ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ರಾಜ್ಯ ಸರ್ಕಾರವು ಯುಗಾದಿ ಹಬ್ಬದ ನಂತರ ಮತ್ತೊಂದು ಭರ್ಜರಿ ಕೊಡುಗೆ ನೀಡಿದೆ. 2024ರ ಪರಿಷ್ಕೃತ ವೇತನ ಶ್ರೇಣಿಯಲ್ಲಿ ವೇತನ ಪಡೆಯುತ್ತಿರುವ ನೌಕರರ ತುಟ್ಟಿಭತ್ಯೆಯನ್ನು (DA) ಶೇಕಡಾ 14.25 ರಿಂದ ಶೇಕಡಾ 15.75 ಕ್ಕೆ ಏರಿಕೆ ಮಾಡಿ ಸರ್ಕಾರ ಇಂದು ಆದೇಶ ಹೊರಡಿಸಿದೆ.
ತುಟ್ಟಿಭತ್ಯೆಯು ಪ್ರಸ್ತುತ ಇರುವ ಶೇ. 14.25 ರಿಂದ ಶೇ. 15.75 ಕ್ಕೆ ಹೆಚ್ಚಳವಾಗಿದೆ. ಈ ಹೆಚ್ಚಳವು ಜನವರಿ 1, 2026 ರಿಂದ ಪೂರ್ವಾನ್ವಯವಾಗುವಂತೆ ಜಾರಿಗೆ ಬರಲಿದೆ. ರಾಜ್ಯ ಸರ್ಕಾರಿ ನೌಕರರು, ಜಿಲ್ಲಾ ಪಂಚಾಯತ್ ಪೂರ್ಣಾವಧಿ ನೌಕರರು, ಪೂರ್ಣಾವಧಿ ವರ್ಕ್ಚಾರ್ಜ್ ನೌಕರರು ಮತ್ತು ಅನುದಾನಿತ ಶಿಕ್ಷಣ ಸಂಸ್ಥೆ ಹಾಗೂ ವಿಶ್ವವಿದ್ಯಾಲಯಗಳ ಪೂರ್ಣಾವಧಿ ನೌಕರರಿಗೆ ಈ ಆದೇಶ ಅನ್ವಯಿಸುತ್ತದೆ.
ರಾಜ್ಯ ಸರ್ಕಾರದ ನಿವೃತ್ತಿ ವೇತನದಾರರು ಮತ್ತು ಕುಟುಂಬ ಪಿಂಚಣಿದಾರರಿಗೂ ಸಹ ಈ ತುಟ್ಟಿಭತ್ಯೆ ಹೆಚ್ಚಳದ ಲಾಭ ದೊರೆಯಲಿದೆ.


ಸರ್ಕಾರದ ಆದೇಶದ ಪ್ರಕಾರ, ಜನವರಿ 2026 ರಿಂದ ಜಾರಿಗೆ ಬರುವ ಈ ಪರಿಷ್ಕೃತ ತುಟ್ಟಿಭತ್ಯೆಯ ಬಾಕಿ ಮೊತ್ತವನ್ನು (Arrears), 2026ರ ಮೇ ತಿಂಗಳ ವೇತನ ಅಥವಾ ಪಿಂಚಣಿ ಬಟವಾಡೆಗಿಂತ ಮೊದಲು ಪಾವತಿಸುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಅಂದರೆ ನೌಕರರು ಮೇ ತಿಂಗಳ ಸಂಬಳದೊಂದಿಗೆ ಈ ಬಾಕಿ ಮೊತ್ತವನ್ನು ನಿರೀಕ್ಷಿಸಬಹುದಾಗಿದೆ.
ಯುಜಿಸಿ/ಎಐಸಿಟಿಇ/ಐಸಿಎಆರ್ ವೇತನ ಶ್ರೇಣಿಯ ನೌಕರರಿಗೆ ಮತ್ತು ನ್ಯಾಯಾಂಗ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಆದೇಶಗಳನ್ನು ಹೊರಡಿಸಲಾಗುವುದು. ತುಟ್ಟಿಭತ್ಯೆಯ ಲೆಕ್ಕಾಚಾರದಲ್ಲಿ 50 ಪೈಸೆಗಿಂತ ಹೆಚ್ಚಿನ ಭಿನ್ನಾಂಕಗಳನ್ನು ಮುಂದಿನ ರೂಪಾಯಿಗೆ ಪೂರ್ಣಗೊಳಿಸಲಾಗುತ್ತದೆ ಮತ್ತು ಅದಕ್ಕಿಂತ ಕಡಿಮೆ ಇರುವುದನ್ನು ಕಡೆಗಣಿಸಲಾಗುತ್ತದೆ. ಈ ಕುರಿತು ಆರ್ಥಿಕ ಇಲಾಖೆಯ ಜಂಟಿ ಕಾರ್ಯದರ್ಶಿಗಳು ಅಧಿಕೃತ ಆದೇಶ ಹೊರಡಿಸಿದ್ದು, ಮುಂದಿನ ಆದೇಶದವರೆಗೆ ಈ ತುಟ್ಟಿಭತ್ಯೆಯನ್ನು ನಗದಾಗಿ ಪಾವತಿಸಲಾಗುವುದು ಎಂದು ತಿಳಿಸಿದ್ದಾರೆ.

















