ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರು ಮಾಧ್ಯಮಗಳ ವರ್ತನೆ ಕುರಿತು ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ. ಚಿತ್ರರಂಗದಲ್ಲಿ ಯಾವುದೇ ವಿವಾದ ಅಥವಾ ಸಮಸ್ಯೆ ಉದ್ಭವಿಸಿದಾಗ ತಮ್ಮನ್ನೇ ಪ್ರಶ್ನಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿರುವ ಅವರು, “ಎಲ್ಲ ವಿಷಯಗಳಿಗೂ ನನ್ನನ್ನೇ ಯಾಕೆ ಟಾರ್ಗೆಟ್ ಮಾಡ್ತೀರಾ?” ಎಂದು ಪ್ರಶ್ನಿಸಿದ್ದಾರೆ.ತೆಲುಗಿನ ಬಹು ನಿರೀಕ್ಷಿತ ‘ಪೆದ್ದಿ’ ಚಿತ್ರದಲ್ಲಿ ನಟಿಸಿರುವ ಶಿವರಾಜ್ಕುಮಾರ್, ಚಿತ್ರದ ಪ್ರಚಾರದ ಅಂಗವಾಗಿ ನೀಡಿದ ಸಂದರ್ಶನವೊಂದರಲ್ಲಿ ಈ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸಿನಿಮಾ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಪ್ಯಾನ್ ಇಂಡಿಯಾ ಸಿನಿಮಾಗಳ ಯುಗದಲ್ಲಿ ಎಲ್ಲ ಭಾಷೆಗಳ ಚಿತ್ರಗಳನ್ನು ಗೌರವಿಸುವ ಮನೋಭಾವ ಅಗತ್ಯ ಎಂದು ಹೇಳಿದರು.
“ಪವನ್ ಕಲ್ಯಾಣ್ ಅವರು ಕನ್ನಡ ಸಿನಿಮಾಗಳನ್ನು ಬೆಂಬಲಿಸುತ್ತೇವೆ ಎಂದು ಹೇಳಿದ್ದರು. ಅದೇ ರೀತಿ ನಾವು ಕೂಡ ಇತರ ಭಾಷೆಗಳ ಸಿನಿಮಾಗಳನ್ನು ಬೆಂಬಲಿಸಬೇಕು. ಆದರೆ ಥಿಯೇಟರ್ ಸಮಸ್ಯೆ, ಬಿಡುಗಡೆ ವಿವಾದ ಇಂತಹ ವಿಚಾರಗಳು ನಮ್ಮ ಕೈಯಲ್ಲಿಲ್ಲ. ಅದಕ್ಕಾಗಿ ಫಿಲ್ಮ್ ಚೇಂಬರ್ಗಳಂತಹ ಸಂಸ್ಥೆಗಳಿವೆ. ಅವರು ಮಾತನಾಡಬೇಕು,” ಎಂದು ಹೇಳಿದರು.ಮಾಧ್ಯಮಗಳ ಪ್ರಶ್ನೆಗಳ ಬಗ್ಗೆ ಪ್ರತಿಕ್ರಿಯಿಸಿದ ಶಿವಣ್ಣ, “ನಾವು ಬೆಂಬಲಿಸಿದರೂ ಪ್ರಶ್ನೆ, ವಿರೋಧವಾಗಿ ಮಾತನಾಡಿದರೂ ಪ್ರಶ್ನೆ. ಯಾಕೆ ಪ್ರತಿಯೊಂದು ವಿಚಾರಕ್ಕೂ ನನ್ನನ್ನೇ ಕೇಳಬೇಕು? ನಾನು ಪ್ರಿಂಟ್ ಮೀಡಿಯಾ ಬಗ್ಗೆ ಹೇಳುತ್ತಿಲ್ಲ, ಕೆಲ ಸ್ಯಾಟಲೈಟ್ ಮಾಧ್ಯಮಗಳ ಬಗ್ಗೆ ಹೇಳುತ್ತಿದ್ದೇನೆ. ನಾನು ಯಾವುದಕ್ಕೂ ಹೆದರುವುದಿಲ್ಲ. ಸತ್ಯವನ್ನೇ ಮಾತನಾಡುತ್ತೇನೆ. ನಾನು ತಪ್ಪು ಮಾಡಿದರೆ ದೇವರೇ ನೋಡಿಕೊಳ್ಳುತ್ತಾನೆ,” ಎಂದು ಸ್ಪಷ್ಟಪಡಿಸಿದರು.
ಇತ್ತೀಚಿನ ಕೆಲವು ವಿವಾದಗಳ ಕುರಿತಾಗಿಯೂ ಪರೋಕ್ಷವಾಗಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಯಾರೇನು ಬೇಕಾದರೂ ಪೋಸ್ಟ್ ಮಾಡಬಹುದು. ಅದು ಅವರ ಆಯ್ಕೆ. ಆದರೆ ಚಿತ್ರರಂಗದ ಪ್ರಮುಖ ವಿಚಾರಗಳ ಬಗ್ಗೆ ಸಂಬಂಧಪಟ್ಟ ಸಂಸ್ಥೆಗಳೇ ಅಧಿಕೃತವಾಗಿ ಪ್ರತಿಕ್ರಿಯಿಸಬೇಕು ಎಂದು ಅಭಿಪ್ರಾಯಪಟ್ಟರು.
ಆರೋಗ್ಯ ಸಮಸ್ಯೆಯಿಂದ ಚೇತರಿಸಿಕೊಂಡಿರುವ ಶಿವರಾಜ್ಕುಮಾರ್ ಇದೀಗ ಮತ್ತೆ ಸಿನಿಮಾಗಳಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡದ ‘ಡ್ಯಾಡ್’, ‘ಬೇಲ್’, ‘666 ಆಪರೇಷನ್ ಡ್ರೀಮ್ ಥಿಯೇಟರ್’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದು, ತೆಲುಗಿನ ‘ಪೆದ್ದಿ’ ಮತ್ತು ‘ಗುಮ್ಮಡಿ ನರಸಯ್ಯ’ ಬಯೋಪಿಕ್ಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಅಲ್ಲದೆ ತಮಿಳಿನ ‘ಜೈಲರ್-2’ ಚಿತ್ರದ ಚಿತ್ರೀಕರಣವನ್ನೂ ಪೂರ್ಣಗೊಳಿಸಿದ್ದು, ಹೊಸ ಹೊಸ ಪ್ರಾಜೆಕ್ಟ್ಗಳೊಂದಿಗೆ ಬ್ಯುಸಿಯಾಗಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.



















