ಸುದ್ದಿಒನ್, ಚಳ್ಳಕೆರೆ, ಏಪ್ರಿಲ್. 30 : ಮಾಗಿ ಉಳುಮೆ (ಬೇಸಿಗೆ ಉಳುಮೆ) ಮುಂಗಾರು ಹಂಗಾಮಿಗೆ ಮುನ್ನ ಭೂಮಿಯನ್ನು ಸಿದ್ಧಪಡಿಸುವ, ಕಳೆ-ಕೀಟ ನಿಯಂತ್ರಿಸುವ ಮತ್ತು ಮಣ್ಣಿನ ಫಲವತ್ತತೆ ಹೆಚ್ಚಿಸುವ ಪ್ರಮುಖ ಪಾರಂಪರಿಕ ಕೃಷಿ ಪದ್ಧತಿಯಾಗಿದೆ ಎಂದು ಕೃಷಿ ಸಹಾಯಕ ನಿರ್ದೇಶಕ ಎಸ್.ಟಿ.ರಮೇಶ ಹೇಳಿದರು.

ತಾಲ್ಲೂಕಿನ ರಾಮಜೋಗಿಹಳ್ಳಿ ಗ್ರಾಮದ ರೈತರ ಜಮೀನಿಗೆ ಭೇಟಿ ನೀಡಿ ರೈತರಿಗೆ ಮಾಗಿ ಉಳುಮೆ ಕುರಿತು ಮಾತನಾಡಿದ ಅವರು ಮುಂಗಾರು ಹಂಗಾಮು ಪ್ರಾರಂಭವಾದ ತಕ್ಷಣವೇ ರೈತರು ತಮ್ಮ ಜಮೀನುಗಳಲ್ಲಿ ಮಾಗಿ ಉಳಿಮೆ ಮಾಡಿಕೊಂಡರೆ ಮಾಗಿ ಉಳಿಮೆಯಿಂದ ಸಾಕಷ್ಟು ಅನುಕೂಲಗಳಿವೆ. ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೆಚ್ಚಿಸಿ, ಮಣ್ಣನ್ನು ಸಡಿಲಗೊಳಿಸಿ ಬೆಳೆಗಳ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಿಸುತ್ತದೆ. ಅಷ್ಟೆ ಅಲ್ಲದೆ ಮಣ್ಣಿನ ಆಳದಲ್ಲಿರುವ ಕಳೆ ಬೇರುಗಳು, ಗರಕೆ ಮತ್ತು ಜೇಕಿನ ಗಡ್ಡೆಗಳು ಬಿಸಿಲಿಗೆ ಒಣಗಿ ನಾಶವಾಗುತ್ತವೆ. ಮತ್ತು ಮಣ್ಣಿನಲ್ಲಿ ಅಡಗಿರುವ ಕೀಟಗಳ ಕೋಶಗಳು ಮತ್ತು ರೋಗಾಣುಗಳು ಸೂರ್ಯನ ತಾಪಕ್ಕೆ ತುತ್ತಾಗಿ ಸಾಯುತ್ತವೆ, ಇದರಿಂದ ಮುಂದಿನ ಬೆಳೆಯ ಮೇಲೆ ಕೀಟಬಾಧೆ ಕಡಿಮೆಯಾಗುತ್ತದೆ.
ಭೂಮಿಯನ್ನು ತಿರುವಿ ಹಾಕುವುದರಿಂದ ಗಾಳಿ ಚೆನ್ನಾಗಿ ಆಡಿ, ಮಣ್ಣಿನ ಭೌತಿಕ, ರಾಸಾಯನಿಕ ಮತ್ತು ಜೈವಿಕ ಗುಣಧರ್ಮಗಳು ಸುಧಾರಿಸುತ್ತವೆ.
ಇಳಿಜಾರಿಗೆ ಅಡ್ಡಲಾಗಿ ಉಳುಮೆ ಮಾಡುವುದರಿಂದ ಮಳೆಗಾಲದಲ್ಲಿ ಮಣ್ಣು ಕೊಚ್ಚಿ ಹೋಗುವುದು ತಪ್ಪುತ್ತದೆ. ಕಟಾವಿನ ನಂತರ ಹೊಲದಲ್ಲಿ ಉಳಿದಿರುವ ಬೆಳೆಯ ತ್ಯಾಜ್ಯಗಳಾ ಒಣ ಹುಲ್ಲು, ಕಡಿ.ಕಸ ಮಣ್ಣಿನಲ್ಲಿ ಕೊಳೆತು ಸಾವಯವ ಗೊಬ್ಬರವಾಗಿ ಪರಿವರ್ತನೆಯಾಗುತ್ತವೆ.
ಮುಂಗಾರಿನ ಬೇಸಾಯಕ್ಕೆ ಭೂಮಿ ಸಿದ್ಧಗೊಳಿಸುವ ‘ಮಾಗಿ ಉಳುಮೆ’ ಪಾರಂಪರಿಕ ಕೃಷಿ ವಿಧಾನ. ಈ ವಿಧಾನ ವೈಜ್ಞಾನಿಕವು ಆಗಿದೆ. ಆದುದರಿಂದ ಮುಂಗಾರ ಮಳೆ ಬಂದ ತಕ್ಷಣವೇ ಮಾಗಿ ಉಳುಮೇ ಮಾಡಿಕೊಳ್ಳುವುದು. ಸೂಕ್ತ ಎಂದು ರೈತರಿಗೆ ಸಂಪೂರ್ಣ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ರಾಮಜೋಗಿಹಳ್ಳಿ ಗ್ರಾಮಸ್ಥರಾದ ಜಯರಾಂರೆಡ್ಡಿ, ಬೀಮರೆಡ್ಡಿ, ಪ್ರಭಾಕರ್ ರೆಡ್ಡಿ, ಮಂಜುನಾಥ ರೆಡ್ಡಿ, ಬಾಲಚಂದ್ರ ರೆಡ್ಡಿ, ಎಂಜಿ.ವೆಂಕಟೇಶ ರೆಡ್ಡಿ, ಪಿಟಿ. ಸಂತೋಶ ,ಪಿ.ರಮೇ ಶ ಡಿ.ರಂಗಪ್ಪ,ಸ್ವಾಮಿ ಎಸ್.ಓ. ಬಸವರಾಜ್ ಸೇರಿದಂತೆ ಕೃಷಿ ಇಲಾಖೆಯ ಸಿಬ್ಬಂದಿಗಳು ಇದ್ದರು.




















