ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜೂನ್. 01 : ಗೋವಿನ ದೇಹದಲ್ಲಿ ಕೋಟ್ಯಾನುಕೋಟಿ ದೇವತೆಗಳು ನೆಲೆಸಿದ್ದಾರೆಂಬ ಬಲವಾದ ನಂಬಿಕೆಯಿಟ್ಟುಕೊಂಡು ಹಿಂದೂಗಳು ಅನಾದಿ ಕಾಲದಿಂದಲು ಗೋಮಾತೆ ಎಂದು ಪೂಜಿಸಿಕೊಂಡು ಬರುತ್ತಿರುವ ಹಸುವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸುವಂತೆ ಕರ್ನಾಟಕ ನಾಗರೀಕರ ಹಿತ ರಕ್ಷಣಾ ವೇದಿಕೆಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಹಸು ಕರುವಿನೊಂದಿಗೆ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಮೂಲಕ ದೇಶದ ಪ್ರಧಾನಿ ನರೇಂದ್ರಮೋದಿರವರಿಗೆ ಮನವಿ ಸಲ್ಲಿಸಲಾಯಿತು.
ಜಾತ್ಯತೀತ ದೇಶ ಭಾರತದಲ್ಲಿ ಹಿಂದೂ-ಮುಸ್ಲಿಂರ ನಡುವೆ ಕೊಮು ಸಂಘರ್ಷಗಳಿಗೆ ಕಾರಣವಾಗಿರುವ ಹಲವಾರು ಅಂಶಗಳಲ್ಲಿ ಗೋಹತ್ಯೆ ವಿವಾದವೂ ಅತ್ಯಂತ ಗಂಭೀರವಾದುದು. ಇದನ್ನೆ ಮುಂದಿಟ್ಟುಕೊಂಡು ಪ್ರತಿನಿತ್ಯ ದೇಶದ ಒಂದಿಲ್ಲೊಂದು ಕಡೆ ಕೋಮು ಘರ್ಷಣೆಗಳು, ಹತ್ಯೆಗಳು, ಅಮಾಯಕರನ್ನು ಕಾನೂನು ಕ್ರಮಗಳಿಗೆ ಸಿಲುಕಿಸುತ್ತಿರುವುದು ಸರ್ವೆ ಸಾಮಾನ್ಯವಾಗಿದೆ. ತ್ಯಾಗ ಬಲಿದಾನಗಳ ಸಂಕೇತ ಬಕ್ರಿದ್ ಹಬ್ಬದ ಸಂದರ್ಭದಲ್ಲಂತು ಗೋಹತ್ಯೆ ವಿಚಾರ ವಿವಾದಾತ್ಮಕ ಸ್ವರೂಪವನ್ನು ಪಡೆದುಕೊಂಡು ಕಾನೂನು ವ್ಯವಸ್ಥೆಗೆ ದೊಡ್ಡ ಸವಾಲನ್ನು ಒಡ್ಡುತ್ತಿದೆ. ಇದನ್ನೆ ಲಾಭವನ್ನಾಗಿ ಮಾಡಿಕೊಳ್ಳುತ್ತಿರುವ ಕೆಲವು ಪಟ್ಟಭದ್ರ ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಗೆದ್ದು ಸರ್ಕಾರ ರಚಿಸುವುದನ್ನು ಕಾಣುತ್ತಿದ್ದೇವೆ.
ವೈದ್ದಿಕ ಕಾಲದಿಂದಲೂ ಗೋವನ್ನು ಸಂಪತ್ತು, ಬೆಳಕು, ಬ್ರಹ್ಮವಿದ್ಯೆ ಹಾಗೂ ದುಷ್ಟಶಕ್ತಿಗಳ ನಿವಾರಕನೆಂದು ಪ್ರತಿ ಹಬ್ಬ ಹರಿದಿನಗಳಲ್ಲಿ ಯಜ್ಞಯಾಗಾದಿಗಳಲ್ಲಿ ಹೋಮ ಹವನಗಳಲ್ಲಿ ಹಸುವಿಗೆ ಮೊದಲ ಪ್ರಾಶಸ್ತ್ಯ ನೀಡಲಾಗುತ್ತಿದೆ. ಗೋವಿನ ಹಾಲು, ಮೊಸರು, ತುಪ್ಪ, ಗೋಮೂತ್ರವನ್ನು ಪವಿತ್ರವೆಂದು ಸ್ವೀಕರಿಸಲಾಗುತ್ತಿದೆ. ಗೋಹತ್ಯೆ ಗೋಮಾಂಸ ಸೇವನೆ ಮಹಾಪಾಪ ಮತ್ತು ಪೈಶಾಚಿಕ ಕೃತ್ಯವೆಂಬುದು ಹಿಂದೂಗಳ ಧಾರ್ಮಿಕ ನಂಬಿಕೆಯಾಗಿದೆ.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರ್ನಾಟಕ ನಾಗರೀಕರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಬಿ.ಕೆ.