ಸುದ್ದಿಒನ್,ಚಿತ್ರದುರ್ಗ,ಮೇ.08: ಕೋಟೆನಾಡು ಚಿತ್ರದುರ್ಗದಲ್ಲಿ ಇಂದು ‘ಬಿಎಸ್ವೈ ಅಭಿಮಾನೋತ್ಸವ’ದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಪುರಪ್ರವೇಶ ಕಾರ್ಯಕ್ರಮವು ಅತ್ಯಂತ ಅದ್ಧೂರಿಯಾಗಿ ಜರುಗಿತು.
Live : ಬಿಎಸ್ವೈ ಅಭಿಮಾನೋತ್ಸವದ ಅಂಗವಾಗಿ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ. ಎಸ್. ಯಡಿಯೂರಪ್ಪ ಅವರ ಪುರಪ್ರವೇಶ
— Vijayendra Yediyurappa (@BYVijayendra) May 8, 2026
ನಗರದ ಕನಕ ವೃತ್ತದಿಂದ ಮದಕರಿ ವೃತ್ತದವರೆಗೆ ನಡೆದ ಈ ಮೆರವಣಿಗೆಯಲ್ಲಿ ಸಾವಿರಾರು ಅಭಿಮಾನಿಗಳು ಮತ್ತು ಕಾರ್ಯಕರ್ತರು ಭಾಗವಹಿಸಿ, ತಮ್ಮ ನೆಚ್ಚಿನ ನಾಯಕನಿಗೆ ಅಭೂತಪೂರ್ವ ಸ್ವಾಗತ ಕೋರಿದರು. ರಸ್ತೆಯುದ್ದಕ್ಕೂ ಹೂಮಳೆಗರೆಯುವ ಮೂಲಕ “ರಾಜಾಹುಲಿ”ಯನ್ನು ಬರಮಾಡಿಕೊಳ್ಳಲಾಯಿತು. ಸ್ತಬ್ಧಚಿತ್ರಗಳು ಮತ್ತು ಕಲಾತಂಡಗಳ ಮೆರವಣಿಗೆ ಯಡಿಯೂರಪ್ಪ ಅವರ ಪುರಪ್ರವೇಶವು ಮೈಸೂರು ದಸರಾವನ್ನು ನೆನಪಿಸುವಂತಿದೆ. ಮೆರವಣಿಗೆಯಲ್ಲಿ ಬಿಎಸ್ವೈ ಅವರ ಸಾಧನೆಗಳನ್ನು ಸಾರುವ ಸ್ತಬ್ಧಚಿತ್ರಗಳು ಜನರ ಗಮನ ಸೆಳೆಯುತ್ತಿವೆ.

ಭಾಗ್ಯಲಕ್ಷ್ಮಿ ಯೋಜನೆ: ಹೆಣ್ಣುಮಕ್ಕಳ ಸಬಲೀಕರಣ ಸಾರುವ ಸ್ತಬ್ಧಚಿತ್ರ.
ಸೈಕಲ್ ವಿತರಣೆ: ವಿದ್ಯಾರ್ಥಿನಿಯರ ಶೈಕ್ಷಣಿಕ ಕ್ರಾಂತಿಯ ಪ್ರತಿಬಿಂಬ.
ಕೃಷಿ ಬಜೆಟ್: ದೇಶದಲ್ಲೇ ಮೊದಲ ಬಾರಿಗೆ ರೈತರಿಗಾಗಿ ಪ್ರತ್ಯೇಕ ಬಜೆಟ್ ಮಂಡಿಸಿದ ಕೀರ್ತಿಯನ್ನು ಸಾರುವ ಕಲಾಕೃತಿಗಳು.
ನಾರಿ ಶಕ್ತಿ ಮತ್ತು ರೈತರ ಗೌರವ ಪೂರ್ಣಕುಂಭ ಸ್ವಾಗತ: ಕನಕ ವೃತ್ತದ ಬಳಿ ಸುಮಾರು 1,000 ಮಹಿಳೆಯರು ಪೂರ್ಣಕುಂಭ ಹೊತ್ತು ಮಾಜಿ ಸಿಎಂ ಅವರಿಗೆ ಮುತ್ತೈದೆ ಗೌರವದೊಂದಿಗೆ ಸ್ವಾಗತ ಕೋರುತ್ತಿದ್ದಾರೆ.
ನೇಗಿಲು ಹಿಡಿದ ರೈತರು: ಸುಮಾರು 2,000ಕ್ಕೂ ಹೆಚ್ಚು ರೈತರು ಕೈಯಲ್ಲಿ ನೇಗಿಲು ಹಿಡಿದು, ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯಲ್ಲಿ ಸಾಗುತ್ತಿರುವುದು ವಿಶೇಷವಾಗಿತ್ತು. ರೈತರಿಂದ ಸಾಂಪ್ರದಾಯಿಕ ‘ರಾಶಿ ಪೂಜೆ’ಯ ಮೂಲಕ ರೈತ ನಾಯಕನಿಗೆ ಗೌರವ ಸಲ್ಲಿಸಲಾಯಿತು.
ಒನಕೆ ಓಬವ್ವನ ಪಡೆಯ ಸಾಲು: ಪ್ರಧಾನಿ ಮೋದಿ ಅವರ ‘ನಾರಿ ಶಕ್ತಿ ವಂದನ್’ ಕಾಯ್ದೆಯ ಗೌರವಾರ್ಥವಾಗಿ 200ಕ್ಕೂ ಹೆಚ್ಚು ಮಹಿಳೆಯರು ಒನಕೆ ಓಬವ್ವನ ವೇಷಧಾರಿಗಳಾಗಿ ಶಿಸ್ತುಬದ್ಧವಾಗಿ ಹೆಜ್ಜೆ ಹಾಕುತ್ತಿದ್ದಾರೆ.
ಪುಷ್ಪಾಲಂಕೃತ ಸಾರೋಟು ಸವಾರಿ ಚಂದ್ರವಳ್ಳಿ ಮೈದಾನದಿಂದ ಆರಂಭವಾದ ಈ ಭವ್ಯ ಮೆರವಣಿಗೆಯಲ್ಲಿ ಯಡಿಯೂರಪ್ಪ ಅವರು ಪುಷ್ಪಾಲಂಕೃತ ಸಾರೋಟಿನಲ್ಲಿ ಕುಳಿತು ಜನರತ್ತ ಕೈಬೀಸುತ್ತಾ ಸಾಗುತ್ತಿದ್ದಾರೆ. 25ಕ್ಕೂ ಹೆಚ್ಚು ವಿವಿಧ ಸಾಂಸ್ಕೃತಿಕ ಹಾಗೂ ಜಾನಪದ ಕಲಾತಂಡಗಳಾದ ಡೊಳ್ಳು ಕುಣಿತ, ವೀರಗಾಸೆ ಮೆರವಣಿಗೆಗೆ ಮತ್ತಷ್ಟು ಮೆರುಗು ನೀಡಿವೆ.



















