ಸುದ್ದಿಒನ್,ಬೆಂಗಳೂರು,ಮೇ.16: ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಜನಸಾಮಾನ್ಯರ ಬದುಕು ದುಸ್ತರವಾಗುತ್ತಿದೆ. ಇತ್ತೀಚೆಗಷ್ಟೇ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗಿ ತತ್ತರಿಸಿದ್ದ ಸಾರ್ವಜನಿಕರಿಗೆ, ಇದೀಗ ನಿತ್ಯಬಳಕೆಯ ಅಕ್ಕಿ ಹಾಗೂ ಅಡುಗೆ ಎಣ್ಣೆಯ ಬೆಲೆಯೂ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಮಿತವ್ಯಯದ ಕರೆ ನೀಡಿದ ಬೆನ್ನಲ್ಲೇ ಈ ಬೆಲೆ ಏರಿಕೆ ಕಂಡುಬಂದಿದ್ದು, ಮಧ್ಯಮ ಮತ್ತು ಕೆಳವರ್ಗದ ಜನರು ಜೀವನ ನಿರ್ವಹಣೆಗೆ ಪರದಾಡುವಂತಾಗಿದೆ.
ಮಾರುಕಟ್ಟೆಯಲ್ಲಿ ತೈಲ ದರಗಳ ಏರಿಕೆ ಸರಣಿ ಮುಂದುವರಿದಿದ್ದು, ಪೆಟ್ರೋಲ್ ಮತ್ತು ಡೀಸೆಲ್ ದರಗಳು ಗಮನಾರ್ಹವಾಗಿ ಹೆಚ್ಚಾಗಿವೆ.
ಪೆಟ್ರೋಲ್ ದರ: ಪ್ರತಿ ಲೀಟರ್ಗೆ 3.27 ರೂ. ಏರಿಕೆ.

ಡೀಸೆಲ್ ದರ: ಪ್ರತಿ ಲೀಟರ್ಗೆ 3.12 ರೂ. ನಷ್ಟು ಹೆಚ್ಚಳವಾಗಿದೆ. ಇದು ಸಹಜವಾಗಿಯೇ ಇತರೆ ಸರಕು ಸಾಗಣೆ ವೆಚ್ಚದ ಮೇಲೂ ಪರಿಣಾಮ ಬೀರಿದೆ.
ಗಗನಕ್ಕೇರಿದ ಅಕ್ಕಿ ಬೆಲೆ: ಗ್ರಾಹಕರಿಗೆ ಬಿಸಿ
ಶ್ರೀಲಂಕಾ ಸೇರಿದಂತೆ ವಿದೇಶಗಳಿಗೆ ಭಾರತದಿಂದ ಅಕ್ಕಿ ರಫ್ತು ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ. ಇದರೊಂದಿಗೆ ಪ್ರಸ್ತುತ ಬೇಸಿಗೆ ಸಮಯದಲ್ಲಿ ಭತ್ತದ ಇಳುವರಿಯೂ ಕುಂಠಿತಗೊಂಡಿದೆ. ಈ ಎರಡೂ ಕಾರಣಗಳಿಂದಾಗಿ ಸ್ಥಳೀಯ ಮಾರುಕಟ್ಟೆಯಲ್ಲಿ ಅಕ್ಕಿಯ ತೀವ್ರ ಕೊರತೆ ಎದುರಾಗಿದ್ದು, ಬೆಲೆಗಳು ದಿಢೀರ್ ಏರಿಕೆಯಾಗಿವೆ ಎಂದು ವರ್ತಕರು ತಿಳಿಸಿದ್ದಾರೆ.
ಅಡುಗೆ ಎಣ್ಣೆಯೂ ದುಬಾರಿ!
ಅಕ್ಕಿಯ ಬೆನ್ನಲ್ಲೇ ಅಡುಗೆ ಎಣ್ಣೆಯ ದರವೂ ಸಹ ಏರಿಕೆಯ ಹಾದಿ ಹಿಡಿದಿದೆ. ಸೂರ್ಯಕಾಂತಿ ಎಣ್ಣೆ ಪ್ರತಿ ಲೀಟರ್ಗೆ 2 ರೂ. ನಷ್ಟು ಹೆಚ್ಚಾಗಿದೆ. ಇನ್ನು ಚಿಲ್ಲರೆ ಮಾರುಕಟ್ಟೆ ಮಾತ್ರವಲ್ಲದೆ, ಹೋಲ್ಸೇಲ್ ಮಾರುಕಟ್ಟೆಯಲ್ಲೂ ದೊಡ್ಡ ಪ್ರಮಾಣದ ಟಿನ್ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. 15 ಲೀಟರ್ನ ಅಡುಗೆ ಎಣ್ಣೆಯ ಟಿನ್ ಬೆಲೆ ಬರೋಬ್ಬರಿ 50 ರೂ. ಗಳಷ್ಟು ದುಬಾರಿಯಾಗಿದೆ.















