ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 08 : ಆ.10 ರಂದು ವಿದೇಶಿ ಕಂಪನಿಗಳನ್ನು ದೇಶದಿಂದ ಒದ್ದೊಡಿಸುವ ಚಳುವಳಿ ಹಮ್ಮಿಕೊಂಡಿರುವುದಕ್ಕೆ ನಮ್ಮ ಬೆಂಬಲಿವಿದೆ ಎಂದು ಸಂಯುಕ್ತ ಹೋರಾಟ
ಸಮಿತಿ ಅಧ್ಯಕ್ಷ ಜೆ.ಯಾದವರೆಡ್ಡಿ ತಿಳಿಸಿದರು.
ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ರೈತರು, ಕಾರ್ಮಿಕರು, ಸಿಪಿಐ. ಸಿಪಿಎಂ. ಪ್ರಗತಿಪರ ಸಂಘಟನೆಗಳು ಸೇರಿಕೊಂಡು ದೇಶಾದ್ಯಂತ ನಡೆಸಲಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿ ಅಂದು ಬೆಳಿಗ್ಗೆ 9 ಗಂಟೆಗೆ ಗಾಂಧಿ ವೃತ್ತದಲ್ಲಿ ಜೈಲ್ ಭರೋ ಪ್ರತಿಭಟನೆ ನಡೆಸಲಾಗುವುದು. ಕೃಷಿ, ಕೈಗಾರಿಕೆ, ಶಿಕ್ಷಣ ಆರೋಗ್ಯ ಕ್ಷೇತ್ರಕ್ಕೆ ವಿದೇಶಿ ಕಂಪನಿಗಳು ಲಗ್ಗೆಯಿಟ್ಟಿರುವುದರಿಂದ ಕೆಟ್ಟ ಪರಿಣಾಮ ಬೀರಿರುವುದು ಈಸ್ಟ್ ಇಂಡಿಯಾ ಕಂಪನಿಗೆ ಹೋಲಿಸಿದಂತಿದೆ. ಕಾರ್ಪೊರೇಟರ್ಗಳು ಬೀಜ ಗೊಬ್ಬರದ ಮೇಲೆ ಕೈಯಿಟ್ಟಿರುವುದರಿಂದ ರೈತರು ಹತಾಶರಾಗಿದ್ದಾರೆಂದು ಹೇಳಿದರು.

ಉದ್ಯಮಿಗಳು, ಬಂಡವಾಳಶಾಹಿಗಳು ಖಾಸಗಿ ಶಾಲೆಗಳನ್ನು ಓಪನ್ ಮಾಡಿರುವುದರಿಂದ 94 ಸಾವಿರ ಸರ್ಕಾರಿ ಶಾಲೆಗಳು ಮುಚ್ಚಿವೆ. ಇದರಿಂದ ಬಡ ಮಕ್ಕಳ ಶಿಕ್ಷಣಕ್ಕೆ ಕಂಠಕವಾಗಿದ್ದು, ಸರ್ಕಾರ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿದೆ. ಎಪ್ಪತ್ತು ಸಾವಿರ ಶಿಕ್ಷಕರ ಹುದ್ದೆಗಳು ಸರ್ಕಾರಿ ಶಾಲೆಗಳಲ್ಲಿ ಖಾಲಿಯಿವೆ. ಬಡವರ ಮಕ್ಕಳಿಗೆ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣ ಗಗನ ಕುಸುಮವಾಗಿದೆ ಎಂದು ಆಪಾದಿಸಿದರು.
