Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗದಲ್ಲಿ ನವೀಕೃತ ತ.ರಾ.ಸು ರಂಗಮಂದಿರ ಉದ್ಘಾಟಿಸಿದ ಸಚಿವ ಟಿ.ರಘುಮೂರ್ತಿ

---Advertisement---

ಚಿತ್ರದುರ್ಗ‌ ಆ.15:  ವಿವಿಧ ಇಲಾಖೆಗಳಿಂದ ಜಿಲ್ಲೆಯಾದ್ಯಂತ ನಿರ್ಮಿಸಲಾಗಿರುವ ಸಮುದಾಯ ಭವನಗಳ ಸರಿಯಾದ ನಿರ್ವಹಣೆಗೆ, ಜಿಲ್ಲಾಧಿಕಾರಿಗಳು ಶೀಘ್ರವೇ ಮಾರ್ಗಸೂಚಿ ರಚಿಸಿ ಹೊಸದೊಂದು ಸುತ್ತೋಲೆ ಹೊರಡಿಸುವಂತೆ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ಸೂಚಿಸಿದರು.

ಶನಿವಾರ ನಗರದ ನವೀಕೃತ ತ.ರಾ.ಸು ರಂಗಮಂದಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರದ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ, ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸೇರಿದಂತೆ ವಿವಿದ ಇಲಾಖೆಗಳ ಅಡಿ ಸಮುದಾಯಗಳ ಅನುಕೂಲಕ್ಕಾಗಿ ಭವನಗಳನ್ನು ನಿರ್ಮಿಸಲಾಗಿದೆ. ಆದರೆ ಈ ಭವನಗಳು ಸೂಕ್ತ ನಿರ್ವಹಣೆ ಇಲ್ಲದೆ ದುರಸ್ತಿ ಹಂತಕ್ಕೆ ತಲುಪುತ್ತಿರುವುದಕ್ಕೆ ಕಳವಳಕಾರಿ ಸಂಗತಿಯಾಗಿದೆ.

ಎಲ್ಲಾ ವಿಧಾನ ಸಭಾ ಕ್ಷೇತ್ರಗಳಲ್ಲಿ ಅಂಬೇಡ್ಕರ್, ಜಗಜೀವನ್ ರಾಮ್, ವಾಲ್ಮೀಕಿ ಸೇರಿದಂತೆ ವಿವಿಧ ನಾಯಕರ ಹೆಸರಿನಲ್ಲಿ ಸಮುದಾಯ ಭವನಗಳನ್ನು ನಿರ್ಮಿಸಲಾಗಿದೆ. ಸರ್ಕಾರದಿಂದ ನಿರ್ಮಿಸಲಾಗುವ ಪ್ರತಿಯೊಂದು ಕಟ್ಟಡವೂ ನಿರಂತರವಾಗಿ ಸಾರ್ವಜನಿಕರ ಬಳಕೆಗೆ ಲಭ್ಯವಿರುವಂತೆ ನೋಡಿಕೊಳ್ಳುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ.

ಗ್ರಾಮೀಣ ಭಾಗದಲ್ಲಿ ನಿರ್ಮಿಸುವ ಸಮುದಾಯ ಭವನಗಳ ನಿರ್ವಹಣೆಯ ಹೊಣೆಯನ್ನು ಆಯಾ ಗ್ರಾಮಸ್ಥರು ಮತ್ತು ಸ್ಥಳೀಯ ಸಮುದಾಯಗಳಿಗೆ ನೀಡಬೇಕು. ಅದೇ ರೀತಿ ತಾಲೂಕು ಮಟ್ಟದಲ್ಲಿರುವ ಭವನಗಳ ನಿರ್ವಹಣೆ ಟ್ರಸ್ಟ್ ‌ಗಳನ್ನು ರಚನೆ ಮಾಡುವುದು ಅಗತ್ಯವಾಗಿದೆ. ಸಂಬಂಧಪಟ್ಟ ಇಲಾಖೆಗಳು ಭವನಗಳ ಸುಸ್ಥಿತಿಯ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು. ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಾಣಗೊಳ್ಳುವ ಆಸ್ತಿ ಪಾಸ್ತಿಗಳು ದುರ್ಬಳಕೆಯಾಗದಂತೆ ಅಥವಾ ಹಾಳಾಗದಂತೆ ತಡೆಯುವುದು ಪ್ರತಿಯೊಬ್ಬರ ಕರ್ತವ್ಯ ಸಚಿವ ಟಿ. ರಘುಮೂರ್ತಿ ಹೇಳಿದರು.

