮುಸ್ಲಿಂ ಧರ್ಮಗುರುಗಳು, ಪಕೀರಿಗಳು, ಮದರಸಾದ ಮಕ್ಕಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಮೆರವಣಿಗೆಯಲ್ಲಿದ್ದ ಬಹುತೇಕರು ಶ್ವೇತವಸ್ತ್ರಧಾರಿಗಳಾಗಿದ್ದರು. ಇನ್ನು ಕೆಲವರು ತಲೆಗೆ ಕಪ್ಪು ಟೋಪಿ ಹಾಗೂ ಕೊರಳಲ್ಲಿ ಬಿಳಿ ಶಾಲುಗಳನ್ನು ಧರಿಸಿದ್ದರು.
ಆಯಕಟ್ಟಿನ ಸ್ಥಳಗಳಲ್ಲಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು.









