ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 07 : ಎಲ್ಲರನ್ನೂ ಪ್ರೀತಿಸಿ ಗೌರವಿಸುವ ಗುಣ ಹೊಂದಿರುವ ಸರ್ಕಾರಿ ಶಾಲೆಯ ನಿವೃತ್ತ ಮುಖ್ಯಶಿಕ್ಷಕ ಎಚ್.ಆರ್. ಶಂಕರ್ ಅವರಿಗೆ ಅದ್ದೂರಿ ಸನ್ಮಾನ ಕಾರ್ಯಕ್ರಮ ನಡೆಯಿತು.
31-7-2026 ರಂದು ವಯೋಸಹಜ ನಿವೃತ್ತಿ ಹೊಂದಿದ ಶಂಕರ್ ಅವರು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಹರ್ತಿಕೋಟೆ ಮೂಲದವರು. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇವರ ನಿವೃತ್ತಿ ಜೀವನ ಹರ್ಷದಾಯಕವಾಗಿರಲೆಂದು ಶುಭ ಹಾರೈಸಲಾಯಿತು.

ಸನ್ಮಾನಿಸಿದ ಎಲ್.ನಾರಾಯಣಾಚಾರ್ ಮಾತನಾಡಿ, “ಶಂಕರ್ ಅವರು ನನಗೆ ಸಹೋದರ ಸಮಾನರು. ನನ್ನ ಧರ್ಮಪತ್ನಿ ಶ್ರೀಮತಿ ಲೋಕಾಂಬ ಅವರು 22.1.2022 ರಂದು ಹೃದಯಘಾತದಿಂದ ವಿಧಿವಶರಾದಾಗ ನನಗೆ ಸಾಂತ್ವಾನ ಹೇಳಿ ಧೈರ್ಯ ತುಂಬಿದ್ದರು. ಇಂದಿಗೂ ಅವರ ಒಡನಾಟ ಸಹೋದರಂತಿದೆ” ಎಂದು ನೆನಪಿಸಿಕೊಂಡರು.

ಇವರು ಆದರ್ಶ ದಂಪತಿಗಳು. ಇವರಿಗೆ ಎರಡು ಮುದ್ದಾದ ಗಂಡು ಮಕ್ಕಳಿದ್ದಾರೆ. ಸಮಾಜದ ಧರ್ಮ ಗುರುಗಳಾದ ಕಾಗಿನೆಲೆ ಶ್ರೀ ನಿರಂಜನಾನಂದಪುರಿ ಮಹಾಸ್ವಾಮೀಜಿಯವರು ಇವರ ಮನೆಯಲ್ಲಿಯೇ ಬೆಳೆದು ವಿದ್ಯಾಭ್ಯಾಸ ಮಾಡಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ನೀರಾವರಿ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ಜೋಗಿಮಟ್ಟಿ ಈ. ಮಹೇಶ್ ಬಾಬು, ರಂಗಕರ್ಮಿ ಕೆ.ಪಿ.ಎಂ. ಗಣೇಶಯ್ಯ, ರಾಜ್ಯಮಟ್ಟದ ಕಥಾ ಸ್ಪರ್ಧೆ ಪ್ರಶಸ್ತಿ ವಿಜೇತ ಶ್ರೀ ಕೆ.ಪಿ.ಓಂಕಾರಮೂರ್ತಿ, ಸುದ್ದಿಒನ್ ಜಾಲತಾಣ ಪತ್ರಿಕೆಯ ಸಂಪಾದಕ ಪಿ.ಎಲ್.ನಾಗೇಂದ್ರ ರೆಡ್ಡಿ ಇದ್ದರು.










