ಸುದ್ದಿಒನ್,ಛತ್ತೀಸ್ಗಢ,ಮೇ.12: ಛತ್ತೀಸ್ ಗಢದ ಜಾಂಜ್ಗೀರ್-ಚಂಪಾ ಜಿಲ್ಲೆಯ ಘುರ್ಕೋಟ್ ಗ್ರಾಮದಲ್ಲಿ ಕಲ್ಲಂಗಡಿ ಹಣ್ಣು ಸೇವಿಸಿದ ಬೆನ್ನಲ್ಲೇ ವಿಷಾಹಾರ ಸೇವನೆಯ ಲಕ್ಷಣಗಳು ಕಾಣಿಸಿಕೊಂಡು 15 ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಇತರ ಮೂವರು ಮಕ್ಕಳು ತೀವ್ರವಾಗಿ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೃತ ಬಾಲಕನನ್ನು ಪೋಡಿ ದಲ್ಹಾ ಗ್ರಾಮದ ನಿವಾಸಿ ಅಖಿಲೇಶ್ ಧಿವರ (15) ಎಂದು ಗುರುತಿಸಲಾಗಿದೆ. ಅಸ್ವಸ್ಥಗೊಂಡ ಇತರ ಮಕ್ಕಳಾದ ಶ್ರೀ ಧಿವರ (4), ಪಿಂಟು ಧಿವರ (12) ಮತ್ತು ಹಿತೇಶ್ ಧಿವರ (13) ತಮ್ಮ ಸಂಬಂಧಿಕರೊಂದಿಗೆ ಘುರ್ಕೋಟ್ ಗ್ರಾಮದಲ್ಲಿರುವ ಸೋದರಮಾವನ ಮನೆಗೆ ಬಂದಿದ್ದರು.

ಭಾನುವಾರ ಬೆಳಿಗ್ಗೆ ಕತ್ತರಿಸಿಟ್ಟಿದ್ದ ಕಲ್ಲಂಗಡಿ ಹಣ್ಣನ್ನು ಮಕ್ಕಳು ಸಂಜೆ ಸೇವಿಸಿದ್ದಾರೆ ಎನ್ನಲಾಗಿದೆ. ಹಣ್ಣು ತಿಂದ ಕೆಲವೇ ಗಂಟೆಗಳಲ್ಲಿ ಅಖಿಲೇಶ್ಗೆ ವಾಂತಿ, ಭೇದಿ ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ನಂತರ ಉಳಿದ ಮೂವರು ಮಕ್ಕಳಲ್ಲೂ ಇದೇ ರೀತಿಯ ಲಕ್ಷಣಗಳು ಕಂಡುಬಂದಿವೆ.
ಸೋಮವಾರ ಮಕ್ಕಳ ಸ್ಥಿತಿ ಹದಗೆಟ್ಟಾಗ ಕುಟುಂಬಸ್ಥರು ಅವರನ್ನು ಆಂಬ್ಯುಲೆನ್ಸ್ ಮೂಲಕ ಜಿಲ್ಲಾ ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ, ಅಖಿಲೇಶ್ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮೃತಪಟ್ಟಿದ್ದಾನೆ ಎಂದು ಸಿವಿಲ್ ಸರ್ಜನ್ ಡಾ. ಎಸ್. ಕುಜೂರ್ ತಿಳಿಸಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಬೆಳಿಗ್ಗೆ ಕತ್ತರಿಸಿದ್ದ ಹಣ್ಣನ್ನು ಸಂಜೆ ಸೇವಿಸಿದ್ದರಿಂದ ಅದು ಕಲುಷಿತಗೊಂಡಿರುವ ಸಾಧ್ಯತೆಯಿದೆ. ಇದು ವಿಷಾಹಾರ (Food Poisoning) ಸೇವನೆಯ ಪ್ರಕರಣದಂತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ,” ಎಂದು ಡಾ. ಕುಜೂರ್ ಹೇಳಿದ್ದಾರೆ.


















