ಸುದ್ದಿಒನ್, ಚಳ್ಳಕೆರೆ, ಆಗಸ್ಟ್. 17 : ತಾಲ್ಲೂಕಿನ ಎನ್.ಮಹದೇವಪುರ ಗ್ರಾಮದ ಬಾವಿಯಲ್ಲಿ ಮಹಿಳೆಯ ಶವ ದೊರೆತಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.
ಮೃತ ಮಹಿಳೆಯನ್ನು ಸುಮಲತಾ (21 ವರ್ಷ) ಎಂದು ಗುರುತಿಸಲಾಗಿದೆ. ಓ ವಿಚಾರಕ್ಕೆ ಸಂಬಂಧಿಸಿದಂತೆ ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿರುತ್ತದೆ.
ಘಟನೆ ಹಿನ್ನೆಲೆ : ಚಳ್ಳಕೆರೆ ತಾಲೂಕಿನ ಚಿಕ್ಕ ಉಳ್ಳಾರ್ತಿ ಗ್ರಾಮದ ಮೃತ ಸಮಲತಾಳ ತಂದೆ ಮಹೇಶ್ ಎಂಬುವವರು ಇದೇ ಆಗಸ್ಟ್ 15 ರಂದು ನನ್ನ ಮಗಳು ಆಗಸ್ಟ್ 13 ರಂದು ರಾತ್ರಿ ಸುಮಾರು 11.30 ಗಂಟೆಗೆ ಚಿಕ್ಕ ಉಳ್ಳಾರ್ತಿ ಗ್ರಾಮದ ಜಮೀನನಲ್ಲಿರುವ ಮನೆಯಿಂದ ಚಿಕ್ಕಉಳ್ಳಾರ್ತಿ ಗ್ರಾಮದ ಗಜೇಂದ್ರ ಎಂಬ ಹುಡುಗನೊಂದಿಗೆ ಕಾಣೆಯಾಗಿರುತ್ತಾಳೆ ಎಂದು ತಳಕು ಪೊಲೀಸ್ ಠಾಣೆಗೆ ದೂರನ್ನು ನೀಡಿರುತ್ತಾರೆ. ಈ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣವನ್ನು ದಾಖಲಿಸಿರುತ್ತಾರೆ.
ಆಗಸ್ಟ್ 16 ರಂದು ಬೆಳಿಗ್ಗೆ 08.00 ಗಂಟೆಗೆ ಗಜೇಂದ್ರ ಎಂಬ ವ್ಯಕ್ತಿ ಠಾಣೆಗೆ ದೂರು ನೀಡಿದ್ದ ಮೃತ ಸುಮಲತಾ ತಂದೆ ಮಹೇಶ್ ಅವರ ಮನೆಗೆ ಬಂದು ನಿಮ್ಮ ಮಗಳನ್ನು ಆಗಸ್ಟ್ 14 ರಂದು ವಿವಾಹವಾಗಿದ್ದು, ಚಳ್ಳಕೆರೆ ತಾಲ್ಲೂಕು ಎನ್.ಮಹದೇವಪುರ ಗ್ರಾಮದ ಜಮೀನೊಂದರ ಕುರಿಗಳ ದೊಡ್ಡಿಯಲ್ಲಿ ಇದ್ದು, ಅದೇ ದಿನ ಮಧ್ಯಾಹ್ನ ಸುಮಲತಾಳು ಬಹಿರ್ದೆಸೆಗೆ ಹೋದವಳು ಮತ್ತೆ ವಾಪಸ್ ಬಂದಿರುವುದಿಲ್ಲ ಎಂದು ತಿಳಿಸಿರುತ್ತಾನೆ. ನಂತರ ಸದರಿ ಜಮೀನಿಗೆ ಹೋಗಿ ಸುಮಲತಾಳನ್ನು ಹುಡುಕಿದಾಗ ಜಮೀನಿನೊಂದರ ಬಾವಿಯೊಂದರಲ್ಲಿ ಒಬ್ಬ ಹೆಂಗಸಿನ ಮೃತ ದೇಹವು ದೊರೆತಿರುತ್ತದೆ. ಆ ಮೃತದೇಹವು ಸುಮಲತಾಳದ್ದೆ ಎಂದು ದೂರು ನೀಡಿದ ಮಹೇಶ್ ಗುರುತಿಸಿರುತ್ತಾರೆ.
ಆಗಸ್ಟ್ 14 ರಿಂದ 16 ರ ಸಂಜೆ 06.00 ಗಂಟೆಯ ನಡುವೆ ಗಜೇಂದ್ರ ಮತ್ತು ಅವನ ಸ್ನೇಹಿತರಾದ ಬೋರೇಶ, ಅಶೋಕ ರವರು ಸೇರಿಕೊಂಡು ಸುಮಲತಾಳನ್ನು ಕೊಲೆ ಮಾಡಿ ಬಾವಿಯಲ್ಲಿ ತಂದು ಹಾಕಿರುತ್ತಾರೆ ಎಂದು ಶಂಕಿಸಲಾಗಿದ್ದು
ಆರೋಪಿತರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಿ ಎಂದು ಮೃತಳ ತಂದೆ ಮಹೇಶರವರು ದೂರನ್ನು ನೀಡಿದ್ದಾರೆ.
ಈ ದೂರಿನನ್ವಯ ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸ್ ಅಧೀಕ್ಷಕರಾದ ರಂಜಿತ್ ಕುಮಾರ್ ಬಂಡಾರು, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಡಾ. ಶಿವಕುಮಾರ, ಚಳ್ಳಕೆರೆ ಉಪವಿಭಾಗದ ಡಿವೈ.ಎಸ್.ಪಿ ಸತ್ಯನಾರಾಯಣ ರಾವ್, ಭೇಟಿ ನೀಡಿ ಪರಿಶೀಲಿಸಿ ನಾಯಕನಹಟ್ಟಿ ಪೊಲೀಸ್ ಠಾಣೆ ಪೊಲೀಸ್ ಉಪನಿರೀಕ್ಷಕರಿಗೆ ಮತ್ತು ತಳಕು ವೃತ್ತ ನಿರೀಕ್ಷಕರಿಗೆ ತನಿಖೆ ಕೈಗೊಳ್ಳಲು ಸೂಕ್ತ ಸೂಚನೆಗಳನ್ನು ನೀಡಿದ್ದಾರೆ.










