ಐಪಿಎಲ್ 2026ರಲ್ಲಿ ತನ್ನ ಸ್ಫೋಟಕ ಬ್ಯಾಟಿಂಗ್ ಮೂಲಕ ದೇಶದಾದ್ಯಂತ ಸಂಚಲನ ಮೂಡಿಸಿರುವ ಯುವ ಕ್ರಿಕೆಟ್ ಪ್ರತಿಭೆ ವೈಭವ್ ಸೂರ್ಯವಂಶಿ ಇದೀಗ ಹೊಸ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಮೈದಾನದಲ್ಲಿ ಅದ್ಭುತ ಪ್ರದರ್ಶನ ನೀಡಿ ಅಭಿಮಾನಿಗಳ ಮೆಚ್ಚುಗೆ ಗಳಿಸಿದ್ದ ಈ ಹದಿಹರೆಯದ ಆಟಗಾರನ ವಿರುದ್ಧ ಇದೀಗ “ಬಾಲಕಾರ್ಮಿಕ” ಆರೋಪ ಕೇಳಿಬಂದಿದ್ದು, ರಾಜಸ್ಥಾನ್ ರಾಯಲ್ಸ್ ತಂಡಕ್ಕೂ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
ಕೆಲ ದಿನಗಳಿಂದ ವೈಭವ್ ಸೂರ್ಯವಂಶಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರೀತಿಯ ಆರೋಪಗಳು ಕೇಳಿಬರುತ್ತಿವೆ. ಕೆಲವರು ಅವರನ್ನು “ವೃತ್ತಿಪರವಲ್ಲದ ಆಟಗಾರ” ಎಂದು ಟೀಕಿಸಿದ್ದರೆ, ಮತ್ತೂ ಕೆಲವರು ಅವರ ಬ್ಯಾಟ್ನಲ್ಲಿ ಎಐ ಚಿಪ್ ಬಳಕೆ ಮಾಡಲಾಗಿದೆ ಎಂಬ ವಿಚಿತ್ರ ಆರೋಪಗಳನ್ನೂ ಮಾಡಿದ್ದಾರೆ. ಇದೀಗ ಈ ವಿವಾದ ಮತ್ತೊಂದು ಹಂತ ತಲುಪಿದೆ.ಕರ್ನಾಟಕ ಮೂಲದ ಸಾಮಾಜಿಕ ಕಾರ್ಯಕರ್ತ ಎಂದು ಹೇಳಿಕೊಳ್ಳುವ ಸಿಎಂ ಶಿವಕುಮಾರ್ ನಾಯಕ್ ಎಂಬ ವ್ಯಕ್ತಿ, ವೈಭವ್ ಸೂರ್ಯವಂಶಿ ಹಾಗೂ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. 15 ವರ್ಷದ ಬಾಲಕನನ್ನು ಐಪಿಎಲ್ನಂತಹ ದೊಡ್ಡ ವೇದಿಕೆಯಲ್ಲಿ ಆಡಿಸುವುದು “ಬಾಲಕಾರ್ಮಿಕ ಪದ್ಧತಿ”ಗೆ ಸಮಾನ ಎಂದು ಅವರು ಆರೋಪಿಸಿದ್ದಾರೆ.
ಒಂದು ಕನ್ನಡ ಸುದ್ದಿ ವಾಹಿನಿಯ ಚರ್ಚೆಯಲ್ಲಿ ಮಾತನಾಡಿದ ಶಿವಕುಮಾರ್ ನಾಯಕ್, “ವೈಭವ್ ಕೇವಲ 15 ವರ್ಷದ ಮಗು. ಈ ವಯಸ್ಸಿನಲ್ಲಿ ಓದು ಮತ್ತು ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಆದರೆ ರಾಜಸ್ಥಾನ್ ರಾಯಲ್ಸ್ ಅವನನ್ನು ವೃತ್ತಿಪರ ಕ್ರಿಕೆಟ್ಗೆ ತಳ್ಳುತ್ತಿದೆ. ಇದು ಮಕ್ಕಳ ಶೋಷಣೆ” ಎಂದು ಕಿಡಿಕಾರಿದರು.ಮುಂದುವರಿದು, “ಇದು ಇತರ ಮಕ್ಕಳಿಗೂ ತಪ್ಪು ಸಂದೇಶ ನೀಡುತ್ತದೆ. ಮಕ್ಕಳ ಹಕ್ಕುಗಳು ಮತ್ತು ಬಾಲಕಾರ್ಮಿಕ ಕಾನೂನು ಉಲ್ಲಂಘನೆ ಮಾಡಿದ ಆರೋಪದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ದೂರು ದಾಖಲಿಸುತ್ತೇನೆ” ಎಂದು ಎಚ್ಚರಿಕೆ ನೀಡಿದರು.
ಈ ಹೇಳಿಕೆ ಹೊರಬಿದ್ದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ಶುರುವಾಗಿದೆ. ಅನೇಕ ಕ್ರಿಕೆಟ್ ಅಭಿಮಾನಿಗಳು ಮತ್ತು ನೆಟಿಜನ್ಗಳು ಶಿವಕುಮಾರ್ ನಾಯಕ್ ಹೇಳಿಕೆಯನ್ನು ಟ್ರೋಲ್ ಮಾಡಿದ್ದಾರೆ.“ಸಚಿನ್ ತೆಂಡೂಲ್ಕರ್ 16ನೇ ವಯಸ್ಸಿನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಆಡಿದ್ದರು” ಎಂದು ಕೆಲವರು ನೆನಪಿಸಿದರೆ, “ಕ್ರಿಕೆಟ್ ಅಕಾಡೆಮಿ ಮತ್ತು ಬಾಲಕಾರ್ಮಿಕದ ನಡುವಿನ ವ್ಯತ್ಯಾಸ ಗೊತ್ತಿರಲಿ” ಎಂದು ವ್ಯಂಗ್ಯವಾಡಿದ್ದಾರೆ.
ಇನ್ನೂ ಕೆಲವರು, “ಸಿನಿಮಾ, ಧಾರಾವಾಹಿ, ರಿಯಾಲಿಟಿ ಶೋಗಳಲ್ಲಿ ಬಾಲ ಕಲಾವಿದರು ಭಾಗವಹಿಸುವುದು ಸರಿಯೇ? ಹಾಗಾದರೆ ಕ್ರೀಡೆಯಲ್ಲಿ ಮಾತ್ರ ಸಮಸ್ಯೆ ಯಾಕೆ?” ಎಂದು ಪ್ರಶ್ನೆ ಎತ್ತಿದ್ದಾರೆ.
ಬಿಹಾರದ ಸಮಷ್ಟಿಪುರ ಮೂಲದ ವೈಭವ್ ಸೂರ್ಯವಂಶಿ, ಐಪಿಎಲ್ ಹರಾಜಿನಲ್ಲಿ ಕೇವಲ 13ನೇ ವಯಸ್ಸಿನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದಿಂದ ₹1.10 ಕೋಟಿಗೆ ಖರೀದಿಯಾಗುವ ಮೂಲಕ ಐಪಿಎಲ್ ಇತಿಹಾಸದ ಅತಿ ಕಿರಿಯ ಆಟಗಾರ ಎಂಬ ದಾಖಲೆ ಬರೆದಿದ್ದರು. ಇದೀಗ ಅವರ ಪ್ರತಿಭೆ ದೇಶದ ಗಮನ ಸೆಳೆದಿರುವ ಹೊತ್ತಲ್ಲೇ ಈ ಹೊಸ ವಿವಾದ ಚರ್ಚೆಗೆ ಗ್ರಾಸವಾಗಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.



















