ದಾವಣಗೆರೆ.ಜುಲೈ.03: ಪ್ರತಿನಿತ್ಯ ಕುಡಿದು ಬಂದು ರಂಪಾಟ ಮಾಡುತ್ತಿದ್ದ ಪತಿಯ ಕಿರುಕುಳ ತಾಳಲಾರದೆ, ಪತ್ನಿಯೇ ಆತನ ತಲೆಗೆ ಕಲ್ಲು ಎತ್ತಿಹಾಕಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಹರಿಹರ ತಾಲೂಕಿನ ಚಿಕ್ಕಬಿದರಿ ಗ್ರಾಮದ ನಿವಾಸಿ ಶಿವಪ್ಪ ಕೊಲೆಯಾದ ದುರ್ದೈವಿ. ಈತ ಪ್ರತಿದಿನ ವಿಪರೀತ ಮದ್ಯಪಾನ ಮಾಡಿ ಮನೆಗೆ ಬಂದು ಪತ್ನಿ ಹಾಗೂ ಕುಟುಂಬಸ್ಥರೊಂದಿಗೆ ತಗಾದೆ ತೆಗೆಯುತ್ತಿದ್ದ ಎನ್ನಲಾಗಿದೆ. ಇದರಿಂದ ಇಡೀ ಕುಟುಂಬ ಮಾನಸಿಕವಾಗಿ ಜರ್ಜರಿತವಾಗಿತ್ತು. ದಿನೇ ದಿನೇ ಹೆಚ್ಚಾಗುತ್ತಿದ್ದ ಶಿವಪ್ಪನ ಕಾಟ ತಾಳಲಾರದೇ ಪತ್ನಿ ಸಾವಿತ್ರಾ, ಶಿವಪ್ಪನ ತಲೆಯ ಮೇಲೆ ಕಲ್ಲು ಜಜ್ಜಿ ಅತ್ಯಂತ ಕ್ರೂರವಾಗಿ ಕೊಂದಿದ್ದಾಳೆ.
ಇನ್ನು ತಾಯಿ ಸಾವಿತ್ರಾ ಪತಿಯನ್ನು ಕೊಲೆ ಮಾಡಿದ ಬಳಿಕ, ವಿಷಯ ಮುಚ್ಚಿಡಲು ಮಗ ಹನುಮೇಗೌಡ ಸಾಥ್ ನೀಡಿದ್ದಾನೆ. ತಂದೆಯ ಶವವನ್ನು ಮನೆಯಿಂದ ಬೇರೆಡೆಗೆ ಸಾಗಿಸಿ ಸಾಕ್ಷ್ಯ ನಾಶಪಡಿಸಲು ತಾಯಿಗೆ ಸಂಪೂರ್ಣವಾಗಿ ಸಹಾಯ ಮಾಡಿದ್ದಾನೆ. ಆದರೆ ಪೊಲೀಸರ ತನಿಖೆ ವೇಳೆ ಇವರಿಬ್ಬರ ಪಾಪದ ಕೃತ್ಯ ಬಯಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸದ್ಯ ಹಂತಕ ಪತ್ನಿ ಸಾವಿತ್ರಾ ಹಾಗೂ ಆಕೆಗೆ ಸಹಕರಿಸಿದ ಮಗ ಹನುಮೇಗೌಡ ಇಬ್ಬರನ್ನೂ ಬಂಧಿಸಿದ್ದಾರೆ.





