ರಹಮತ್ವುಲ್ಲಾ ಮಾತನಾಡಿ ಮುಸ್ಲಿಂರು, ಕ್ರೈಸ್ತರು, ಇತರೆ ಹಿಂದುಳಿದ ವರ್ಗಗಳಿಗೆ ಗೋಮಾಂಸವು ನೆಚ್ಚಿನ ಆಹಾರವಾಗಿದ್ದು, ಬಹುಸಂಖ್ಯಾತರಾಗಿರುವ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿ ಗೋಹತ್ಯೆ ವಿರುದ್ದ ಪ್ರತಿಭಟನೆ, ಹೋರಾಟಗಳು ಜಾಸ್ತಿಯಾದಾಗ ಆಳುವ ಸರ್ಕಾರಗಳು ಗೋಹತ್ಯೆ ನಿಷೇಧ ಕಾನೂನುಗಳನ್ನು ಜಾರಿಗೆ ತಂದು ಗೋಮಾಂಸ ಬಳಕೆಯ ವಿಚಾರದಲ್ಲಿ ನಿಯಮಗಳನ್ನು ಕಠಿಣಗೊಳಿಸುತ್ತಿರುವುದರಿಂದ ಕೆಲವು ಪಟ್ಟಭದ್ರರು ಗೋಹತ್ಯೆ ವಿಚಾರವನ್ನು ಮುಂದಿಟ್ಟುಕೊಂಡು ಕಾನೂನುಗಳನ್ನು ಕೈಗೆತ್ತಿಕೊಳ್ಳುವ ಮೂಲಕ ದೇಶದಲ್ಲಿ ಅರಾಜಕತೆಯನ್ನುಂಟು ಮಾಡುತ್ತಿದ್ದಾರೆಂದು ಆಪಾದಿಸಿದರು.
ಇವೆಲ್ಲವನ್ನು ಮನಗಂಡು ಮುಸ್ಲಿಂ ಧರ್ಮಗುರುಗಳು ಬಕ್ರಿದ್ ಹಬ್ಬದ ಸಂದರ್ಭದಲ್ಲಿ ದೇಶದ ಏಕತೆ, ಐಕ್ಯತೆ, ಕೋಮು ಸೌಹಾರ್ಧತೆಯನ್ನು ಕಾಪಾಡುವ ಉದ್ದೇಶದಿಂದ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಿರುವುದಕ್ಕೆ ಧ್ವನಿಗೂಡಿಸಿ ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ ಅದಕ್ಕೆ ಸಾಂವಿಧಾನಿಕ ಮನ್ನಣೆಯನ್ನು ನೀಡಬೇಕೆಂದು ಕರ್ನಾಟಕ ನಾಗರೀಕರ ಹಿತರಕ್ಷಣಾ ವೇದಿಕೆ ಒಕ್ಕೊರಲಿನಿಂದ ಆಗ್ರಹಿಸಿದೆ ಎಂದರು.
ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತ ಗೋಮಾಂಸವನ್ನು ಇನ್ನು ಮುಂದೆ ನಾವುಗಳು ಸೇವಿಸುವುದಿಲ್ಲ. ಇದಕ್ಕಾಗಿ ಸಮುದಾಯದಲ್ಲಿ ದೊಡ್ಡ ಜಾಗೃತಿ ಮೂಡಿಸುತ್ತೇವೆ. ಗೋವನ್ನು ರಕ್ಷಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಗೋಮಾತೆಯನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಿ ವಿದೇಶಗಳಿಗೆ ಗೋಮಾಂಸ ರಫ್ತು ಮಾಡುತ್ತಿರುವ ಎಲ್ಲಾ ಕಂಪನಿಗಳ ಪರವಾನಗಿಯನ್ನು ರದ್ದುಗೊಳಿಸಬೇಕು. ಇದರಿಂದ ಕೋಮು ಸೌಹಾರ್ದತೆ ಕಾಪಾಡಿದಂತಾಗುತ್ತದೆಂದು ಬಿ.ಕೆ.ರಹಮತ್ವುಲ್ಲಾ ಒತ್ತಾಯಿಸಿದರು.

ಕರ್ನಾಟಕ ನಾಗರೀಕರ ಹಿತರಕ್ಷಣಾ ವೇದಿಕೆ ಕಾರ್ಯದರ್ಶಿ ಓ.ಪ್ರತಾಪ್ಜೋಗಿ, ವಕೀಲರುಗಳಾದ ಮನ್ಸೂರ್ಭಾಷ, ಮಲ್ಲೇಶಪ್ಪ, ಅಶೋಕ್ಬೆಳಗಟ್ಟ, ರಮೇಶ್, ಶಗುಪ್ತ ಪುಷ್ಪ, ಗಿರೀಶ, ಗುರುಮೂರ್ತಿ, ಪೃಥ್ವಿ, ಬಿ.ಕೆ.ಇರ್ಫಾನುಲ್ಲಾ, ನವಾಜ್, ಸೌಮ್ಯ, ಕೀತಿ, ಎಂ.ಜೆ.ತಿಪ್ಪೇಸ್ವಾಮಿ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.




