ಸಾಹಿತ್ಯ-ಇತಿಹಾಸದ ಸಮ್ಮಿಳನ:  ಕಲ್ಲಿನ ಕೋಟೆಯ ಐತಿಹಾಸಿಕ ಹಿನ್ನೆಲೆ ಹಾಗೂ ಸಾಹಿತ್ಯ ಲೋಕದ ದಿಗ್ಗಜ ತ.ರಾ.ಸು. ಅವರ ಕಾದಂಬರಿಗಳ ವೈಭವವನ್ನು ಪ್ರತಿಯೊಬ್ಬರಿಗೂ ನೆನಪಿಸುವಂತೆ ನಗರದ ನವೀಕೃತ ತ.ರಾ.ಸು. ರಂಗಮಂದಿರವನ್ನು ವಿನ್ಯಾಸಗೊಳಿಸಲಾಗಿದೆ ಎಂದು ಸಚಿವ ಟಿ. ರಘುಮೂರ್ತಿ ಹೇಳಿದರು.

ಸಾಹಿತಿ ತ.ರಾ.ಸು. ಅವರ ಬರವಣಿಗೆಗಳು ಸಮಾಜವನ್ನು ತಿದ್ದುವ ಕೆಲಸ ಮಾಡಿವೆ. ಅವರ ಕಾದಂಬರಿ ಆಧಾರಿತ ಚಂದನದ ಗೊಂಬೆ, ಬೆಂಕಿಯ ಬಲೆ, ಚಂದವಳ್ಳಿಯ ತೋಟ, ತಿರುಗುಬಾಣ, ಗಾಳಿಮಾತು ಹಾಗೂ ನಾಗರಹಾವು ಸಿನಿಮಾಗಳು ರಾಜ್ಯದಾದ್ಯಂತ ಅಪಾರ ಜನಪ್ರಿಯತೆ ಗಳಿಸಿವೆ. ವಿಶೇಷವಾಗಿ ‘ನಾಗರಹಾವು’ ಚಿತ್ರವು ಚಿತ್ರದುರ್ಗ ಜಿಲ್ಲೆಯ ಇತಿಹಾಸ, ಕಲ್ಲಿನ ಕೋಟೆಯ ಹಿನ್ನೆಲೆ ಮತ್ತು ವೀರ ವನಿತೆ ಒನಕೆ ಓಬವ್ವಳ ಶೌರ್ಯವನ್ನು ಇಡೀ ನಾಡಿಗೆ ಪರಿಚಯಿಸಿದೆ ಎಂದು ಸ್ಮರಿಸಿದರು.

