ಸುದ್ದಿಒನ್,ಮೇ.08: 15 ವರ್ಷಗಳ ಕಾಲ ಕೂದಲು ಕತ್ತರಿಸದೇ ಇರುವುದು ಸಾಮಾನ್ಯ ವಿಷಯವಲ್ಲ. ಆದರೆ ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಜಿಲ್ಲೆಯ ವ್ಯಕ್ತಿಯೊಬ್ಬರು ರಾಜಕೀಯ ಕಾರಣಕ್ಕಾಗಿ ಇಂತಹದೊಂದು ಕಠಿಣ ಪ್ರತಿಜ್ಞೆ ಮಾಡಿ, ಈಗ ಅದನ್ನು ಪೂರೈಸಿದ್ದಾರೆ.
ಬಂಗಾಳದ ಬಾಮನ್ ಪಾರಾ ಗ್ರಾಮದ ನಿವಾಸಿ ಬನೇಶ್ವರ್ ಬರ್ಮನ್ ಅವರು ಕಳೆದ 15 ವರ್ಷಗಳ ನಂತರ ತಮ್ಮ ಕೂದಲನ್ನು ಕತ್ತರಿಸಿಕೊಂಡಿದ್ದಾರೆ. 2011 ರಲ್ಲಿ ಪಶ್ಚಿಮ ಬಂಗಾಳದಲ್ಲಿ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (TMC) ಅಧಿಕಾರಕ್ಕೆ ಬಂದಾಗ, ಅವರು ಒಂದು ಪ್ರತಿಜ್ಞೆ ಮಾಡಿದ್ದರು: ರಾಜ್ಯದಲ್ಲಿ ತೃಣಮೂಲ ಕಾಂಗ್ರೆಸ್ ಅಧಿಕಾರದಲ್ಲಿ ಇರುವವರೆಗೆ ನಾನು ಕೂದಲು ಕತ್ತರಿಸುವುದಿಲ್ಲ. ಗುರುವಾರದಂದು ನೆರೆಹೊರೆಯವರು ಮತ್ತು ಕುತೂಹಲದಿಂದ ನೆರೆದಿದ್ದ ಜನರ ಸಮ್ಮುಖದಲ್ಲಿ, ಬರ್ಮನ್ ತಮ್ಮ ಮನೆಯ ಬಳಿಯೇ ಕೇಶ ಮುಂಡನ ಮಾಡಿಸಿಕೊಂಡರು.

ಪ್ರತಿಜ್ಞೆಯ ಹಿಂದಿನ ಕಥೆ
ಇಟ್ಟಿಗೆ ಭಟ್ಟಿಯಲ್ಲಿ ವಲಸೆ ಕಾರ್ಮಿಕರಾಗಿ ಕೆಲಸ ಮಾಡುವ ಬರ್ಮನ್ ಅವರು ಈ ಭಾಗದಲ್ಲಿ ಬಿಜೆಪಿ ಬೆಂಬಲಿಗರೆಂದು ಗುರುತಿಸಿಕೊಂಡಿದ್ದಾರೆ. ಸುಮಾರು ಒಂದೂವರೆ ದಶಕದ ಕಾಲ ಅವರು ತಮ್ಮ ಪ್ರತಿಜ್ಞೆಯನ್ನು ಉಳಿಸಿಕೊಂಡು ಬಂದಿದ್ದರು. ತೃಣಮೂಲ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ನಾನು ಕ್ಷೌರದಂಗಡಿಯ ಹೊಸ್ತಿಲನ್ನು ತುಳಿದಿಲ್ಲ ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ.
ಮೇ 4ರಂದು ಚುನಾವಣಾ ಫಲಿತಾಂಶ ಪ್ರಕಟವಾದ ದಿನ ಬೆಳಗ್ಗಿನಿಂದಲೇ ನಾನು ಟಿವಿಯನ್ನೇ ನೋಡುತ್ತಿದ್ದೆ. ಬಿಜೆಪಿ 100 ಸ್ಥಾನಗಳ ಗಡಿ ದಾಟುತ್ತಿದ್ದಂತೆ ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಇಂದು ನಾನು ನಿಜಕ್ಕೂ ತುಂಬಾ ಸಂತೋಷವಾಗಿದ್ದೇನೆ,” ಎಂದು ಬರ್ಮನ್ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಇನ್ನು ಮುಂದೆ ತಾವು ಸಾಮಾನ್ಯ ಜೀವನಕ್ಕೆ ಮರಳುವುದಾಗಿ ತಿಳಿಸಿದ ಅವರು, “ಈಗ ಬಿಜೆಪಿ ಅಧಿಕಾರಕ್ಕೆ ಬಂದಿದೆ, ಹೊಸ ಕೂದಲು ಬೆಳೆಯುತ್ತದೆ. ಇನ್ನು ಮುಂದೆ ನಾನು ಯಾವಾಗ ಬೇಕಾದರೂ ಕೂದಲನ್ನು ಕತ್ತರಿಸಿಕೊಳ್ಳಬಹುದು ಎಂದರು.


















