ಹಾವೇರಿ.ಆಗಸ್ಟ್.8: ಆಸ್ತಿ ಹಂಚಿಕೆ ವಿಚಾರವಾಗಿ ಹುಟ್ಟಿದ ಜಗಳ ವಿಕೋಪಕ್ಕೆ ತಿರುಗಿ, ತಮ್ಮನೇ ಸ್ವಂತ ಅಣ್ಣನನ್ನು ಕಲ್ಲಿನಿಂದ ಹೊಡೆದು ನಡುರಸ್ತೆಯಲ್ಲೇ ಕ್ರೂರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ನಲ್ಲಿ ನಡೆದಿದೆ.
ಸಂತೋಷ್ ಮುರೇಗಪ್ಪ (30) ಕೊಲೆಯಾದ ದುರ್ದೈವಿ. ಈತನ ತಮ್ಮ ಕುಮಾರ್ (27) ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಸಂತೋಷ್ ಹಾಗೂ ಕುಮಾರ್ ನಡುವೆ ಕಳೆದ ಕೆಲವು ದಿನಗಳಿಂದ ಒಂದು ಎಕರೆ ಜಮೀನಿನ ಹಂಚಿಕೆ ವಿಚಾರವಾಗಿ ತೀವ್ರ ಗಲಾಟೆ ನಡೆಯುತ್ತಿತ್ತು. ಇದೇ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ತೀವ್ರ ವೈಮನಸ್ಸು ಬೆಳೆದಿತ್ತು.
ಸಂತೋಷ್ ಇತ್ತೀಚೆಗೆ ಊರಿಗೆ ಬಂದಿದ್ದಾಗ, ತಮ್ಮ ಕುಮಾರ್ ಮತ್ತೆ ಆಸ್ತಿಯ ವಿಷಯ ತೆಗೆದು ಜಗಳವಾಡಿದ್ದಾನೆ. ಮಾತಿಗೆ ಮಾತು ಬೆಳೆದು ಆಕ್ರೋಶಗೊಂಡ ಕುಮಾರ್, ದೊಡ್ಡ ಕಲ್ಲಿನಿಂದ ಅಣ್ಣ ಸಂತೋಷ್ನ ತಲೆಗೆ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ. ತೀವ್ರ ರಕ್ತಸ್ರಾವದಿಂದ ಗಂಭೀರವಾಗಿ ಗಾಯಗೊಂಡ ಸಂತೋಷ್ ಕೊನೆಯುಸಿರೆಳೆದಿದ್ದಾರೆ. ಆರೋಪಿ ಕುಮಾರನನ್ನು ಹಾನಗಲ್ ಠಾಣಾ ಪೋಲೀಸರು ವಶಕ್ಕೆ ಪಡೆದಿದ್ದಾರೆ. ಹಾನಗಲ್ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.










