ಸೋನಿಪತ್.ಆಗಸ್ಟ್.6: ತಂದೆ-ತಾಯಿ ತಮ್ಮ ಮಕ್ಕಳನ್ನು ಪ್ರೀತಿಯಿಂದ ಸಾಕಿ, ಉತ್ತಮ ಶಿಕ್ಷಣ ನೀಡಿ ಉನ್ನತ ಮಟ್ಟಕ್ಕೆ ತಲುಪಿಸುತ್ತಾರೆ. ಆದರೆ, ಅದೇ ತಂದೆ ಕೊನೆಯುಸಿರೆಳೆಯುವಾಗ ಅವರ ಮುಖ ನೋಡಲೂ ಬಾರದ, ಅಂತಿಮ ಸಂಸ್ಕಾರದಲ್ಲೂ ಭಾಗಿಯಾಗದ ಅಮಾನವೀಯ ಘಟನೆಯೊಂದು ಹರಿಯಾಣದ ಸೋನಿಪತ್ನಲ್ಲಿ ನಡೆದಿದೆ.
ಒಂದು ಕಾಲದಲ್ಲಿ ಮಹಾರಾಷ್ಟ್ರದಲ್ಲಿ ಪ್ರಸಿದ್ಧ ಜವಳಿ ಉದ್ಯಮಿಯಾಗಿದ್ದ ಶಿವಚರಣ್ ರತನ್ ಗುಪ್ತಾ ಎಂಬ ವೃದ್ಧರು ಸೋನಿಪತ್ನ ವೃದ್ಧಾಶ್ರಮವೊಂದರಲ್ಲಿ ಕೊನೆಯುಸಿರೆಳೆದಿದ್ದಾರೆ. ತಮಗೆ ಅನಾರೋಗ್ಯ ಕಾಡಿದಾಗ ತಮ್ಮ ಮೂವರು ಹೆಣ್ಣುಮಕ್ಕಳನ್ನು ನೋಡಬೇಕೆಂಬ ಅವರ ಆಸೆ ಈಡೇರಲೇ ಇಲ್ಲ.

ಇವರ ಹಿರಿಯ ಮಗಳು ಅನಿತಾ ನೇಪಾಳದಲ್ಲಿ ಶಿಕ್ಷಕಿಯಾಗಿದ್ದರೆ, ಎರಡನೇ ಮಗಳು ನಿಷಾ ಉತ್ತರ ಪ್ರದೇಶದ ಅಜಂಗಢದಲ್ಲಿ ನೆಲೆಸಿದ್ದಾರೆ. ಮೂರನೇ ಮಗಳು ಮುಂಬೈನಲ್ಲಿ ವಾಸವಾಗಿದ್ದಾರೆ. ಮೂವರೂ ಕೂಡ ಉತ್ತಮ ಉದ್ಯೋಗದಲ್ಲಿದ್ದು, ಆರ್ಥಿಕವಾಗಿ ಸೌಕರ್ಯ ಹೊಂದಿದ್ದರೂ ತಂದೆಯ ಕೊನೆಗಾಲದಲ್ಲಿ ಆಸರೆಯಾಗಲಿಲ್ಲ.

People often claim daughters always take care of their parents. But every situation is different. This father passed away in an old-age home, and his daughter couldn't attend his last rites, asking on a video call to hurry up. Heartbreaking. 💔 pic.twitter.com/uzZIOdzog2
— Byomkesh (@byomkesbakshy) August 6, 2026

ಶಿವಚರಣ್ ಅವರ ಆರೋಗ್ಯ ಕ್ಷೀಣಿಸಿದಾಗ ವೃದ್ಧಾಶ್ರಮದ ಆಡಳಿತ ಮಂಡಳಿಯು ಅವರ ಮಕ್ಕಳಿಗೆ ಕರೆ ಮಾಡಿ ತಂದೆಯನ್ನು ಭೇಟಿಯಾಗುವಂತೆ ವಿನಂತಿಸಿತ್ತು. ಆದರೆ, ಪ್ರತಿಯೊಬ್ಬರೂ ಒಂದೊಂದು ಕಾರಣ ನೀಡಿ ಬರಲು ನಿರಾಕರಿಸಿದರು. ತಂದೆ ನಿಧನರಾದ ವಿಷಯ ತಿಳಿದ ಮೇಲೆಯೂ ಅವರು ಬರಲಿಲ್ಲ.
ಬದಲಾಗಿ, ಅಂತ್ಯಕ್ರಿಯೆಯ ವೆಚ್ಚಕ್ಕಾಗಿ ಗೂಗಲ್ ಪೇ (Google Pay) ಮೂಲಕ ಹಣ ಕಳುಹಿಸಿದ ಮಕ್ಕಳು, ಸಂಪೂರ್ಣ ಅಂತಿಮ ಸಂಸ್ಕಾರದ ವಿಧಿವಿಧಾನಗಳನ್ನು ವಿಡಿಯೋ ಕಾಲ್ ಮೂಲಕವೇ ವೀಕ್ಷಿಸಿ ಮುಗಿಸಿದ್ದಾರೆ. ಅಷ್ಟೇ ಅಲ್ಲದೆ, ಚಿತಾಭಸ್ಮವನ್ನು (ಅಸ್ಥಿ) ಪಡೆಯಲು ತಮಗೆ ಬರಲಾಗುವುದಿಲ್ಲ, ಅದನ್ನು ಗಂಗಾ ನದಿಯಲ್ಲೇ ವಿಸರ್ಜಿಸಿ ಎಂದು ಹೇಳಿರುವುದು ಸಾರ್ವಜನಿಕರಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.











