ಬೆಂಗಳೂರು: ಧಾರವಾಡದ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಯೋಗೀಶ್ ಗೌಡ ಕೊ*** ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ವಿನಯ್ ಕುಲಕರ್ಣಿ ಇದೀಗ ಹೈಕೋರ್ಟ್ ಮೊರೆ ಹೋಗಿದ್ದಾರೆ. ಜೀವಾವಧಿ ಶಿಕ್ಷೆಯನ್ನ ಪ್ರಶ್ನಿಸಿ, ಹೈಕೋರ್ಟ್ ಗೆ ಮೇಲ್ಮನವಿಯನ್ನು ಸಲ್ಲಿಸಿದ್ದಾರೆ. ಈ ಅರ್ಜಿಯಲ್ಲಿ ಜಾಮೀನು ಹಾಗೂ ಶಿಕ್ಷೆಗೆ ತಡೆಕೋರಿ ಮಧ್ಯಂತರ ಅರ್ಜಿಯನ್ನ ಸಲ್ಲಿಕೆ ಮಾಡಲಾಗಿದೆ.
ಕೊ*** ಕೇಸಿಗೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ನ್ಯಾಯಾಲಯ ಈಗಾಗಲೇ ಜೀವಾವಧಿ ಶಿಕ್ಷೆ ಪ್ರಕಟಿಸಿ, ತೀರ್ಪನ್ನ ನೀಡಿದೆ. ಹೈಕೋರ್ಟ್ ಗೆ ಅರ್ಜಿ ಸಲ್ಲಿಕೆ ಮಾಡಿರುವ ವಿನಯ್ ಕುಲಕರ್ಣಿ ಅವರು ಜಾಮೀನು ನೀಡಬೇಕೆಂದು ಸಹ ಮನವಿ ಮಾಡಿದ್ದಾರೆ. ಅರ್ಜಿ ಸಲ್ಲಿಕೆ ಹಿನ್ನೆಲೆ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಆಗಿರುವಂತ ತೀರ್ಪಿನ ಆದೇಶದ ಆಧಾರದ ಮೇಲೆ ವಾದ ನಡೆಸಲಾಗುತ್ತದೆ. ಇಲ್ಲಿ ಯಾವುದೇ ರೀತಿಯ ಟ್ರಯಲ್ ನಡೆಯೋದಿಲ್ಲ. ಯಾವ ಕಾರಣಕ್ಕೆ ಜೀವಾವಧಿ ಶಿಕ್ಷೆಯನ್ನ ವಿಧಿಸಲಾಗಿದೆ ಎಂದು ಬರೆದಿರುತ್ತದೆಯೋ ಅದರ ಆಧಾರದ ಮೇಲೆ ವಾದ ಪ್ರತಿವಾದ ನಡೆಯಲಿದೆ. ಅಪರಾಧಿ ಕಡೆ ವಕೀಲರು ಹಾಗೂ ಯೋಗೀಶ್ ಗೌಡ ಪರವಾದ ವಕೀಲರು ಇಬ್ಬರ ಕಡೆಯಿಂದಾನು ವಾದ ಪ್ರತಿವಾದ ನಡೆಯುತ್ತದೆ.
ವಾದ – ಪ್ರತಿವಾದ ಆದ ನಂತರವೇ ತೀರ್ಪನ್ನ ನೀಡಲಾಗುತ್ತದೆ. ಆದರೆ ಮಧ್ಯಂತರ ತೀರ್ಪನ್ನ ಕೊಡಿ ಎಂದು ಕೇಳಿರುವ ಕಾರಣ ಯಾವಾಗ ವಿಚಾರಣೆ ಇರುತ್ತದೆಯೋ ಆಗ ತೀರ್ಮಾನವಾಗಲಿದೆ. 2016ರಲ್ಲಿ ಈ ಕೊ*** ಪ್ರಕರಣ ನಡೆದಿತ್ತು. ಸುಮಾರು ಹತ್ತು ವರ್ಷಗಳ ಕಾಲ ಈ ಕೇಸಿಗೆ ಸಂಬಂಧಿಸಿದಂತೆ ಕೋರ್ಟ್ ನಲ್ಲಿ ವಾದ – ಪ್ರತಿವಾದ ನಡೀತಾ ಇತ್ತು. ಇತ್ತೀಚೆಗಷ್ಟೇ ವಿನಯ್ ಕುಲಕರ್ಣಿ ಸೇರಿದಂತೆ 17 ಜನರಿಗೆ ಜೀವಾವಧಿ ಶಿಕ್ಷೆಯನ್ನ ಜನಪ್ರತಿನಿಧಿಗಳ ನ್ಯಾಯಾಲಯ ವಿಧಿಸಿದೆ.


