2006ರಲ್ಲಿ ಉದ್ಘಾಟನೆಗೊಂಡಿದ್ದ ಈ ರಂಗಮಂದಿರ, 2017ರಲ್ಲಿ ಸಣ್ಣಪುಟ್ಟ ರಿಪೇರಿ ಕಂಡಿತ್ತಾದರೂ, 2025ರ ವೇಳೆಗೆ ಸಾಕಷ್ಟು ಅವ್ಯವಸ್ಥೆಯಿಂದ ಕೂಡಿತ್ತು. ಇದನ್ನು ಮನಗಂಡು, ಡಿಎಂಎಫ್ ಅನುದಾನದಡಿ ಸೂಕ್ತ ಯೋಜನೆ ರೂಪಿಸಿ, ಇಂದು ಅತ್ಯಾಧುನಿಕ ಹಾಗೂ ಸಾರ್ವಜನಿಕರಿಗೆ ಅನುಕೂಲಕರವಾಗುವಂತೆ ನವೀಕರಿಸಲಾಗಿದೆ. ಸ್ವಾತಂತ್ರ್ಯ ದಿನಾಚರಣೆಯ ಶುಭ ಸಂದರ್ಭದಲ್ಲೇ ಈ ರಂಗಮಂದಿರ ಲೋಕಾರ್ಪಣೆಗೊಂಡಿರುವುದು ವಿಶೇಷವಾಗಿದೆ. ಇದು ಕೇವಲ ಕಲಾವಿದರಿಗೆ ಮಾತ್ರವಲ್ಲದೆ, ವಿವಿಧ ರಂಗದ ಸಾಂಸ್ಕøತಿಕ ಕಾರ್ಯಕ್ರಮಗಳು, ಜಯಂತಿಗಳು ಹಾಗೂ ಶಾಲಾ ಮಕ್ಕಳ ಕಾರ್ಯಕ್ರಮಗಳಿಗೆ ಪೂರಕವಾದ ವೇದಿಕೆಯಾಗಲಿದೆ ಎಂದರು.

ಶೌಚಾಲಯ ಮತ್ತು ನಿರ್ವಹಣೆಗೆ ಕಟ್ಟುನಿಟ್ಟಿನ ಸೂಚನೆ: ರೂ.2.70 ಕೋಟಿ ವೆಚ್ಚದಲ್ಲಿ ನವೀಕರಣಗೊಂಡಿರುವ ಈ ರಂಗಮಂದಿರದಲ್ಲಿ ಸಾರ್ವಜನಿಕರಿಗೆ ಸೂಕ್ತ ಸೌಲಭ್ಯ ಕಲ್ಪಿಸುವುದು ಅತ್ಯಗತ್ಯ. ಕಟ್ಟಡ ನಿರ್ಮಿಸುವುದು ಮಾತ್ರವಲ್ಲ, ಅದರ ಕಾಲಕಾಲಕ್ಕೆ ಸರಿಯಾದ ನಿರ್ವಹಣೆ ಬಹಳ ಮುಖ್ಯ ಎಂದು ಸಚಿವ ಟಿ.ರಘುಮೂರ್ತಿ ಪ್ರತಿಪಾದಿಸಿದರು.

ಯಾವುದೇ ಕಟ್ಟಡಕ್ಕೆ ತೆರಳಿದಾಗ ಮೊದಲು ಶೌಚಾಲಯಗಳ ವ್ಯವಸ್ಥೆ ಸರಿಯಾಗಿದೆಯೇ ಎಂದು ಪರಿಶೀಲಿಸುವುದು ಮುಖ್ಯ. ಇಲ್ಲಿ ಶೌಚಾಲಯದ ಕಾಮಗಾರಿ ಮತ್ತು ಪೇಂಟಿಂಗ್ ಇನ್ನೂ ಪೂರ್ಣ ಪ್ರಮಾಣದಲ್ಲಿ ತೃಪ್ತಿಕರವಾಗಿಲ್ಲ. ಈ ನ್ಯೂನತೆಗಳನ್ನು ಗುತ್ತಿಗೆದಾರರು ತಕ್ಷಣವೇ ಸರಿಪಡಿಸಬೇಕು ಎಂದು ಎಚ್ಚರಿಸಿದರು. ಹೆಚ್ಚಿನ ಕಲಾವಿದರಿಗೆ ಅನುಕೂಲವಾಗುವಂತೆ ರಂಗಮಂದಿರದಲ್ಲಿರುವ ಲಾಕರ್ ಕೊಠಡಿಯನ್ನು ವಿಭಾಗಿಸಿ ಮಾರ್ಪಡಿಸಲು ಸೂಚಿಸಿದರು.

