ಚಿತ್ರದುರ್ಗ.ಜೂ.06: ಸಾವಯವ ಕೃಷಿ ಒಂದು ಪರಿಣಾಮಕಾರಿ ಪರ್ಯಾಯ ಮಾರ್ಗವಾಗಿದ್ದು, ಸ್ಥಳೀಯ ಸಂಪನ್ಮೂಲಗಳ ಸಮರ್ಪಕ ಬಳಕೆಯಿಂದ ಕೃಷಿಯಲ್ಲಿ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಲ ಹಾಗೂ ಮುಂದಿನ ಪೀಳಿಗೆಗೆ ಫಲವತ್ತಾದ ಭೂಮಿ ಮತ್ತು ಉತ್ತಮ ಆರೋಗ್ಯಕರ ಪರಿಸರವನ್ನು ಬಿಟ್ಟು ಹೋಗಲು ದಾರಿಯಾಗಿದೆ ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ರಜನೀಕಾಂತ ಹೇಳಿದರು.

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಶುಕ್ರವಾರ ಹಿರಿಯೂರು ತಾಲ್ಲೂಕು ಬಬ್ಬೂರು ಫಾರಂ ಜಿಲ್ಲಾ ಕೃಷಿ ತರಬೇತಿ ಕೇಂದ್ರ, ವತಿಯಿಂದ ಜಿಲ್ಲೆಯ ಆಸಕ್ತ ಕೃಷಿಕರಿಗೆ ಸಾವಯವ ಕೃಷಿ ಮತ್ತು ಜೇನು ಕೃಷಿ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ವರ್ಷ ಜೂನ್ 5 ರಂದು ವಿಶ್ವದಾದ್ಯಂತ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಗುತ್ತದೆ. 1972ರಲ್ಲಿ ವಿಶ್ವಸಂಸ್ಥೆಯು ಪರಿಸರ ಸಂರಕ್ಷಣೆಯ ಮಹತ್ವವನ್ನು ಜನರಲ್ಲಿ ಜಾಗೃತಿಗೊಳಿಸುವ ಉದ್ದೇಶದಿಂದ ಈ ದಿನವನ್ನು ಘೋಷಿಸಿತು. ಪರಿಸರದ ಸಂರಕ್ಷಣೆ, ನೈಸರ್ಗಿಕ ಸಂಪನ್ಮೂಲಗಳ ಸಮರ್ಪಕ ಬಳಕೆ, ಜೀವ ವೈವಿಧ್ಯದ ರಕ್ಷಣೆ ಹಾಗೂ ಸುಸ್ಥಿರ ಅಭಿವೃದ್ಧಿಯ ಕುರಿತು ಜನರಲ್ಲಿ ಅರಿವು ಮೂಡಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ ಎಂದು ರಜಿನಿಕಾಂತ ಹೇಳಿದರು.
ಪ್ರಸ್ತುತ ಹವಾಮಾನ ಬದಲಾವಣೆ, ನೀರಿನ ಕೊರತೆ, ಮಣ್ಣಿನ ಫಲವತ್ತತೆಯ ಕುಸಿತ, ರಾಸಾಯನಿಕಗಳ ಅತಿಯಾದ ಬಳಕೆ ಹಾಗೂ ಪರಿಸರ ಮಾಲಿನ್ಯದಂತಹ ಸಮಸ್ಯೆಗಳು ಕೃಷಿ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. ಈ ಸವಾಲುಗಳನ್ನು ಎದುರಿಸಲು ಪರಿಸರ ಸ್ನೇಹಿ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ.
ನಾವು ಪರಿಸರವನ್ನು ಉಳಿಸಿದರೆ ಪರಿಸರ ನಮ್ಮನ್ನು ಉಳಿಸುತ್ತದೆ. ಕೃಷಿ ಮತ್ತು ಪರಿಸರ ಒಂದಕ್ಕೊಂದು ಪೂರಕವಾಗಿದ್ದು, ಪರಿಸರ ಸ್ನೇಹಿ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಇಂದಿನ ತರಬೇತಿಯಿಂದ ದೊರೆಯುವ ಮಾಹಿತಿಯನ್ನು ತಮ್ಮ ತಮ್ಮ ಕೃಷಿ ಚಟುವಟಿಕೆಗಳಲ್ಲಿ ಅಳವಡಿಸಿಕೊಂಡು ಸುಸ್ಥಿರ ಕೃಷಿಯತ್ತ ಹೆಜ್ಜೆ ಇಡಬೇಕೆಂದರು. ಈ ದಿನ ತರಬೇತಿಯುಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೆ ಕರಿಬೇವಿನ ಗಿಡವನ್ನು ತಮ್ಮ ತಾಕಿನಲ್ಲಿ ನೆಡಲು ಉಚಿತವಾಗಿ ನೀಡಿ, ಕರಿಬೇವು ಕೇವಲ ಅಡುಗೆಯ ರುಚಿ ಮತ್ತು ಪರಿಮಳವನ್ನು ಹೆಚ್ಚಿಸುವ ಎಲೆಯಲ್ಲ, ಇದೊಂದು ಅದ್ಭುತ ಔಷಧೀಯ ಗುಣಗಳನ್ನು ಹೊಂದಿರುವ ಸಸ್ಯವೆಂದರು. ಒಬ್ಬ ವ್ಯಕ್ತಿ ಒಂದು ಮರ ರೀತಿಯಲ್ಲಿ ಅಭಿಯಾನದಡಿ ಗಿಡ ನೆಟ್ಟು ಇತರರಿಗೂ ಸ್ಪೂರ್ತಿಯಾಗಲು ರಜನಿಕಾಂತ ಕರೆ ನೀಡಿದರು.
