ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 24 : ಕೆಲವೊಂದು ನಿಯಮಗಳ ಬದಲಾವಣೆಗೆ ರಾಜ್ಯದ ಮುಖ್ಯಮಂತ್ರಿ ಜೊತೆ ಚರ್ಚಿಸಿ ನಿಮ್ಮ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆಂದು ಕರ್ನಾಟಕ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಪಿ.ರಘು ಮ್ಯಾನ್ಯುವೆಲ್ ಸ್ಕ್ಯಾವೆಂಜರ್ಸ್ಗಳಿಗೆ ಭರವಸೆ ನೀಡಿದರು.
ಮಲ ಹೊರುವ ಪದ್ದತಿ ನಿಷೇಧ ಹಾಗೂ ಅವರ ಪುನರ್ವಸತಿ ಕಾಯ್ದೆ-2013 ಸಮಗ್ರ ಅನುಷ್ಟಾನಕ್ಕಾಗಿ ಹೊರಟಿರುವ ರಾಜ್ಯ ಮಟ್ಟದ ಜನ ಜಾಗೃತಿ ಜಾಥವನ್ನು ಸೋಮವಾರ ಪತ್ರಕರ್ತರ ಭವನದಲ್ಲಿ ತಮಟೆ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ರಾಜ್ಯದ ಪ್ರಿನ್ಸಿಪಲ್ ಕಾರ್ಯದರ್ಶಿಯನ್ನು ಭೇಟಿ ಮಾಡಿ ಅಧಿಕಾರಿಗಳ ಸಭೆ ನಡೆಸಿ ಸರ್ಕಾರದಿಂದ ನಿಮಗೆ ಸಿಗಬೇಕಾದ ಸೌಲಭ್ಯಗಳನ್ನು ಕೊಡಿತ್ತೇನೆ. ಸಂವಿಧಾನಶಿಲ್ಪಿ
ಡಾ.ಬಿ.ಆರ್.ಅಂಬೇಡ್ಕರ್ರವರ ಆಶಯದಂತೆ ಶಿಕ್ಷಣ, ಸಂಘಟನೆ, ಹೋರಾಟಕ್ಕೆ ಒತ್ತು ಕೊಡಬೇಕು. ಹೋರಾಟಗಾರರನ್ನು ಕೆಲವರು ಲಾಭಿಗಳನ್ನಾಗಿ ಮಾಡಿಕೊಳ್ಳುತ್ತಿರುವುದರ ವಿರುದ್ದ ನೀವುಗಳು ಎಚ್ಚರದಿಂದಿರಬೇಕು. ಸಂಘಟಿತರಾದಾಗ ಮಾತ್ರ ಶೋಷಣೆಗಳಿಂದ ಹೊರ ಬರಲು ಸಾಧ್ಯ ಎಂದು ಹೇಳಿದರು.
ನಿಮ್ಮಗಳ ಕುಂದು ಕೊರತೆ ಸಮಸ್ಯೆಗಳನ್ನು ಆಲಿಸಲು ನನಗೆ ಸರ್ಕಾರ ಅಧಿಕಾರ ಕೊಟ್ಟಿದೆ. ಮಕ್ಕಳಿಗೆ ಶಿಕ್ಷಣ ಕೊಡಿಸಿ ಜ್ಞಾನವಂತರಾದಾಗ ಮಾತ್ರ ಬದುಕು ಸುಧಾರಣೆಯಾಗುತ್ತದೆ. ಇಲ್ಲವಾದಲ್ಲಿ ಅಂಬೇಡ್ಕರ್ರವರ ಆಶಯಗಳಿಗೆ ಬೆಲೆ ಇಲ್ಲದಂತಾಗುತ್ತದೆ. ಆಯೋಗದಿಂದ ಕಟ್ಟುನಿಟ್ಟಿನ ಕೆಲಸ ಮಾಡಿ ನಿಮಗೆಲ್ಲಾ ನ್ಯಾಯ ಕೊಡಿಸುತ್ತೇನೆ. ಕೆಳ ಮಟ್ಟದ ಕೆಲಸ ಮಾಡುತ್ತಿರುವ ನಿಮ್ಮಗಳ ಜೊತೆ ನಾನು ಸದಾ ಇರುತ್ತೇನೆ. ನೊಂದವರ ಪರ ನಿಂತಾಗ ಧ್ವನಿಯಿಲ್ಲದವರು, ಶೋಷಿತರಿಗೆ ನ್ಯಾಯ ದೊರಕಿಸಬಹುದು ಎಂದರು.
ಸಫಾಯಿ ಕರ್ಮಚಾರಿ ಕಾವಲು ಸಮಿತಿಯ ಓಬಳೇಶ್ ಮಾತನಾಡಿ ಮ್ಯಾನ್ಯುವೆಲ್ ಸ್ಕ್ಯಾವೆಂಜರ್ಸ್ಗಳ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಹಿಂದಿನಿಂದಲೂ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಆದರೂ ಪುನರ್ವಸತಿ ಕಲ್ಪಿಸಲು ಆಗುತ್ತಿಲ್ಲ. ಸರ್ಕಾರ ಏಳುವರೆ ಸಾವಿರ ಜನರನ್ನು ಗುರುತಿಸಿದ್ದು, ರಾಜ್ಯದಲ್ಲಿ ಮಲ ಹೊರುವವರು ಎರಡು ಲಕ್ಷ ಇದ್ದಾರೆನ್ನುವುದು ನಮ್ಮ ಗಮನಕ್ಕೆ ಬಂದಿದೆ. ಹಾಗಾಗಿ ರಾಜ್ಯದ ಹದಿನೆಂಟು ಜಿಲ್ಲೆಗಳಲ್ಲಿ ಜಾಥ ಸಂಚರಿಸಿ ಜಾಗೃತಿ ಮೂಡಿಸಲಿದೆ ಎಂದು ತಿಳಿಸಿದರು.
ಸಫಾಯಿ ಕರ್ಮಚಾರಿ ಕಾವಲು ಸಮಿತಿ-ಕರ್ನಾಟಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ರಾಜಣ್ಣ, ಕುಂಚಿಗನಹಾಳ್ ಮಹಲಿಂಗಪ್ಪ, ರಾಮುಡು, ಪದ್ಮಕ್ಕ, ವೀಣಗೌರಣ್ಣ ಇನ್ನು
ಅನೇಕರು ಈ ಸಂದರ್ಭದಲ್ಲಿದ್ದರು.










