Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರೈತರ ನಿರ್ಲಕ್ಷ್ಯ, ಕಾರ್ಪೊರೇಟ್‌ಗಳ ಪರ ಕೇಂದ್ರ ಸರ್ಕಾರ: ಚಾಮರಸ ಮಾಲಿ ಪಾಟೀಲ್ ಆಕ್ರೋಶ

---Advertisement---

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್,ಚಿತ್ರದುರ್ಗ, ಆಗಸ್ಟ್. 01 : ಕೇಂದ್ರ ಸರ್ಕಾರ ಕೃಷಿಯನ್ನು ನಿರ್ಲಕ್ಷಿಸುತ್ತಿದ್ದು, ರೈತರನ್ನು ನಾಶಪಡಿಸಿ ಬಹುರಾಷ್ಟ್ರೀಯ ಕಂಪನಿಗಳು ಕಾರ್ಪೊರೇಟರ್‍ಗಳ ಪರವಾಗಿರುವುದರಿಂದ ಆ.10 ರಂದು ಭಾರತ ಬಿಟ್ಟು ತೊಲಗಿ ಚಳುವಳಿಯನ್ನು ಕಿಸಾನ್ ಮೋರ್ಚಾದಿಂದ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್ ತಿಳಿಸಿದರು.

ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಹುರಾಷ್ಟ್ರೀಯ ಕಂಪನಿಗಳು ಕೃಷಿ ಕ್ಷೇತ್ರವನ್ನು ಆಕ್ರಮಿಸಿಕೊಂಡಿರುವುದರಿಂದ ರೈತರಿಗೆ ಬೀಜ ರಸಗೊಬ್ಬರ, ಹಾಗೂ ಕೃಷಿ ಪರಿಕರಗಳು ದುಬಾರಿಯಾಗಿದೆ. ಅಭಿವೃದ್ದಿಗೆ ಮಾರಕವಾಗಿರುವ ಭ್ರಷ್ಟ ರಾಜಕಾರಣಿಗಳ ವಿರುದ್ದ ಚಳುವಳಿಗೆ ಮುಂದಾಗಿದ್ದೇವೆ. ರಾಜ್ಯದ 180 ತಾಲ್ಲೂಕುಗಳು ಬರ ಎದುರಿಸುತ್ತಿದ್ದು, ಶೇ.20 ರಿಂದ 30 ರಷ್ಟು ಬಿತ್ತನೆಯಾಗಿದೆ. ಶೇಂಗಾ, ತೊಗರಿ, ಹತ್ತಿ ಬೆಳೆ ನಾಶವಾಗಿದೆ. ಕೃಷಿ ಕಾರ್ಮಿಕರಿಗೆ ಕೆಲಸವಿಲ್ಲ. ಜಾನುವಾರುಗಳಿಗೆ ಮೇವು ನೀರಿನ ಕೊರತೆಯಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಇಷ್ಟೊತ್ತಿಗಾಗಲೆ ಬರಗಾಲವೆಂದು ಘೋಷಿಸಬೇಕಿತ್ತು. ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದೆಹಲಿಯತ್ತ ಮುಖ ಮಾಡಿದ್ದಾರೆ. ರೈತರು ಅನೇಕ ಹೋರಾಟ ಮಾಡುತ್ತಿದ್ದರು ರಸಗೊಬ್ಬರ ಸಮಸ್ಯೆಗೆ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಗೆ 22 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಧಾನಿ ಮೋದಿ ಎಲ್ಲದಕ್ಕೂ ಮೌನ ವಹಿಸುತ್ತಿದ್ದಾರೆಂದು ಆಪಾದಿಸಿದರು.

 

ಬರಗಾಲಕ್ಕೆ ತುತ್ತಾಗಿರುವ ರೈತರಿಗೆ ಸಾಲ ಪಾವತಿಸುವಂತೆ ಬ್ಯಾಂಕ್‍ನವರು ನೋಟಿಸ್ ಕೊಡುತ್ತಿದ್ದಾರೆ. ರೈತರ ಸಾಲ ಮನ್ನ ಆಗಬೇಕು. ಕೇಂದ್ರಕ್ಕೆ ಕಾಂಗ್ರೆಸ್‍ನ್ನು ಟೀಕಿಸುವುದೇ ಕೆಲಸವಾಗಿದೆ. ರಾಜ್ಯ ಸರ್ಕಾರ ಕೇಂದ್ರಕ್ಕೆ ನಿಯೋಗ ಹೊಗಬೇಕು. ಜಿ.ಎಸ್.ಟಿ.ಪಾಲು ಬರುತ್ತಿಲ್ಲ. ರೈತರು, ಕಾರ್ಮಿಕರು, ಮಹಿಳೆಯರು, ಅಲ್ಪಸಂಖ್ಯಾತರು ನಲುಗುತ್ತಿದ್ದಾರೆಂದರು.

