ಸುದ್ದಿಒನ್,ಬೆಂಗಳೂರು,ಮೇ.09: ರಾಜ್ಯದ ವಿಶೇಷ ಚೇತನ ನಿರುದ್ಯೋಗಿಗಳಿಗೆ ಆಶಾಕಿರಣವಾಗುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಮಹತ್ವದ ಹೆಜ್ಜೆಯನ್ನಿಟ್ಟಿದೆ. ವಿಶೇಷ ಚೇತನರ ಉದ್ಯೋಗಾವಕಾಶ ಮತ್ತು ಕೌಶಲ್ಯಾಭಿವೃದ್ಧಿಗೆ ಆದ್ಯತೆ ನೀಡುವ ಸಲುವಾಗಿ ‘ಆದಿದ್ವಾರ’ (Adidwara) ಎಂಬ ಹೊಸ ಮೊಬೈಲ್ ಅಪ್ಲಿಕೇಶನ್ ಅನ್ನು ಗುರುವಾರ ಲೋಕಾರ್ಪಣೆ ಮಾಡಲಾಗಿದೆ.
ವಿಕಾಸಸೌಧದಲ್ಲಿ ನಡೆದ ಸಮಾರಂಭದಲ್ಲಿ ಕೌಶಲ್ಯಾಭಿವೃದ್ಧಿ, ಜೀವನೋಪಾಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣಪ್ರಕಾಶ್ ಪಾಟೀಲ್ ಅವರು ಅಸಿಸ್ಟೆಕ್ ಫೌಂಡೇಶನ್ (ATF) ಸಹಯೋಗದೊಂದಿಗೆ ಈ ಆಪ್ ಅನ್ನು ಬಿಡುಗಡೆ ಮಾಡಿದರು. ವಿಶೇಷ ಚೇತನರಿಗೆ (PwDs) ಸೂಕ್ತ ಉದ್ಯೋಗ ಮಾಹಿತಿ ನೀಡುವುದು ಮತ್ತು ಅವರ ಕೌಶಲ್ಯವನ್ನು ಜಾಗತಿಕ ಮಟ್ಟಕ್ಕೆ ಏರಿಸುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ.

ಆಗಸ್ಟ್ನಲ್ಲಿ ಬೃಹತ್ ಉದ್ಯೋಗ ಮೇಳ
ಇದೇ ಸಂದರ್ಭದಲ್ಲಿ ಮಾತನಾಡಿದ ಸಚಿವರು, ವಿಶೇಷ ಚೇತನರಿಗಾಗಿ ಮೀಸಲಾದ ಬೃಹತ್ ‘ಉದ್ಯೋಗ ಮೇಳ’ವನ್ನು ಬರುವ ಆಗಸ್ಟ್ ತಿಂಗಳಿನಲ್ಲಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಲಾಗುವುದು ಎಂದು ಘೋಷಿಸಿದರು. ಈ ಉದ್ಯೋಗಮೇಳದಲ್ಲಿ 3,000ಕ್ಕೂ ಹೆಚ್ಚು ವಿಶೇಷ ಚೇತನ ಉದ್ಯೋಗಾಕಾಂಕ್ಷಿಗಳು ಭಾಗವಹಿಸುವ ನಿರೀಕ್ಷೆಯಿದೆ.ಮುಂಬರುವ ಈ ಉದ್ಯೋಗ ಮೇಳದ ಅಧಿಕೃತ ಲೋಗೋವನ್ನು ಸಹ ಕಾರ್ಯಕ್ರಮದಲ್ಲಿ ಅನಾವರಣಗೊಳಿಸಲಾಯಿತು.ವಿಶೇಷ ಚೇತನರಿಗೆ ಆರ್ಥಿಕ ಸ್ವಾವಲಂಬನೆ ಹಾಗೂ ಸಮಾಜದ ಮುಖ್ಯವಾಹಿನಿಗೆ ತರುವುದು.ವಿಶೇಷ ಚೇತನರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅವರಿಗೆ ಸೂಕ್ತ ವೇದಿಕೆ ಕಲ್ಪಿಸುವುದು ನಮ್ಮ ಸರ್ಕಾರದ ಗುರಿ. ‘ಆದಿದ್ವಾರ’ ಆಪ್ ಮೂಲಕ ಅವರಿಗೆ ಅಗತ್ಯವಿರುವ ತರಬೇತಿ ಮತ್ತು ಉದ್ಯೋಗದ ಮಾಹಿತಿಯನ್ನು ಒಂದೇ ಸೂರಿನಡಿ ನೀಡಲಾಗುವುದು,” ಎಂದು ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ತಿಳಿಸಿದರು.

