ಸರ್ಕಾರಿ ಆಸ್ಪತ್ರೆಯಲ್ಲಿ ಬಡವರಿಗೆ ಚಿಕಿತ್ಸೆ ಸಿಗದೆ ಪ್ರಾಣಹಾನಿಯಾಗುತ್ತಿದೆ. ಕೇಂದ್ರ ಸರ್ಕಾರದಲ್ಲಿ ತಳವರ್ಗ, ತಳಸಮುದಾಯಗಳಿಗೆ ಏನು ಸಿಗುತ್ತಿಲ್ಲ. ಪ್ರಧಾನಿ ಮೋದಿ ಸರ್ಕಾರದಲ್ಲಿ ರೈತರು ನೆಲ ಕಚ್ಚುತ್ತಿದ್ದಾರೆ. ಕಾರ್ಪೊರೇಟರ್ಗಳ 24 ಲಕ್ಷ ಕೋಟಿ ರೂ.ಗಳ ತೆರಿಗೆ ಮನ್ನ ಮಾಡಲು ಕೇಂದ್ರದಲ್ಲಿ ಹಣವಿದೆ. ರೈತರ ಸಾಲ ಏಕೆ ಮನ್ನ ಮಾಡುತ್ತಿಲ್ಲ. ಅಂಬಾನಿ, ಅದಾನಿ ಕಂಪನಿಗಳು ಕೋವಿಡ್ನಲ್ಲಿ ಕೋಟ್ಯಾಂತರ ರೂ.ಗಳ ಲಾಭ ಮಾಡಿಕೊಂಡಿವೆ. ಕೇಂದ್ರ ಸರ್ಕಾರ ವಿದೇಶಿ ಕಂಪನಿಗಳೊಂದಿಗೆ ಅಪವಿತ್ರ ಮೈತ್ರಿ ಮಾಡಿಕೊಂಡಿದೆ. ನರೇಗಾ ಯೋಜನೆ ಹೆಸರು ಬದಲಾವಣೆಯಿಂದ ದುಡಿಯುವ ಕೈಗಳಿಗೆ ಕೆಲಸವಿಲ್ಲದಂತಾಗಿದೆ. ರಾಜ್ಯ ಸರ್ಕಾರ ಶೇ.40 ರಷ್ಟು ಕೇಂದ್ರ ಶೇ.60 ರಷ್ಟು ಹಣ ನೀಡುತ್ತಿದೆ. ಹಾಗಾಗಿ ಕೇಂದ್ರದ ಸೂಚನೆ ಮೇರೆಗೆ ಕಾರ್ಮಿಕರಿಗೆ ಕೆಲಸ ನೀಡಬೇಕಾಗಿರುವುದರಿಂದ ಈ ಯೋಜನೆ ಹಳ್ಳ ಹಿಡಿದಿದೆ. ಎರಡು ರಾಷ್ಟ್ರಗಳ ನಡುವಿನ ಯುದ್ದದಲ್ಲಿ ಪೆಟ್ರೋಲ್, ಡೀಸೆಲ್, ಬೇಳೆಕಾಳು, ಅಡುಗೆ ಎಣ್ಣೆ ಬೆಲೆ ಜಾಸ್ತಿಯಾಗಿರುವುದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು?
ಸಿಐಟಿಯು. ಜಿಲ್ಲಾ ಸಂಚಾಲಕ ಮಲಿಯಪ್ಪ ಮಾತನಾಡಿ ಕ್ವಿಟ್ ಇಂಡಿಯಾ ಚಳುವಳಿ ಮಾದರಿಯಲ್ಲಿ ಆ.10 ರಂದು ವಿದೇಶಿ ಕಂಪನಿಗಳ ವಿರುದ್ದ ದೇಶ ಬಿಟ್ಟು ತೊಲಗಿ ಚಳುವಳಿ ಹಮ್ಮಿಕೊಳ್ಳಲಾಗಿದೆ. ಈಗಿನ ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ಕ್ರೂರವಾದ ಹಿಂಸೆ ನೀಡುತ್ತಿದೆ. ಕಾರ್ಮಿಕರಿಗೆ ಹೆಚ್ಚು ಕೂಲಿ ನೀಡುವುದನ್ನು ಕೇಂದ್ರ ತಡೆಯುತ್ತಿದೆ. ರೈತರ ಬೆಳೆಗಳಿಗೆ ಬೆಂಬಲ ಬೆಲೆ ಸಿಗುತ್ತಿಲ್ಲ. ಕಾರ್ಪೊರೇಟ್ ಕಂಪನಿಗಳ ಪರವಾಗಿರುವ ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿ ಹೆಸರನ್ನು ಬದಲಾವಣೆ ಮಾಡಿರುವುದರಿಂದ ಯಾವುದೇ ಪ್ರಯೋಜನವಿಲ್ಲ. ಕೂಲಿ ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ. ಜಿಲ್ಲೆಯಲ್ಲಿ ಬರಗಾಲ ಎದುರಾಗಿದ್ದು, ಇನ್ನು ಬರಪೀಡಿತ ಪ್ರದೇಶವೆಂದು ಘೋಷಿಸುತ್ತಿಲ್ಲ. ಬಡವರು ಹೊಟ್ಟೆಪಾಡಿಗಾಗಿ ಗುಳೆ ಹೋಗುತ್ತಿದ್ದಾರೆ. ಅದಕ್ಕಾಗಿ ಅಂದು ನಡೆಯುವ ಪ್ರತಿಭಟನೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು.
ರೈತ ಮುಖಂಡ ಬಸ್ತಿಹಳ್ಳಿ ಸುರೇಶ್, ಸಿಐಟಿಯು. ಸಹ ಸಂಚಾಲಕಿ ನಿಂಗಮ್ಮ, ತಿಪ್ಪೇಸ್ವಾಮಿ, ಸಿಪಿಐ.ಜಿಲ್ಲಾ ಕಾರ್ಯದರ್ಶಿ ಕಾಂ.ಜಿ.ಸಿ.ಸುರೇಶ್ಬಾಬು, ಕರ್ನಾಟಕ ಜನಶಕ್ತಿ ರಾಜ್ಯ ಸಮಿತಿ ಸದಸ್ಯ ಟಿ.ಶಫಿವುಲ್ಲಾ ಇನ್ನು ಅನೇಕರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.












