ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 17 : ನಗರದ ಹೊರವಲಯ ದಾವಣಗೆರೆ ರಸ್ತೆಯಲ್ಲಿರುವ ಛಲವಾದಿ ಗುರುಪೀಠದಲ್ಲಿ ನಡೆದ ಟ್ರಸ್ಟ್ನ ಸಭೆಯಲ್ಲಿ ರಾಜ್ಯಸಭೆ ಮಾಜಿ ಸದಸ್ಯ ಹೆಚ್.ಹನಮಂತಪ್ಪನವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.

ಛಲವಾದಿ ಗುರುಪೀಠದ ಬಸವನಾಗಿದೇವಸ್ವಾಮಿ ಮಾತನಾಡಿ ಹೆಚ್.ಹನುಮಂತಪ್ಪನವರು ನಮ್ಮನ್ನೆಲ್ಲಾ ಅಗಲಿರುವುದು ಛಲವಾದಿ ಸಮಾಜಕ್ಕೆ ಅತೀವ ನೋವುಂಟಾಗಿದೆ. ಗುರುಪೀಠದ ಅಭಿವೃದ್ದಿಯಾಗುವ ಸಮಯದಲ್ಲಿ ನಮ್ಮ ಜೊತೆ ಇರಬೇಕಿತ್ತು. ಸರ್ಕಾರದಿಂದ ಅನುದಾನ ತಂದು ಮಠದ ಕಟ್ಟುವ ಮೂಲಕ ಹೆಚ್.ಹನುಮಂತಪ್ಪವರ ಆಸೆ ಈಡೇರಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದೆಂದು ತಿಳಿಸಿದರು.
ಛಲವಾದಿ ಗುರುಪೀಠ ಟ್ರಸ್ಟ್ನ ಉಪಾಧ್ಯಕ್ಷ ಡಾ.ಶ್ರೀಧರಮೂರ್ತಿ ಮಾತನಾಡಿ ನಾನು ವಿದ್ಯಾಸಂಸ್ಥೆ ಆರಂಭಿಸುವಾಗ ಹೆಚ್.ಹನುಮಂತಪ್ಪವರು ಸಹಾಯ ಮಾಡಿದ್ದಾರೆ. ಅನೇಕ ವರ್ಷಗಳಿಂದ ಅವರೊಂದಿಗೆ ಒಡನಾಟವಿತ್ತು. ಎಲ್ಲರನ್ನು ಅಗಲಿರುವುದು ದುಃಖದ ಸಂಗತಿ ಎಂದು ಕಂಬನಿ ಮಿಡಿದರು.
ಟ್ರಸ್ಟ್ನ ಖಜಾಂಚಿ ಹೆಚ್.ಸಿ.ನಿರಂಜನಮೂರ್ತಿ ಮಾತನಾಡುತ್ತ ಛಲವಾದಿ ಗುರುಪೀಠ ಟ್ರಸ್ಟ್ನ ಗೌರವಾಧ್ಯಕ್ಷರಾದ್ದ ಹೆಚ್.ಹನುಮಂತಪ್ಪನವರು ಮಠದ ಬಗ್ಗೆ ಅಪಾರವಾದ ಗೌರವವಿಟ್ಟುಕೊಂಡು ಅಭಿವೃದ್ದಿ ಪಡಿಸಬೇಕೆಂದು ಹಂಬಲಿಸುತ್ತಿದ್ದರು. ಛಲವಾದಿ ಸಮಾಜದಲ್ಲಿ ಹಿರಿಯ ಮುಖಂಡರಾಗಿದ್ದ ಅವರಲ್ಲಿ ವಿದ್ವತ್ತಿತ್ತು. ರಾಷ್ಟ್ರಮಟ್ಟದ ರಾಜಕಾರಣದಲ್ಲಿ ಗುರುತಿಸಿಕೊಂಡು ಜಿಲ್ಲೆಗೆ ಕೀರ್ತಿ ತಂದಿದ್ದರೆಂದು ಸ್ಮರಿಸಿದರು.
ಟ್ರಸ್ಟಿ ಎಸ್.ಎನ್.ರವಿಕುಮಾರ್ ಮಾತನಾಡಿ ಮಠದ ಅಭಿವೃದ್ದಿ, ಜನಾಂಗದ ವಿಚಾರ ಬಂದಾಗ ನನ್ನನ್ನು ಕರೆಸಿಕೊಂಡು ಮುಕ್ತವಾಗಿ ಮಾತನಾಡುತ್ತಿದ್ದರು. ಛಲವಾದಿ ಗುರುಪೀಠವನ್ನು ಅಭಿವೃದ್ದಿಪಡಿಸಿ ಬೇರೆ ಮಠಗಳಂತೆ ಶಕ್ತಿಶಾಲಿಯನ್ನಾಗಿ ಮಾಡಬೇಕೆಂಬ ಆಸೆಯಿಟ್ಟುಕೊಂಡಿದ್ದರು. ಸಮಾಜ ದೊಡ್ಡ ಆಸ್ತಿಯನ್ನು ಕಳೆದುಕೊಂಡು ಅನಾಥವಾಗಿದೆ. ಸರ್ಕಾರದಿಂದ ಅನುದಾನ ತಂದು ಅವರ ಆಸೆಯಂತೆ ಗುರುಪೀಠವನ್ನು ಅಭಿವೃದ್ದಿಪಡಿಸಲಾಗುವುದೆಂದರು.
ಛಲವಾದಿ ಗುರುಪೀಠದ ಟ್ರಸ್ಟ್ನ ಕಾರ್ಯದರ್ಶಿ ಜಿ.ಹೆಚ್.ಮೋಹನ್, ಸಹ ಕಾರ್ಯದರ್ಶಿ ನಟರಾಜ್, ನಾಗರಾಜು, ವಕೀಲರುಗಳಾದ ಬಸವರಾಜು, ಪರಮೇಶ್ ಛಲವಾದಿ ಜನಾಂಗದ ಮಂಜುಳಮ್ಮ ಇವರುಗಳು ಶ್ರದ್ದಾಂಜಲಿಯಲ್ಲಿ ಭಾಗವಹಿಸಿದ್ದರು.









