ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 09 : ಭಾರತ ನೃತ್ಯ ಪ್ರಧಾನ ದೇಶ. ನೃತ್ಯದ ವಿವಿಧತೆಯಲ್ಲಿ ಭರತನಾಟ್ಯ ಉನ್ನತ ಶಾಸ್ತ್ರೀಯ ಗುಣಮಟ್ಟವನ್ನು ಹೊಂದಿದೆ. ಪ್ರತಿಯೊಬ್ಬ ಪೋಷಕರಿಗೆ ತಮ್ಮ ಮಕ್ಕಳಲ್ಲಿ ನಾಟ್ಯದ ಅಭಿರುಚಿ ಬೆಳೆಸುವಲ್ಲಿ ಆಸಕ್ತಿ ಇರುತ್ತದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಸಿ.ಎಸ್.ಗಾಯಿತ್ರಿ ಅಭಿಪ್ರಾಯಪಟ್ಟರು.
ನಾಟ್ಯರಂಜನಿ ನೃತ್ಯ ಕಲಾ ಕೇಂದ್ರ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಸಂಯುಕ್ತ ಆಶ್ರಯದಲ್ಲಿ ಕೇಂದ್ರದ ನೃತ್ಯ ತಾಲೀಮು ಕೊಠಡಿ ಆವರಣದಲ್ಲಿ ಪ್ರಸಾಧನ ಮತ್ತು ಅಭಿನಯ ನೃತ್ಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಪಾಶ್ಚಾತ್ಯ ಮತ್ತು ಪೌರಾತ್ಯ ನೃತ್ಯ ವಿಶೇಷತೆಯನ್ನು ರಾಜ್ಯ ಹೊಂದಿದೆ. ನಾಟ್ಯರಂಜನಿ ನೃತ್ಯ ಕಲಾ ಕೇಂದ್ರವು ಜಾನಪದ, ಭಾವಗೀತೆ, ದಾಸರಪದ, ಕೀರ್ತನೆಗಳು ಹಾಗೂ ಭಕ್ತಿಗೀತೆಗಳಿಗೆ ನೃತ್ಯ ಪ್ರಾಧಾನ್ಯತೆ ನೀಡುತ್ತಾ ಬಂದಿದೆ. ಕಲಾ ಕೇಂದ್ರದಲ್ಲಿ ನೃತ್ಯ ಕಲಿತ ಅನೇಕ ವಿದ್ಯಾರ್ಥಿನಿಯರು ಸಮಾಜದಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಬಹುತೇಕ ವಿದ್ಯಾರ್ಥಿಗಳು ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ನೃತ್ಯ ಕೇಂದ್ರಗಳನ್ನು ತೆರೆದು ಅನೇಕರಿಗೆ ನೃತ್ಯದ ತರಗತಿಗಳನ್ನು ನಡೆಸುತ್ತಿದ್ದಾರೆ ಎಂದರು.

ರಂಗಸೌರಭ ಕಲಾ ಸಂಘದ ಕಾರ್ಯದರ್ಶಿ ಹಾಗೂ ಹಿರಿಯ ರಂಗಕರ್ಮಿ ಕೆ.ಪಿ.ಎಂ ಗಣೇಶಯ್ಯ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಉಪಸ್ಥಿತರಿದ್ದು ಮಾತನಾಡಿ ಪಾತ್ರಕ್ಕೆ ಮತ್ತು ಅಭಿನಯಕ್ಕೆ ತಕ್ಕಂತೆ ಪ್ರಸಾಧನ, ಅಭಿನಯ ಮತ್ತು ವಿಷಯವಸ್ತುವಿಗೆ ಮೆರಗನ್ನು ನೀಡುತ್ತದೆ. ನೃತ್ಯದ ಕಲಾವಿದರಿಗೆ ವಿವಿಧ ಪ್ರಾಕಾರಗಳಿಗೆ ಸಂಘ ಸಂಸ್ಥೆಗಳು ವೇದಿಕೆ ಕಲ್ಪಿಸಿಕೊಡಬೇಕು. ಸುಪ್ತ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಬೇಕು. ಪೋಷಕರು ತಮ್ಮ ಮಕ್ಕಳಿಗೆ ನಾಟಕ, ನೃತ್ಯ, ಸಂಗೀತದ ಅಭ್ಯಾಸ ಮಾಡಿಸಿದರೆ ಶಿಸ್ತು, ಏಕಾಗ್ರತೆ ಮತ್ತು ಸನ್ನಡತೆಗೆ ಅವಕಾಶ ಕಲ್ಪಿಸುತ್ತದೆ ಎಂದರು.
ಐಮಂಗಲ ಗ್ರಾಮದ ಸೀನಿಯರ್ ಮೆಡಿಕಲ್ ಆಫೀಸರ್ ಡಾ.ಪ್ರಶಾಂತ್ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಮಾನಸಿಕ ಮತ್ತು ದೈಹಿಕ ಸುಸ್ಥಿತಿಗೆ ನೃತ್ಯವು ಸಹಕಾರಿಯಾಗಿದೆ ಎಂದರು. ಪಿಎಂಕೆವಿವೈ ಕಛೇರಿಯ ಸಿ.ಪಿ ನವೀನ್, ಸ್ಟೇಜ್ ಕಲಾವಿದೆ ಎಸ್.ಬಿ. ವನಮಾಲ ಹಾಗೂ ಕ್ರಿಯೇಟಿವ್ ವೀರೇಶ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು.
ನೃತ್ಯ ಕಲಾವಿದೆ ಸೃಜನ ವೆಂಕಟೇಶ್, ಗಾಯಿತ್ರಿ ಕಲಾ ಕೇಂದ್ರದ ನೃತ್ಯ ಶಿಕ್ಷಕಿ ಸಂಚಿತ, ಮೇಕಪ್ ಕಲಾವಿದೆ ಸುನೀತತಟ್ಟೆ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಹಿರಿಯ ನೃತ್ಯ ಕಲಾವಿದರಾದ ರೋಶನಿ.ಆರ್.ಜೈನ್, ಅರ್ಚಿತವರುಣ್, ಮನಸ್ವಿಕೌಶಿಕ್ ಜೊತೆಗೆ ನೂರಾರು ವಿದ್ಯಾರ್ಥಿನಿಯರು ನಾಟ್ಯರಂಜನಿ ನೃತ್ಯ ಕಲಾ ಕೇಂದ್ರದ ನೃತ್ಯಗುರು ಜಿ.ಕಿರಣ್ ಇವರ ನಿರ್ದೇಶನದಲ್ಲಿ ಅಮೋಘ ನೃತ್ಯ ಪ್ರದರ್ಶನ ನೀಡಿದರು. ಉಪನ್ಯಾಸಕರಾದ ಹೆಚ್.ವಿ.ಕಾವ್ಯ ಪ್ರಾರ್ಥಿಸಿದರು, ಸುಷ್ಮಾ ಕೆ.ಹರ್ತಿ ನಿರೂಪಿಸಿದರು.