 

ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಬಂದ್‍ಗೆ ಕರೆ ನೀಡಿರುವುದಕ್ಕೆ ನಮ್ಮ ನೈತಿಕ ಬೆಂಬಲವಿದೆ. ಬಂದನ್ ಸ್ವರೂಪ ತಿಳಿದುಕೊಂಡು ಖಚಿತ ನಿಲುವು ತೆಗೆದುಕೊಳ್ಳುತ್ತೇವೆ. ಅಶಾಂತಿಯಾಗಬಾರದು. ನೀರಿಗಾಗಿ ಜನಾಂಗೀಯ ಘರ್ಷಣೆ,  ಭಾಷೆ ಭಾಷೆಗಳ ನಡುವೆ ಗಲಾಟೆ ಬೇಡ. ರಾಜ್ಯದಿಂದ ಆಯ್ಕೆಯಾಗಿರುವ ಸಂಸದರಿಗೂ ಜವಾಬ್ದಾರಿಯಿದೆ. ಗಡಿ, ನೆಲ, ಜಲ, ಭಾಷೆಯ ವಿಚಾರ ಬಂದಾಗ ತಮಿಳುನಾಡು ಒಂದಾಗುತ್ತದೆ. ಕೃಷ್ಣ, ಕಾವೇರಿ, ಕಳಸಾ ಭಂಡೂರಿ ಬಗ್ಗೆ ನಿಮ್ಮ ಹೋರಾಟವೇನು ಎಂದು ಜನಪ್ರತಿನಿಧಿಗಳನ್ನು ಪ್ರಶ್ನಿಸಿದರು?

 

ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರವಾಗಿ ಸಂಕಷ್ಟ ಸೂತ್ರ ರಚಿಸಬೇಕು. ರಾಜ್ಯದಲ್ಲಿ ಕೆರೆ ಕಟ್ಟೆ ಬೆಳೆಗಳು ಒಣಗುತ್ತಿವೆ. ನೀರಲ್ಲು ರಾಜಕೀಯ ಬೇಡ. ಎಲ್ಲರೂ ಒಂದೆ ಧ್ವನಿಯಾಗಿ ನಿರ್ಣಯ ಕೈಗೊಳ್ಳಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರನ್ನು ನಿರ್ಲಕ್ಷಿಸಬಾರದು. ಸಂಕಷ್ಟ ಸೂತ್ರಕ್ಕೆ ಸಂಸದರು ಕೇಂದ್ರದ ಮೇಲೆ ಒತ್ತಡ ಹೇರಬೇಕು. ಕೃಷಿ ವಿಶ್ವವಿದ್ಯಾನಿಲಯದಲ್ಲಿನ ಬಿಎಸ್ಸಿ. ಪದವೀಧರರು ಕಷ್ಟದಲ್ಲಿರುವುದರಿಂದ ಸರ್ಕಾರ ಪರೀಕ್ಷೆಯನ್ನು ಮುಂದಕ್ಕೆ ಹಾಕಬೇಕು. ಕಂಬಳದ ಬಗ್ಗೆ ನಮ್ಮ ವಿರೋಧವಿಲ್ಲ. ಆದರೆ ಕಂಬಳವನ್ನು ಮೈಸೂರಿನಲ್ಲಿ ಮಾಡುವುದು ಬೇಡ. ಬಿಡದಿ ಟೌನ್‍ಶಿಪ್ ಬಗ್ಗೆ ನಮ್ಮ ಹೋರಾಟವಿದೆ. ಬೆಂಗಳೂರು ನಗರ ಬೆಳೆದಂತೆ ಕೃಷಿ ಹಾಳಾಗುತ್ತಿದೆ. 9640 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲು ನಾವುಗಳು ಬಿಡುವುದಿಲ್ಲ. ಲಂಗು ಲಗಾಮಿಲ್ಲದೆ ಭೂಸ್ವಾಧೀನವಾಗುತ್ತಿರುವುದಕ್ಕೆ ನಮ್ಮ ವಿರೋಧವಿದೆ ಎಂದು ರಾಜ್ಯ ಸರ್ಕಾರವನ್ನು ಎಚ್ಚರಿಸಿದರು.
ರೈತ ಮುಖಂಡರುಗಳಾದ ವಸಂತಕುಮಾರ್, ಧನಂಜಯ ಹಂಪಯ್ಯನಮಾಳಿಗೆ, ಹೊರಕೇರಪ್ಪ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಕೆ.ಪಿ.ಭೂತಯ್ಯ, ಬಸ್ತಿಹಳ್ಳಿ ಸುರೇಶ್‍ಬಾಬು ಇನ್ನು ಅನೇಕರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now