ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಚಿತ್ರದುರ್ಗ ಆ, 24 : ಚಿತ್ರದುರ್ಗದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಹ ರಾಜಾವೀರ ಮದಕರಿನಾಯಕ ಅವರ ಜಯಂತ್ಯುತ್ಸ ವವನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾದ ಚಿತ್ರದುರ್ಗ ಜಿಲ್ಲಾ ಘಟಕದ ಅಧ್ಯಕ್ಷರಾದ ಹೆಚ್.ಜೆ.ಕೃಷ್ಣಮೂರ್ತಿ ತಿಳಿಸಿದ್ದಾರೆ.
ಚಿತ್ರದುರ್ಗ ನಗರದ ಪತ್ರಿಕಾಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ಟೋಬರ್ 12 ಮತ್ತು 13 ರಂದು ಎರಡು ದಿನಗಳ ಕಾಲ ಈ ಜಯಂತ್ಯುತ್ಸವ ಕಾರ್ಯಕ್ರಮವು ನೆರವೇರ ಲಿದ್ದು, ಈ ಬಾರಿಯ ಕಾರ್ಯಕ್ರಮವನ್ನು ಜಿಲ್ಲಾ ಸಚಿವರಾದ ರಘುಮೂರ್ತಿ ಅವರ ನೇತೃತ್ವ ಹಾಗೂ ಅಧ್ಯಕ್ಷತೆಯಲ್ಲಿ ಶಾಸಕರಾದ ಕೆ.ಸಿ. ವಿರೇಂದ್ರ ಪಪ್ಪಿಯವರ ಮಾರ್ಗದರ್ಶನದಲ್ಲಿ ಆಯೋಜಿಸಲಾಗುತ್ತಿದೆ. ಮೊದಲನೆಯ ದಿನ ಕವಿಗೋಷ್ಠಿ ಆಯೋಜಿಸಲಾಗುವುದು. ವೀರ ಮದಕರಿ ನಾಯಕ ಹಾಗೂ ಚಿತ್ರದುರ್ಗದ ಇತಿಹಾಸವನ್ನು ಸಾರ್ವಜನಿಕರಿಗೆ ತಿಳಿಸುವ ಉದ್ದೇಶದಿಂದ ಕವಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ರಾಜ್ಯದ ವಾಲ್ಮೀಕಿ/ನಾಯಕ ಸಮಾಜದ ಹಾಲಿ ಹಾಗೂ ಮಾಜಿ ಶಾಸಕರು, ಮಾಜಿ ಸಚಿವರು ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ ಜಯಗಳಿಸಿದ ಎಲ್ಲಾ ಸಮಾಜದ ಶಾಸಕರನ್ನು ಆಹ್ವಾನಿಸಲಾಗುವುದು ಎಂದರು.
ವಾಲ್ಮೀಕಿ/ನಾಯಕ ಸಮಾಜದ ಸಂಘಟನೆ ಹಾಗೂ ಸಮಾಜವನ್ನು ವಿದ್ಯಾವಂತರನ್ನಾಗಿ ಮಾಡುವುದು. ಸಮಾಜದ ಆಗುಹೋಗುಗಳು ಮತ್ತು ಸಮಸ್ಯೆಗಳ ಕುರಿತು ಚರ್ಚಿಸಿ, ಮುಂದಿನ ದಿನಗಳಲ್ಲಿ ಆರ್ಥಿಕವಾಗಿ ಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ಸಂಘದ ವತಿಯಿಂದ ನೆರವು ನೀಡುವುದು. ಸಮಾಜದ ಪ್ರಜೆಗಳನ್ನು ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ರೂಪಿಸುವುದು.ಸಮಾಜದ ಮೇಲೆ ನಡೆಯುವ ಯಾವುದೇ ಅನ್ಯಾಯ ಮತ್ತು ಅಕ್ರಮಗಳ ವಿರುದ್ಧ ಒಗ್ಗಟ್ಟಿನಿಂದ ಹೋರಾಟ ರೂಪಿಸುವುದು.ಈ ಕಾರ್ಯಕ್ರಮವು ನಾಯಕ ಸಮಾಜದ ಪ್ರತಿಷ್ಠೆಯ ಸಂಕೇತವಾಗಿರುವುದರಿಂದ, ಪ್ರತಿಯೊಂದು ಹಳ್ಳಿಯಿಂದಲೂ ಪುರುಷರು, ಮಹಿಳೆಯರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿ ಸಬೇಕಾಗಿ ಮನವಿ ಮಾಡಿದರು.
