ಸುದ್ದಿಒನ್, ಚಿತ್ರದುರ್ಗ, ಜುಲೈ. 12 : ಬಯಲುಸೀಮೆ ಚಿತ್ರದುರ್ಗ ಜಿಲ್ಲೆಗೆ ನೀರು ಹರಿಸಬೇಕೆಂಬ ಚಿಂತನೆಯಲ್ಲಿ ಅಸ್ಥಿತ್ವಕ್ಕೆ ಬಂದು ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ಪ್ರಥಮ ಅಧ್ಯಕ್ಷರಾಗಿದ್ದ ಹೆಚ್.ಹನುಮಂತಪ್ಪ ಅವರ ಅಗಲಿಕೆ ಪ್ರಮುಖವಾಗಿ ಜಿಲ್ಲೆಗೆ ಅತ್ಯಂತ ನಷ್ಟವನ್ನುಂಟು ಮಾಡಿದೆ ಎಂದು ಸಮಿತಿ ಅಧ್ಯಕ್ಷ ಪಿ.ಕೋದಂಡಾಮಯ್ಯ, ಪ್ರಧಾನ ಸಂಚಾಲಕ ಬಂಜಗೆರೆ ಜಯಪ್ರಕಾಶ್ ತಿಳಿಸಿದ್ದಾರೆ.
ರಾಜ್ಯಸಭೆಗೆ ಮೂರು ಬಾರಿ ಸದಸ್ಯರಾಗಿದ್ದ ಹನುಮಂತಪ್ಪ ಸಮಿತಿ ಅಧ್ಯಕ್ಷರಾಗಿ ನಾಲ್ಕೈದು ವರ್ಷಗಳ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ತಮ್ಮದೆ ನೆಲಗಟ್ಟಿನಲ್ಲಿ
ದೆಹಲಿಮಟ್ಟದಲ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವ ಕೆಲಸ ನಿರ್ವಹಿಸುತ್ತಿದ್ದರು. ರಾಜಕೀಯ ಒತ್ತಡದಲ್ಲೂ ಚಿತ್ರದುರ್ಗದಲ್ಲಿ ಸಮಿತಿ ಆಯೋಜಿಸುತ್ತಿದ್ದ ಸಮಾವೇಶ, ಪ್ರತಿಭಟನೆ, ಸಭೆಗಳಲ್ಲಿ ಪಾಲ್ಗೊಂಡು ವಿಷಯ ಮಂಡಿಸುವ ರೀತಿ ಹೋರಾಟ ಸಮಿತಿಗೆ ಬಲ
ತಂದುಕೊಡುತ್ತಿತ್ತು. ಜಾಥಾ, ಸಮಾವೇಶವನ್ನು ಯಶಸ್ವಿಯಾಗಿ ಮುನ್ನಡೆಸುವ ಜೊತೆಗೆ ರಾಜ್ಯ ಮತ್ತು ಕೇಂದ್ರದ ನಾಯಕರುಗಳಿಗೆ ಬಯಲುಸೀಮೆ ಜನರ ಸಂಕಷ್ಟಗಳನ್ನು ಮನದಟ್ಟು ಮಾಡುವ ಕೆಲಸ
ಮಾಡುತ್ತಿದ್ದರು. ಜಿಲ್ಲೆಯನ್ನು ಹಸಿರನ್ನಾಗಿ ಕಾಣಬೇಕೆಂಬ ಮಹಾದಾಸೆ ಹೊಂದಿದ್ದ ಅವರು, ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಇನ್ನಷ್ಟು ತ್ವರಿತಗತಿಯಲ್ಲಿ ಸಾಗಬೇಕೆಂದು ಒತ್ತಾಸೆ ವ್ಯಕ್ತಪಡಿಸುತ್ತಿದ್ದರು. ಇಳಿ ವಯಸ್ಸಿನಲ್ಲೂ ಚಟುವಟಿಕೆಯಿಂದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದ ಅವರ ಜೀವನೋತ್ಸಹ ವಿಸ್ಮಯವಾಗಿತ್ತು. ಸಮಿತಿಯ
ಪ್ರಮುಖರಿಗೆ ಸದಾ ಕಾಲ ಮಾರ್ಗದರ್ಶನ ನೀಡುತ್ತಿದ್ದರು. ಅವರ ನಿಧನದಿಂದ ಜಿಲ್ಲೆಗೆ ತುಂಬಲಾರದ ನಷ್ಟವಾಗಿದೆ.
ಹೋರಾಟ ಸಮಿತಿಯ ಸಂಚಾಲಕರಾಗಿದ್ದ ಜಿ.ಎಸ್.ಉಜ್ಜನಪ್ಪ ಅಗಲಿಕೆಯ ಕೆಲವೇ ದಿನಗಳಲ್ಲಿ
ಹೆಚ್.ಹನುಮಂತಪ್ಪ ನಿಧನ ಆಘಾತ ತಂದಿದೆ. ನಾಡಿನಲ್ಲಿ ಅನಾದಿ ಕಾಲದಿಂದಲೂ ನಡೆದುಬರುತ್ತಿರುವ ಸಾಂಪ್ರಾದಾಯದಂತೆ ಕುಟುಂಬದ ವಿಧಿವಿಧಾನಗಳು, ಧಾರ್ಮಿಕ ಕಾರ್ಯಕಗಳು ಪೂರ್ಣಗೊಂಡು, ಕುಟುಂಬದ ಸದಸ್ಯರು, ಒಡನಾಡಿಗಳ ಮನಸ್ಸು ಹಗುರಗೊಂಡ ಬಳಿಕ ಈ ಇಬ್ಬರು ಮಹನೀಯರ ಸೇವೆ ಸ್ಮರಿಸಲು ಸಮಿತಿ ನೇತೃತ್ವದಲ್ಲಿ ನುಡಿನಮನ ಕಾರ್ಯಕ್ರಮ
ಏರ್ಪಡಿಸಲಾಗುವುದು ಎಂದು ಸಮಿತಿಯ ಸಂಚಾಲಕರಾದ ಚಳ್ಳಕೆರೆ ಬಸವರಾಜ್, ನರೇನಹಳ್ಳಿ
ಅರುಣ್ಕುಮಾರ್, ಜೋಗಿಮಟ್ಟಿ ಮಹೇಶಬಾಬು ತಿಳಿಸಿದ್ದಾರೆ.




