ಸುದ್ದಿಒನ್, ಚಿತ್ರದುರ್ಗ, ಮೇ. 08 : ಐವತ್ತು ವರ್ಷಗಳ ಸುದೀರ್ಘ ರಾಜಕೀಯ ಪಣಯವನ್ನು ಕಂಡಿರುವ ರೈತ ನಾಯಕ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಅಭಿಮಾನೋತ್ಸವದ ಮುನ್ನಾ ದಿನ ಶುಕ್ರವಾರ ನಗರದಲ್ಲಿ ಪುರ ಪ್ರವೇಶಿಸುತ್ತಿದ್ದಂತೆಯೇ ವೈಭವೋಪೇತ ಮೆರವಣಿಗೆ ನಡೆಯಿತು.
ದಕ್ಷಿಣ ಭಾರತದಲ್ಲಿಯೆ ಪ್ರಥಮ ಬಾರಿಗೆ ಕರ್ನಾಟಕದಲ್ಲಿ ಕಮಲವನ್ನು ಅರಳಿಸಿದ ಬಿ.ಎಸ್.ಯಡಿಯೂರಪ್ಪನವರು ಬಡವರ ಮನೆಯ ಹೆಣ್ಣು ಮಗುವಿಗೆ ಭಾಗ್ಯಲಕ್ಷಿ ಯೋಜನೆಯನ್ನು ಜಾರಿಗೆ ತಂದು ಮಹಿಳೆಯರ ಸಂಜೀವಿನಿ ಎನಿಸಿಕೊಂಡರು. ರೈತರ ಹೆಸರಿನಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ರೈತ ನಾಯಕನ ಮೆರವಣಿಗೆಯುದ್ದಕ್ಕೂ ಅಲ್ಲಲ್ಲಿ ಪಟಾಕಿಗಳನ್ನು ಸಿಡಿಸಿ ಕುಣಿದು ಕುಪ್ಪಳಿಸಿದ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟುಂತಿತ್ತು.

ಸಂಜೆ ಆರು ಗಂಟೆಗೆ ತಂಪು ಹೊತ್ತಿನಲ್ಲಿ ಕನಕ ವೃತ್ತದಿಂದ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಆರಂಭಗೊಂಡ ಮೆರವಣಿಗೆ ಸಂಗೊಳ್ಳಿರಾಯಣ್ಣ ವೃತ್ತ, ಗಾಂಧಿ ಸರ್ಕಲ್, ಎಸ್.ಬಿ.ಎಂ.ವೃತ್ತ, ಅಂಬೇಡ್ಕರ್ ಪ್ರತಿಮೆ ಮುಂಭಾಗದಿಂದ ಮದಕರಿನಾಯಕನ ಪ್ರತಿಮೆ ಬಳಿ ಮುಕ್ತಾಯಗೊಂಡಿತು.
ಡೊಳ್ಳು, ಉರುಮೆ, ತಮಟೆ, ನಂದಿಕೋಲು, ವೀರಗಾಸೆ, ಗೊರವರ ಕುಣಿತ, ಕಹಳೆ, ಸೋಮನ ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಮೆರವಣಿಗೆಗೆ ಕಳೆ ಕಟ್ಟಿದಂತಿತ್ತು. ತೆರೆದ ವಾಹನದಲ್ಲಿ ವಿರಾಜಮಾನರಾಗಿದ್ದ ಬಿ.ಎಸ್.ಯಡಿಯೂರಪ್ಪನವರು ರಸ್ತೆಯ ಎರಡು ಬದಿಗಳಲ್ಲಿ ನಿಂತಿದ್ದ ಜನತೆಯತ್ತ ಕೈಬೀಸಿ ಅಭಿಮಾನೋತ್ಸವಕ್ಕೆ ಪ್ರತಿಯಾಗಿ ಕೃತಜ್ಞತೆ ಸಲ್ಲಿಸುತ್ತಿದ್ದರು.
ನಾನಾ ಬಗೆಯ ಸ್ಥಬ್ದ ಚಿತ್ರಗಳು ಮೆರವಣಿಗೆಯಲ್ಲಿ ಕಣ್ಮನ ಸೆಳೆಯುತ್ತಿದ್ದವು.
ಬಿಜೆಪಿ.ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಬಿ.ವೈ.ರಾಘವೇಂದ್ರ, ಸಂಸದ ಗೋವಿಂದ ಎಂ.ಕಾರಜೋಳ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಮಾಜಿ ಸಚಿವರುಗಳಾದ ಶ್ರೀರಾಮುಲು, ಜನಾರ್ಧನರೆಡ್ಡಿ, ಬಿ.ಸಿ.ಪಾಟೀಲ್, ಬಿಜೆಪಿ. ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ, ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಲಿಂಗಮೂರ್ತಿ, ಜಿ.ಹೆಚ್.ಮೋಹನ್ಕುಮಾರ್ ಸೇರಿದಂತೆ ಬಿಜೆಪಿ.ಯ ಅನೇಕ ಮುಖಂಡರುಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.


















