ಸುದ್ದಿಒನ್, ಚಿತ್ರದುರ್ಗ, ಮೇ 18: ನಗರದ ಎಸ್.ಜೆ.ಎಂ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ 2025-26ನೇ ಸಾಲಿನ ಅಂತಿಮ ವರ್ಷದ ಬಿ.ಎ ಐಚ್ಛಿಕ ಕನ್ನಡ ವಿದ್ಯಾರ್ಥಿಗಳು ದಾವಣಗೆರೆ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ್ದ ಆಂಶಿಕ ಕಿರು ಪ್ರಬಂಧಗಳ ಮೌಖಿಕ ಪರೀಕ್ಷೆಯನ್ನು ಇಂದು ಯಶಸ್ವಿಯಾಗಿ ನಡೆಸಲಾಯಿತು.
ಈ ಮೌಖಿಕ ಪರೀಕ್ಷೆಯ ಬಾಹ್ಯ ಮೌಲ್ಯಮಾಪಕರಾಗಿ ಚಿತ್ರದುರ್ಗದ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ಗಾಯಿತ್ರಮ್ಮ ಟಿ. ಅವರು ಆಗಮಿಸಿದ್ದರು. ವಿದ್ಯಾರ್ಥಿಗಳ ಪ್ರಬಂಧಗಳನ್ನು ಮೌಲ್ಯೀಕರಿಸಿ ಮಾತನಾಡಿದ ಅವರು, “ವಿದ್ಯಾರ್ಥಿಗಳು ಅತ್ಯುತ್ತಮವಾದ ಪ್ರಯತ್ನ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ನಿಮ್ಮಿಂದ ಇನ್ನು ಹೆಚ್ಚಿನ ಸಂಶೋಧನಾ ಅಧ್ಯಯನಗಳು ನಡೆಯಲಿ,” ಎಂದು ಆಶಿಸಿ, ವಿದ್ಯಾರ್ಥಿಗಳಿಗೆ ಸೂಕ್ತ ಸಲಹೆಗಳನ್ನು ನೀಡಿದರು.
ಬರವಣಿಗೆಯ ಸ್ಪಷ್ಟತೆಗೆ ಕಿರು ಪ್ರಬಂಧ ಸಹಕಾರಿ: ಡಾ. ರಮೇಶ್ ಕೆ.
ನಂತರ ಡಾ. ರಮೇಶ್ ಕೆ. ಮಾತನಾಡಿ, “ನೀವು ರಚಿಸಿರುವ ಈ ಕಿರು ಪ್ರಬಂಧ ಮುಂದೊಂದು ದಿನ ನಿಮ್ಮ ನೆನಪಿನಲ್ಲಿ ಉಳಿಯುವಂತಹುದಾಗಿದೆ. ಇಂತಹ ಪ್ರಬಂಧಗಳ ರಚನೆಯು ಓದಿನ ಪ್ರಾಥಮಿಕ ಮಾಹಿತಿಯನ್ನು ಒದಗಿಸುವುದರ ಜೊತೆಗೆ ಬರವಣಿಗೆಯಲ್ಲಿ ಸ್ಪಷ್ಟತೆ ಹಾಗೂ ವಿಷಯ ಗ್ರಹಿಕೆಯನ್ನು ಉತ್ತಮಪಡಿಸುತ್ತದೆ. ಯಾವುದೇ ಒಂದು ವಿಷಯದ ಬಗ್ಗೆ ಆಳವಾದ ಜ್ಞಾನ ಪಡೆಯಲು ಮತ್ತು ಮುಂದೆ ಉನ್ನತ ಸಂಶೋಧನೆಗಳನ್ನು ಮಾಡಲು ಇದು ಸಹಕಾರಿಯಾಗಲಿದೆ,” ಎಂದು ಹೇಳುತ್ತಾ ಎಲ್ಲರಿಗೂ ಶುಭ ಹಾರೈಸಿದರು.
ಪೋಷಕರಿಗೆ ಹಾಗೂ ಸಮಾಜಕ್ಕೆ ಕೀರ್ತಿ ತನ್ನಿ: ಪ್ರಾಂಶುಪಾಲರ ಕರೆ
ಕಾಲೇಜಿನ ಪ್ರಾಂಶುಪಾಲರಾದ ಡಾ. ಎಲ್. ಈಶ್ವರಪ್ಪ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, “ನೀವೀಗಾಗಲೇ ಪದವಿ ಶಿಕ್ಷಣದ ಕೊನೆಯ ಮೆಟ್ಟಿಲಲ್ಲಿ ನಿಂತಿದ್ದೀರಿ. ಮುಂದಿನ ದಿನಗಳಲ್ಲಿ ಉನ್ನತ ಶಿಕ್ಷಣವನ್ನು ಪಡೆದು, ಸಮಾಜಕ್ಕೂ ಹಾಗೂ ನಿಮ್ಮ ತಂದೆ-ತಾಯಿಗೂ ಒಳ್ಳೆಯ ಹೆಸರನ್ನು ತರಬೇಕು,” ಎಂದು ಕರೆ ನೀಡಿದರು.
ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಸಿ.ಟಿ. ಜಯಣ್ಣ ಅವರು ಮಾತನಾಡಿ, “ವಿದ್ಯಾರ್ಥಿಗಳು ಈಗಿನಿಂದಲೇ ಅಧ್ಯಯನದ ಶಿಸ್ತನ್ನು ಮೈಗೂಡಿಸಿಕೊಳ್ಳಬೇಕು. ಸಮಾಜದಲ್ಲಿ ಇಂದಿಗೂ ಹಲವು ವಿಷಯಗಳು ಅಧ್ಯಯನಕ್ಕೊಳಪಡದೆ ಅಜ್ಞಾತವಾಗಿಯೇ ಉಳಿದಿವೆ. ಮುಂದಿನ ದಿನಗಳಲ್ಲಿ ಇಂತಹ ನಿರ್ಲಕ್ಷಿತ ಕ್ಷೇತ್ರಗಳ ಬಗ್ಗೆ ನಿಮ್ಮ ಸಂಶೋಧನೆಗಳು ನಡೆದು, ಸಮಾಜಕ್ಕೆ ಬೆಳಕಾಗಲಿ,” ಎಂದು ಆಶಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರಾದ ಡಾ. ಸುಧಾರಾಣಿ ಹಾಗೂ ಡಾ. ಪುಷ್ಪಾ ಕೆ. ಉಪಸ್ಥಿತರಿದ್ದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.












