ಬೆಂಗಳೂರು.ಜುಲೈ.29 : ರಾಜ್ಯದ ಡಿಎಸ್ಸಿಆರ್ಇ 33 ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ರಾಜ್ಯ ಸರ್ಕಾರವು ಸಿಹಿ ಸುದ್ದಿ ನೀಡಿದೆ. ಈ ಘಟಕಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಒಟ್ಟು 626 ಪೊಲೀಸ್ ಸಿಬ್ಬಂದಿಗೆ ಮಾಸಿಕ ‘ಕಷ್ಟ ಪರಿಹಾರ ಭತ್ಯೆ’ಯನ್ನು ಮಂಜೂರು ಮಾಡಿ ಸಮಾಜ ಕಲ್ಯಾಣ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ.
ಆರ್ಥಿಕ ಇಲಾಖೆಯ ಸಹಮತಿಯೊಂದಿಗೆ ಸಮಾಜ ಕಲ್ಯಾಣ ಇಲಾಖೆಯ ಅಧೀನ ಕಾರ್ಯದರ್ಶಿ ಎಲ್. ನರಸಿಂಹಮೂರ್ತಿ ಅವರು ಜುಲೈ 27, 2026 ರಂದು ಈ ಮಹತ್ವದ ಆದೇಶವನ್ನು ಹೊರಡಿಸಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗದವರ ಮೇಲಿನ ದೌರ್ಜನ್ಯ ಪ್ರಕರಣಗಳ ಸೂಕ್ತ ತನಿಖೆ, ನಿಯಂತ್ರಣ ಹಾಗೂ ಸಾಮಾಜಿಕ ನ್ಯಾಯ ಕಾಪಾಡುವ ನಿಟ್ಟಿನಲ್ಲಿ ರಾಜ್ಯದಲ್ಲಿ 33 ಡಿಎಸ್ಸಿಆರ್ಇ ವಿಶೇಷ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗಿದೆ. ಈ ಠಾಣೆಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯು ಸಾಮಾನ್ಯ ಪೊಲೀಸ್ ಠಾಣೆಗಳ ಸಿಬ್ಬಂದಿಯಂತೆಯೇ 24 ಗಂಟೆಗಳ ಕಾಲ ನಿರಂತರ ಸೇವೆಯಲ್ಲಿ ತೊಡಗಿರುತ್ತಾರೆ. ಇವರ ಕೆಲಸದ ಜವಾಬ್ದಾರಿ ಹಾಗೂ ಶ್ರಮವನ್ನು ಪರಿಗಣಿಸಿ, ರಾಜ್ಯದ ಇತರ ಪೊಲೀಸ್ ಘಟಕಗಳಂತೆ ಇವರಿಗೂ ಕಷ್ಟ ಪರಿಹಾರ ಭತ್ಯೆ ನೀಡಬೇಕೆಂಬ ಪ್ರಸ್ತಾವನೆಗೆ ಸರ್ಕಾರ ಈಗ ಅಂತಿಮ ಅನುಮೋದನೆ ನೀಡಿದೆ.
ಹೊಸ ಆದೇಶದ ಅನ್ವಯ ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ ಭತ್ಯೆಯನ್ನು ನಿಗದಿಪಡಿಸಲಾಗಿದೆ. ಒಟ್ಟು 33 ಪೊಲೀಸ್ ಸಬ್-ಇನ್ಸ್ಪೆಕ್ಟರ್ (ಪಿಎಸ್ಐ) ಹುದ್ದೆಗಳಿಗೆ ತಲಾ 2,000 ರೂಪಾಯಿ ಹಾಗೂ 181 ಹೆಡ್ ಕಾನ್ಸ್ಟೇಬಲ್ ಹುದ್ದೆಗಳಿಗೆ ತಲಾ 2,000 ರೂಪಾಯಿಗಳ ಮಾಸಿಕ ಕಷ್ಟ ಪರಿಹಾರ ಭತ್ಯೆ ದೊರೆಯಲಿದೆ. ಅದೇ ರೀತಿ 412 ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಮಾಸಿಕ ತಲಾ 3,000 ರೂಪಾಯಿ ಭತ್ಯೆಯನ್ನು ಮಂಜೂರು ಮಾಡಲಾಗಿದ್ದು, ಒಟ್ಟಾರೆಯಾಗಿ 626 ಸಿಬ್ಬಂದಿಗೆ ಇದರಿಂದ ಆರ್ಥಿಕ ನೆರವು ಸಿಗಲಿದೆ.
ಸಮಾಜದಲ್ಲಿನ ಶೋಷಿತ ಹಾಗೂ ದುರ್ಬಲ ವರ್ಗಗಳ ಹಕ್ಕುಗಳ ರಕ್ಷಣೆ, ದೌರ್ಜನ್ಯ ತಡೆ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಕಾರ್ಯದಲ್ಲಿ ನಿರತರಾಗಿರುವ ಡಿಎಸ್ಸಿಆರ್ಇ ಸಿಬ್ಬಂದಿಯ ಸುದೀರ್ಘ ದಿನಗಳ ಬೇಡಿಕೆಗೆ ಈ ಆದೇಶದ ಮೂಲಕ ಕೊನೆಗೂ ಮನ್ನಣೆ ಸಿಕ್ಕಂತಾಗಿದೆ. ಸರ್ಕಾರದ ಈ ನಿರ್ಧಾರದಿಂದ ಸಿಬ್ಬಂದಿಯ ಕಾರ್ಯಕ್ಷಮತೆ ಮತ್ತು ಉತ್ಸಾಹ ಇನ್ನಷ್ಟು ಹೆಚ್ಚಾಗಲಿದೆ.











