ಸುದ್ದಿಒನ್,ಕೋಲ್ಕತ್ತಾ,ಮೇ.12: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ವೈಯಕ್ತಿಕ ಸಹಾಯಕ (PA) ಚಂದ್ರನಾಥ್ ರಥ್ ಅವರ ಕೊಲೆ ಪ್ರಕರಣ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ಬಂಗಾಳದ ವಿಶೇಷ ಕಾರ್ಯಪಡೆ (STF), ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿ ಪ್ರಮುಖ ಆರೋಪಿಗಳನ್ನು ಬಂಧಿಸಿದೆ.
ಈ ಕೊಲೆ ಪ್ರಕರಣದಲ್ಲಿ ಮುಖ್ಯ ಶೂಟರ್ ಎಂದು ಶಂಕಿಸಲಾದ ಉತ್ತರ ಪ್ರದೇಶದ ಬಲ್ಲಿಯಾ ಮೂಲದ ರಾಜ್ ಸಿಂಗ್ ಬಂಧನ ಈಗ ತೀವ್ರ ಚರ್ಚೆಗೆ ಕಾರಣವಾಗಿದೆ. ಬಲ್ಲಿಯಾದ ಆನಂದ್ ನಗರದ ನಿವಾಸಿಯಾದ ಈತ ಸ್ಥಳೀಯವಾಗಿ ರಾಜಕೀಯ ಪ್ರಭಾವ ಹೊಂದಿದ್ದು, ಅಖಿಲ ಭಾರತ ಕ್ಷತ್ರಿಯ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂದು ಗುರುತಿಸಿಕೊಂಡಿದ್ದಾನೆ. ಈ ಹಿಂದೆ ಕೂಡ ಶೂಟೌಟ್ ಪ್ರಕರಣವೊಂದರಲ್ಲಿ ಈತನ ಹೆಸರು ಕೇಳಿಬಂದಿತ್ತು.

ಲಕ್ನೋದಲ್ಲಿ ಮದುವೆಯೊಂದಕ್ಕೆ ಹೋಗಿ ಬರುತ್ತಿದ್ದಾಗ ಅಯೋಧ್ಯೆಯಲ್ಲಿ ರಾಜ್ ಸಿಂಗ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದೇ ವೇಳೆ ಬಿಹಾರದ ಬಕ್ಸರ್ನಲ್ಲಿ ಮಯಾಂಕ್ ಮಿಶ್ರಾ ಮತ್ತು ವಿಕ್ಕಿ ಮೌರ್ಯ ಎಂಬುವವರನ್ನು ಬಂಧಿಸಲಾಗಿದೆ. ಈ ಕೊಲೆಯಲ್ಲಿ ಒಟ್ಟು ಎಂಟು ಮಂದಿ ಭಾಗಿಯಾಗಿರುವ ಶಂಕೆಯಿದೆ. ಇನ್ನೊಂದೆಡೆ, ರಾಜ್ ಸಿಂಗ್ ತಾಯಿ ಜಾಮವಂತಿ ಸಿಂಗ್ ತನ್ನ ಮಗನನ್ನು ಈ ಪ್ರಕರಣದಲ್ಲಿ ವಿನಾಕಾರಣ ಸಿಲುಕಿಸಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.ಕೊಲೆ ನಡೆದ ಸಮಯದಲ್ಲಿ ನಾವು ಉತ್ತರ ಪ್ರದೇಶದಲ್ಲೇ ಇದ್ದೆವು. 2026ರ ಮೇ 9ರಂದು ಬೆಳಿಗ್ಗೆ ಅಯೋಧ್ಯೆಯ ದೇವಸ್ಥಾನಕ್ಕೆ ಹೋಗಿದ್ದೆವು ಎಂದು ಅವರು ಅಜಂಗಢ್ ಡಿಐಜಿಗೆ ದೂರು ನೀಡಿದ್ದಾರೆ.
ತನ್ನ ಮಗ ಲಕ್ನೋದಲ್ಲಿ ಮದುವೆಗೆ ಹಾಜರಾಗಿ ಮಾರುಕಟ್ಟೆಯಲ್ಲಿ ಶಾಪಿಂಗ್ ಮಾಡಿರುವ ಬಗ್ಗೆ ಪಕ್ಕಾ ಆಧಾರಗಳಿವೆ ಎಂದು ಜಾಮವಂತಿ ಹೇಳಿದ್ದಾರೆ. ಮೊಬೈಲ್ ಫೋನ್ ಟವರ್ ಲೊಕೇಶನ್ ದಾಖಲೆಗಳನ್ನು ಪರಿಶೀಲಿಸಿದರೆ ಸತ್ಯ ಹೊರಬರುತ್ತದೆ, ನನ್ನ ಮಗನಿಗೆ ನ್ಯಾಯ ಸಿಗಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.


