ಮಲ್ಟಿಪ್ಲೆಕ್ಸ್ ಮಾದರಿಯಲ್ಲಿ ತ.ರಾ.ಸು. ರಂಗಮಂದಿರಕ್ಕೆ ಕಾಯಕಲ್ಪ: ಡಾಲ್ಬಿ ಸೌಂಡ್ ಸಿಸ್ಟಮ್, ಅತ್ಯಾಧುನಿಕ ಲೈಟಿಂಗ್, ವೇದಿಕೆಯಲ್ಲಿ ಎಲ್‍ಇಡಿ ಸ್ಕ್ರೀನ್, ಹವಾನಿಯಂತ್ರಿತ ವ್ಯವಸ್ಥೆ ಅಳವಡಿಸಿ ಮಲ್ಟಿಪ್ಲೆಕ್ಸ್ ಚಿತ್ರಮಂದಿರದ ಮಾದರಿಯಲ್ಲಿ ತ.ರಾ.ಸು ರಂಗಮಂದಿರವನ್ನು ನವೀಕರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ತಿಳಿಸಿದರು.

ಸುಮಾರು 20 ವರ್ಷಗಳ ಹಳೆಯದಾದ ತ.ರಾ.ಸು ರಂಗಮಂದಿರದ ಕಟ್ಟಡವನ್ನು ಎಂಟು ವರ್ಷಗಳ ಹಿಂದೆ 2 ಕೋಟಿ ರೂ. ವೆಚ್ಚದಲ್ಲಿ ನವೀಕರಿಸಲಾಗಿತ್ತು. ಆದರೆ, ಅಕೌಸ್ಟಿಕ್ ವ್ಯವಸ್ಥೆ ಸರಿಯಿಲ್ಲದೆ ಧ್ವನಿ ಕರ್ಕಶವಾಗಿ ಕೇಳಿಸುತ್ತಿತ್ತು. ಈ ಬಾರಿ ರೂ.2.70 ಕೋಟಿ ವೆಚ್ಚದಲ್ಲಿ ಸಂಪೂರ್ಣ ವೈಜ್ಞಾನಿಕ ಅಕೌಸ್ಟಿಕ್ ಮಾದರಿಯಲ್ಲಿ ರಂಗಮಂದಿರವನ್ನು ಸಜ್ಜುಗೊಳಿಸಲಾಗಿದೆ.
ರಂಗಮಂದಿರ ನವೀಕರಣ ಕಾಮಗಾರಿಗಾಗಿ ಸುಮಾರು 100ಕ್ಕೂ ಹೆಚ್ಚು ಕಾರ್ಮಿಕರು 1 ವರ್ಷ 4 ತಿಂಗಳ ಕಾಲ ನಿರಂತರವಾಗಿ ಶ್ರಮಿಸಿದ್ದಾರೆ. ನಿರ್ಮಿತಿ ಕೇಂದ್ರದ ಮೂಲಕ ಬೆಂಗಳೂರಿನ ಖಾಸಗಿ ಏಜೆನ್ಸಿ ಸಹಯೋಗದೊಂದಿಗೆ ಈ ಯೋಜನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ.

ರಂಗಮಂದಿರದಲ್ಲಿ ಕೇವಲ ಮುಖ್ಯ ವೇದಿಕೆ ಮಾತ್ರವಲ್ಲದೆ, ಹೊರಾಂಗಣ, ಕಲಾವಿದರ ಗ್ರೀನ್ ರೂಮ್ ಸೇರಿದಂತೆ ಪ್ರತಿಯೊಂದು ವಿಭಾಗವನ್ನು ಆಧುನಿಕ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ನಾಟಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳ ಪ್ರದರ್ಶನಕ್ಕೆ ಅಗತ್ಯವಿರುವ ಎಲ್ಲಾ ಸುಸಜ್ಜಿತ ವ್ಯವಸ್ಥೆಗಳನ್ನು ಒದಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾಹಿತಿ ನೀಡಿದರು.

ಡಿ.ಸುಧಾಕರ್ ಓಡನಾಟ ನೆನೆದು ಭಾವುಕರಾದ ಜಿಲ್ಲಾಧಿಕಾರಿ: ಪ್ರಾಸ್ತಾವಿಕವಾಗಿ ಮಾತು ಆರಂಭಿಸಿದ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ದಿವಗಂತ ಮಾಜಿ ಸಚಿವ ಡಿ.ಸುಧಾಕರ್ ಅವರ ಓಡನಾಟ ನೆನೆದು ಕ್ಷಣಕಾಲ ಭಾವುಕರಾದರು. ವೇದಿಕೆಯ ಮೇಲೆಯೇ ಜಿಲ್ಲಾಧಿಕಾರಿಗಳ ಕಣ್ಣುಗಳು ತೇವವಾದವು.

ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಆರಂಭದಲ್ಲಿ ರಂಗಮಂದಿರದ ಸ್ಥಿತಿ ಅತ್ಯಂತ ಶೋಚನೀಯವಾಗಿತ್ತು. ಸೌಂಡ್, ಬೆಳಕು ಹಾಗೂ ಮೂಲಸೌಕರ್ಯಗಳ ಕೊರತೆಯಿತ್ತು. ಈ ವೇಳೆ ಸಚಿವರಾಗಿದ್ದ ಡಿ.ಸುಧಾಕರ್ ಅವರು ರಂಗಮಂದಿರಕ್ಕೆ ಕಾಯಕಲ್ಪ ನೀಡಬೇಕು ಎಂಬ ಆಶಯ ವ್ಯಕ್ತಪಡಿಸಿ, ತಮ್ಮ ಶಾಸಕರ ಅನುದಾನದಿಂದ ಅಗತ್ಯ ಹಣ ಒದಗಿಸುವುದಾಗಿ ಭರವಸೆ ನೀಡಿದ್ದರು. ಅವರ ನಿರಂತರ ಬೆಂಬಲ ಹಾಗೂ ಆಸಕ್ತಿಯಿಂದಾಗಿ ಇಂದು ಈ ಆಧುನಿಕ ರಂಗಮಂದಿರ ರೂಪುಗೊಂಡಿದೆ ಎಂದು ಸ್ಮರಿಸಿದರು.

ರಂಗಮಂದಿರದ ನಿರ್ವಹಣೆ ಮುಖ್ಯವಾಗಿದ್ದು, ಇದಕ್ಕಾಗಿ ಅಪರ ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ವಿಶೇಷ ಸಮಿತಿಯೊಂದನ್ನು ರಚಿಸಲಾಗಿದೆ. ಕನ್ನಡ ಮತ್ತು ಸಂಸ್ಕøತಿ ಇಲಾಖೆಯಲ್ಲಿ ಕಡಿಮೆ ಸಿಬ್ಬಂದಿ ಇದ್ದು, ಇಷ್ಟು ದೊಡ್ಡ ರಂಗಮಂದಿರದ ನಿರ್ವಹಣೆ ಕಷ್ಟಕರವಾಗಲಿದೆ. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ರಂಗಮಂದಿರದ ಸುಸ್ಥಿರ ನಿರ್ವಹಣೆಗೆ ಸಾರ್ವಜನಿಕರು ಹಾಗೂ ಸಂಘಟಕರಿಂದ ಕನಿಷ್ಠ ಶುಲ್ಕ ನಿಗದಿಪಡಿಸಿ, ಆ ಮೊತ್ತದಿಂದಲೇ ಕಟ್ಟಡದ ರಕ್ಷಣೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದ ಶಾಸಕ ಕೆ.ಸಿ.ವಿರೇಂದ್ರ ಪಪ್ಪಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಸಂಸದ ಗೋವಿಂದ ಎಂ ಕಾರಜೋಳ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಾಜ್‍ಪೀರ್, ಜಿಲ್ಲಾ ಗ್ಯಾರಂಟಿ ಯೋಜನೆ ಪ್ರಾಧಿಕಾರಿದ ಅಧ್ಯಕ್ಷ ಆರ್.ಶಿವಣ್ಣ, ಜಿ.ಪಂ.ಸಿಇಓ ಡಾ.ಆಕಾಶ್, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕ ಎಂ.ಜೆ.ಮಹೇಶ್, ನಿರ್ಮಿತಿ ಕೇಂದ್ರ ಯೋಜನಾ ನಿರ್ದೇಶಕ ಹರೀಶ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್ ಉಪಸ್ಥಿರಿದ್ದರು.

 

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now