ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜುಲೈ. 12 : ಸರ್ಕಾರ ಶಿಕ್ಷಣಕ್ಕಾಗಿ ಎಲ್ಲಾ ರೀತಿಯ ಅವಕಾಶಗಳನ್ನು ಕೊಟ್ಟಿದೆ ಸದ್ಬಳಕೆ ಮಾಡಿಕೊಂಡು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಿ. ಹೆಚ್ಚಿನ ಅಂಕಗಳನ್ನು ಗಳಿಸುವುದರ ಜೊತೆ ರಾಜಕೀಯ ಪ್ರಭಾವವು ಕೆಲಸ ಮಾಡುತ್ತದೆಂದು ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಾದಿಗ ಸಮಾಜದ ಮಕ್ಕಳಿಗೆ ಕರೆ ನೀಡಿದರು.
ಕರ್ನಾಟಕ ರಾಜ್ಯ ಮಾದಿಗ ನೌಕರರ ಸಂಘ ಜಿಲ್ಲಾ ಶಾಖೆಯಿಂದ ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿ.ಯು.ಸಿ.ಯಲ್ಲಿ ಅತಿ ಹೆಚ್ಚಿನ ಅಂಕಗಳನ್ನು ಗಳಿಸಿರುವ ಮಾದಿಗ ವಿದ್ಯಾರ್ಥಿಗಳಿಗೆ ಮಾದಾರ ಚನ್ನಯ್ಯ ಸಭಾ ಭವನದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.
ಮಾದಿಗ ನೌಕರರು ಮಕ್ಕಳನ್ನು ಉತ್ತೇಜಿಸುವುದಕ್ಕಾಗಿ ಪ್ರತಿ ವರ್ಷವೂ ಪ್ರತಿಭಾ ಪುರಸ್ಕಾರ ಮಾಡಿಕೊಂಡು ಬರುತ್ತಿದ್ದಾರೆ. ಮುಂದಿನ ವರ್ಷದಲ್ಲಿ ಈ ಸಮಾರಂಭ ಅದ್ದೂರಿಯಾಗಿ ನಡೆಯಬೇಕು. ಪರಿಶಿಷ್ಟ ಜಾತಿಗೆ ಸೇರಿದ 101 ಜಾತಿಗಳ ನಡುವೆ ಈಗ ಪೈಪೋಟಿಯಿದೆ. ಜಿಲ್ಲೆಯಾದ್ಯಂತ ಆಯಾ ತಾಲ್ಲೂಕಿನಲ್ಲಿ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಬೇಕೆಂದು ಹೇಳಿದರು.
ನಮ್ಮ ಸಮುದಾಯದ ನಾಯಕರುಗಳನ್ನು ನಾವುಗಳು ಗೌರವಿಸದಿದ್ದರೆ ಬೇರೆ ಯಾರು ಗೌರವಿಸಲು ಸಾಧ್ಯ? ಇಂತಹ ಸಮಾರಂಭಗಳ ಮೂಲಕ ಮಾದಿಗರು ಒಗ್ಗಟ್ಟಾಗಿದ್ದಾರೆನ್ನುವ ಸಂದೇಶ ಸಮಾಜಕ್ಕೆ ತಲುಪಬೇಕು. ಈ ನಿಟ್ಟಿನಲ್ಲಿ ಮಾದಿಗ ನೌಕರರು ಸಮಾಜ ಮುಖಿಯಾಗಿ ಕೆಲಸ ಮಾಡಲಿ. ಏಳು ಬಾರಿ ಸಂಸದರಾಗಿದ್ದ ಕೆ.ಹೆಚ್.ಮುನಿಯಪ್ಪನವರಿಗೆ ಪವರ್ಫುಲ್ ಖಾತೆ ನೀಡಬೇಕಿತ್ತು. ಅದನ್ನು ಬಿಟ್ಟು ಕಳೆದ ಬಾರಿಯಿದ್ದ ಆಹಾರ ಖಾತೆಯನ್ನು ಈ ಸಾರಿಯೂ ವಹಿಸಲಾಗಿದೆ. ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ದೊಡ್ಡ ಖಾತೆಯನ್ನು ನೀಡಬೇಕೆಂದು ಮನವಿ ಮಾಡಿದರು.
ಹಿರಿಯೂರಿನ ಆದಿಜಾಂಬವ ಮಠದ ಷಡಾಕ್ಷರಮುನಿ ಸ್ವಾಮೀಜಿ ಮಾತನಾಡಿ ರಾಜಕೀಯದಲ್ಲಿ ಮೂಲೆ ಗುಂಪು ಮಾಡುವ ದುಷ್ಟಶಕ್ತಿಗಳ ಜೊತೆ ಇರಬೇಡಿ. ಹೊರ ಬಂದು ನಿಮ್ಮ ಸಾಮಥ್ರ್ಯದ ಮೇಲೆ ಬೆಳೆಯಿರಿ. ನಮ್ಮವರನ್ನು ನಾವೆ ಗೌರವಿಸದಿದ್ದರೆ ಬೇರೆ ಯಾರು ಬೆಳೆಸುತ್ತಾರೆ. ಮಾದಿಗ ಸಮಾಜ ಬೀದಿಯಲ್ಲಿರಬಾರದು. ಕೃತಕ ಬುದ್ದಿಮತ್ತೆಯ ಯುಗ ಇದು. ಯುವ ಜನಾಂಗ ದಾರಿ ತಪ್ಪುತ್ತಿದೆ. ಸ್ಪರ್ಧಾತ್ಮಕ ಯುಗದಲ್ಲಿ ಅಂಕಗಳು ಮುಖ್ಯ. ಮಾದಿಗ ಎಂಬ ಕೀಳರಿಮೆ ನಿಮ್ಮಲ್ಲಿ ಬೇಡ. ನಿಮ್ಮ ಅಭಿವೃದ್ದಿ ನಿಮ್ಮ ಕೈಯಲ್ಲಿದೆ. ದೇಶದಲ್ಲಿ ಶೇ.ನಲವತ್ತರಷ್ಟು ಯುವ ಜನಾಂಗವಿದೆ. ಸಮಾಜಘಾತುಕರಾಗುವುದು ಬೇಡ. ಜೀವನದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕಾದರೆ ಶಿಕ್ಷಣ ಮುಖ್ಯ ಎಂದು ಮಾದಿಗ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.