ಪ್ರಗತಿಪರ ಸಾವಯವ ಕೃಷಿಕರಾದ ಇಂದೂಧರ ಅವರು ತಮ್ಮ ಜಮೀನಿನಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಲ್ಲಿ ಅಳವಡಿಸಿಕೊಂಡ ಸಾವಯವ ಕೃಷಿ ಪದ್ಧತಿಗಳು, ನೀರು ಮತ್ತು ಪೆÇೀಷಕಾಂಶಗಳ ಸಮರ್ಪಕ ನಿರ್ವಹಣೆಗೆ ಹೊದಿಕೆ, ಹಸಿರೆಲೆ ಗೊಬ್ಬರ ಬೆಳೆಗಳು, ಜೀವಾಮೃತ, ಬೀಜಾಮೃತ, ಘನ ಜೀವಾಮೃತ, ಎರೆಜಲ, ಅಮೃತಜಲ ಬಳಕೆ, ಬಹುಬೆಳೆ ಮತ್ತು ಮಿಶ್ರಬೆಳೆ ಪದ್ದತಿಯ ಮಹತ್ವದ ಕುರಿತು ರೈತರಿಗೆ ಮಾಹಿತಿ ನೀಡಿದರು. ಇದರೊಂದಿಗೆ ರೋಗ ಮತ್ತು ಕೀಟಗಳ ನಿರ್ವಹಣೆಗೆ ಬ್ರಹ್ಮಾಸ್ತ್ರ ನೀಮಾಸ್ತ್ರ, ಅಗ್ನಿಹಾಸ್ತ್ರ, ಹುಳಿ ಮಚ್ಚಿಗೆ, ಬಿಲ್ವ ರಸಾಯನ ತಯಾರಿಕೆಯ ಮತ್ತು ಬಳಸುವ ವಿಧಾನವನ್ನು ತಿಳಿಸಿದರು. ನಂತರ ಜೀವಾಮೃತ ತಯಾರಿಸುವ ವಿಧಾನವನ್ನು ರೈತರಿಗೆ ಪ್ರಾತ್ಯಕ್ಷಿಕೆಯ ಮೂಲಕ ಮನವರಿಕೆ ಮಾಡಿ ಕೊಟ್ಟರು.
ಹಿರಿಯೂರಿನ ಪ್ರಗತಿಪರ ಜೇನು ಕೃಷಿಕರಾದ ಶ್ರೀನಿವಾಸ್ ಅವರು ಜೇನು ಕೃಷಿಯ ಮಹತ್ವ, ಜೇನಿನ ಉಪ ಉತ್ಪನ್ನಗಳು ಹಾಗೂ ಜೇನು ಕುಟುಂಬದ ನಿರ್ವಹಣೆ ಕುರಿತು ತಮ್ಮ ಅಮೂಲ್ಯ ಅನುಭವಗಳನ್ನು ಹಂಚಿಕೊಂಡರು.
ಪ್ರಗತಿಪರ ರೈತರಾದ ಚಿತ್ರಲಿಂಗಪ್ಪರವರು ಮಾತನಾಡುತ್ತಾ, ಪರಿಸರ ಸ್ಣೇಹಿ ಕೃಷಿ ಪದ್ದತಿಗಳ ಅಳವಡಿಕೆಯಿಂದ ಪರಿಸರ ಸಮತೋಲನ ಕಾಪಡಲು ಸಹಕಾರಿಯಾಗಲಿದೆಂದರು.

ಸ್ಪೀಚ್ ಸಂಸ್ಥೆಯ ವಿಜಯಕುಮಾರ್ ಮತ್ತು ಶೇಷಣ್ಣ ಇವರು ಕೃಷಿ ಅರಣ್ಯ, ಮಣ್ಣು ಮತ್ತು ನೀರು ಸಂರಕ್ಷಣೆಯ ಮಹತ್ವದ ಕುರಿತು ತಿಳಿಸಿದರು.
ಜಿಲ್ಲಾ ಕೌಶಲ್ಯ ಅಭಿವೃದ್ದಿ ಅಧಿಕಾರಿಗಳಾದ ಮಾರುತಿ ಇವರು ತಮ್ಮ ಜಮೀನಿನಲ್ಲಿ ಅಳವಡಿಸಿಕೊಂಡ ಮರ ಆಧಾರಿತ ಕೃಷಿ ಪದ್ದತಿ ಹಾಗೂ ತಮ್ಮ ಇಲಾಖೆಯ ಯೋಜನೆಗಳ ಕುರಿತು ಮಾಹಿತಿ ನೀಡಿದರು, ಸದರಿ ತರಬೇತಿಯಲ್ಲಿ ಜಿಲ್ಲೆಯ ವಿವಿಧ ಗ್ರಾಮಗಳಿಂದ 72 ಜನ ಆಸಕ್ತ ರೈತ ಬಾಂಧವರು ಭಾಗವಹಿಸಿದ್ದರು.
====================
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.




