ನಗರಸಭೆಯ ಮಾಜಿ ಸದಸ್ಯರಾದ ಬಿ.ವೆಂಕಟೇಶ್ ಮಾತನಾಡಿ, ಕಾರ್ಯಕ್ರಮ ಹಾಗೂ ಉತ್ಸವವನ್ನು ಅತ್ಯಂತ ವಿಜೃಂಭಣೆ ಮತ್ತು ಅದ್ದೂರಿಯಾಗಿ ಆಯೋಜಿಸಲು ಸರ್ವಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಕಾರ್ಯಕ್ರಮವನ್ನು ಅತ್ಯಂತ ವೈಭವದಿಂದ ಮತ್ತು ಯಶಸ್ವಿಯಾಗಿ ನಡೆಸಬೇಕೆಂಬುದು ಎಲ್ಲರ ಆಶಯ ವಾಗಿದೆ. ಕಳೆದ ಬಾರಿ ರಾಜನಹಳ್ಳಿಯ ತೇರಿಗೆ ಹೆಲಿಕಾಪ್ಟರ್ ಮೂಲಕ ಯಶಸ್ವಿಯಾಗಿ ಪುಷ್ಪಾರ್ಚನೆ ಮಾಡಿಸ ಲಾಗಿತ್ತು. ಅದೇ ಮಾದರಿಯಲ್ಲಿ ಈ ಬಾರಿಯೂ ವಿಶೇಷವಾಗಿ ಹೆಲಿಕಾಪ್ಟರ್ ಮೂಲಕ ಮಹನೀಯರ ಪ್ರತಿಮೆಗಳಾದ ರಾಜಾ ವೀರ ಮದಕರಿ ನಾಯಕ, ಡಾ. ಬಿ. ಆರ್. ಅಂಬೇಡ್ಕರ್, ಒನಕೆ ಓಬವ್ವ, ಸಂಗೊಳ್ಳಿ ರಾಯಣ್ಣ, ಕನಕದಾಸರು ಹಾಗೂ ಇತ್ತೀಚೆಗೆ ಪ್ರತಿಷ್ಠಾಪಿಸಲಾದ ಬಸವಣ್ಣನವರ ವಿಗ್ರಹಗಳಿಗೆ ಹೆಲಿಕಾಪ್ಟರ್ ಮೂಲಕವೇ ಪುಷ್ಪಾರ್ಚನೆ ಮಾಡಲಾಗುವುದು. ಮಹನೀಯರ ಪ್ರತಿಮೆಗಳಿಗೆ ಹೆಲಿಕಾಪ್ಟರ್ ಮೂಲಕ ಪುಷ್ಪನಮನ ಸಲ್ಲಿಸುವ ಮೂಲಕ ಈ ಬಾರಿಯ ಉತ್ಸವಕ್ಕೆ ಇನ್ನಷ್ಟು ಮೆರುಗು ನೀಡುವುದು ಮತ್ತು ಕಾರ್ಯಕ್ರಮವನ್ನು ಅತ್ಯಂತ ವಿಜೃಂಭಣೆಯಿಂದ ನೆರವೇರಿಸುವುದೇ ಮುಖ್ಯ ಸಂದೇಶವಾಗಿದೆ ಎಂದರು.
ಗೋಷ್ಟಿಯಲ್ಲಿ ಸಮಾಜದ ಮುಖಂಡರಾದ ಮಂಜುನಾಥ್ ಭೈಯಣ್ಣ, ನಾಗರಾಜ್ ಮಲ್ಲನಕಟ್ಟೆ ಉಪಸ್ಥಿತರಿದ್ದರು.










