ದೇಶದ ವಿವಿಧ ಭಾಗಗಳಲ್ಲಿ ರೈತರ ಜಮೀನುಗಳಲ್ಲಿ ಚಿನ್ನದ ನಿಕ್ಷೇಪ, ಬೆಳ್ಳಿ ನಾಣ್ಯಗಳು ಅಥವಾ ಪುರಾತನ ನಿಧಿ ಪತ್ತೆಯಾದ ಸುದ್ದಿಗಳು ಆಗಾಗ್ಗೆ ಕೇಳಿಬರುತ್ತವೆ. ಇಂತಹ ಸುದ್ದಿಗಳು ಜನರಲ್ಲಿ ಕುತೂಹಲ ಮೂಡಿಸುವುದು ಸಹಜ. ಆದರೆ, ಒಂದು ಪ್ರಶ್ನೆ ಮಾತ್ರ ಎಲ್ಲರಲ್ಲೂ ಮೂಡುತ್ತದೆ—ಸ್ವಂತ ಜಮೀನಿನಲ್ಲಿ ಚಿನ್ನ ಅಥವಾ ನಿಧಿ ಸಿಕ್ಕರೆ ಅದು ಜಮೀನಿನ ಮಾಲೀಕರದ್ದೇ, ಅಥವಾ ಸರ್ಕಾರದ್ದೇ?
ಭಾರತದ ಕಾನೂನುಗಳ ಪ್ರಕಾರ, ಈ ಪ್ರಶ್ನೆಗೆ ಸ್ಪಷ್ಟ ಉತ್ತರ ಇದೆ.
ನಿಮ್ಮ ಹೆಸರಿನಲ್ಲಿರುವ ಜಮೀನಿನೊಳಗೆ ಚಿನ್ನದ ಖನಿಜ ಅಥವಾ ಇತರೆ ಅಮೂಲ್ಯ ಖನಿಜ ಸಂಪತ್ತು ಪತ್ತೆಯಾದರೂ, ಅದರ ಮೇಲೆ ಜಮೀನಿನ ಮಾಲೀಕರಿಗೆ ನೇರ ಹಕ್ಕು ಇರುವುದಿಲ್ಲ. ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ, 1957 ಪ್ರಕಾರ, ಭೂಮಿಯ ಅಡಿಭಾಗದಲ್ಲಿರುವ ಖನಿಜ ಸಂಪತ್ತಿನ ಮೇಲಿನ ಹಕ್ಕು ಮತ್ತು ನಿಯಂತ್ರಣ ಸರ್ಕಾರಕ್ಕೇ ಸೇರಿದೆ.
ಹೀಗಾಗಿ, ಸ್ವಂತ ಜಮೀನಿನಲ್ಲಿ ಚಿನ್ನ ಸಿಕ್ಕಿದೆ ಎಂದು ಅದನ್ನು ಸ್ವತಃ ಹೊರತೆಗೆದು ಮಾರಾಟ ಮಾಡುವುದು ಕಾನೂನುಬಾಹಿರ.
ಪುರಾತನ ನಿಧಿ ಅಥವಾ ಚಿನ್ನದ ನಾಣ್ಯಗಳು ಸಿಕ್ಕರೆ ಏನು ಮಾಡಬೇಕು?
ಜಮೀನಿನಲ್ಲಿ ಕೆಲಸ ಮಾಡುವಾಗ ಹಳೆಯ ಚಿನ್ನದ ನಾಣ್ಯಗಳು, ಬೆಳ್ಳಿಯ ಆಭರಣಗಳು ಅಥವಾ ಐತಿಹಾಸಿಕ ಮಹತ್ವದ ವಸ್ತುಗಳು ಪತ್ತೆಯಾದರೆ, ತಕ್ಷಣವೇ ಸಂಬಂಧಪಟ್ಟ ಜಿಲ್ಲಾಧಿಕಾರಿ (DC) ಅಥವಾ ಕಂದಾಯ ಇಲಾಖೆಗೆ ಮಾಹಿತಿ ನೀಡಬೇಕು.
ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಆ ವಸ್ತುಗಳ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಪರಿಶೀಲಿಸುತ್ತಾರೆ. ರಾಷ್ಟ್ರೀಯ ಪರಂಪರೆಯ ಭಾಗವೆಂದು ದೃಢಪಟ್ಟರೆ, ಸರ್ಕಾರ ಅವುಗಳನ್ನು ತನ್ನ ಸುಪರ್ದಿಗೆ ಪಡೆದುಕೊಳ್ಳುತ್ತದೆ.
ಪ್ರಾಚ್ಯವಸ್ತುಗಳು ಮತ್ತು ಕಲಾ ಸಂಪತ್ತು ಕಾಯ್ದೆ, 1972 ಪ್ರಕಾರ, 100 ವರ್ಷಕ್ಕಿಂತ ಹೆಚ್ಚು ಹಳೆಯದಾದ ನಾಣ್ಯಗಳು, ಕಲಾಕೃತಿಗಳು ಅಥವಾ ಪುರಾತನ ವಸ್ತುಗಳನ್ನು ಮರೆಮಾಡುವುದು ಅಥವಾ ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುವುದು ಶಿಕ್ಷಾರ್ಹ ಅಪರಾಧವಾಗಿದೆ.
ಜಮೀನು ಸ್ವಾಧೀನವಾದರೆ ಪರಿಹಾರ ಸಿಗುತ್ತದೆಯೇ?
ಒಂದು ವೇಳೆ ಜಮೀನಿನಲ್ಲಿ ದೊಡ್ಡ ಪ್ರಮಾಣದ ಚಿನ್ನದ ನಿಕ್ಷೇಪ ಪತ್ತೆಯಾಗಿ ಸರ್ಕಾರ ಆ ಭೂಮಿಯನ್ನು ಸ್ವಾಧೀನಪಡಿಸಿಕೊಂಡರೆ, ಜಮೀನಿನ ಮಾಲೀಕರಿಗೆ ಕಾನೂನು ಪ್ರಕಾರ ಪರಿಹಾರ ನೀಡಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಬಹುಮಾನವೂ ದೊರೆಯಬಹುದು. ಆದರೆ, ಅದರ ಪ್ರಮಾಣ ಮತ್ತು ಷರತ್ತುಗಳು ಸಂಬಂಧಪಟ್ಟ ರಾಜ್ಯ ಸರ್ಕಾರದ ಭೂಸ್ವಾಧೀನ ನಿಯಮಗಳ ಮೇಲೆ ಅವಲಂಬಿತವಾಗಿರುತ್ತವೆ.ಹೀಗಾಗಿ, ಜಮೀನಿನಲ್ಲಿ ಚಿನ್ನ ಅಥವಾ ಪುರಾತನ ನಿಧಿ ಸಿಕ್ಕರೆ ಅದನ್ನು ವೈಯಕ್ತಿಕವಾಗಿ ಬಳಸುವ ಬದಲು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡುವುದು ಕಾನೂನುಬದ್ಧ ಹಾಗೂ ಸುರಕ್ಷಿತ ಕ್ರಮವಾಗಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.









