ರಾಯಚೂರು: ಮಂತ್ರಾಲಯ ರಾಯರ ಮಠಕ್ಕೆ ಸಂಬಂಧಿಸಿದ ಆಸ್ತಿಯನ್ನು ಸರ್ವೇ ಮಾಡಲು ಹೋದಾಗ ಸ್ಥಳೀಯರು ವಿರೋಧಿಸಿದ ಘಟನೆ ನಡೆದಿದೆ. ಬಿಚ್ಚಾಲೆ ಗ್ರಾಮದಲ್ಲಿನ ರಾಘವೇಂದ್ರ ಸ್ವಾಮಿಗಳ ಏಕಶಿಲಾ ವೃಂದಾವನದ ಪಕ್ಕದ ಭೂಮಿ ವಿವಾದ ಸಂಬಂಧ ಇಂದು ಅಧಿಕಾರಿಗಳು ಸರ್ವೇ ಮಾಡಲು ಹೋಗಿದ್ದರು. ಈ ವೇಳೆ ಸ್ಥಳೀಯರು ವಿರೋಧಿಸಿದ್ದಾರೆ. ಸ್ಥಳೀಯರ ವಿರೋಧದ ನಡುವೆ ಪೊಲೀಸರು ಹಲವರನ್ನ ವಶಕ್ಕೆ ಪಡೆದಿದ್ದಾರೆ.
ರೈತರು ಮತ್ತು ಸ್ಥಳೀಯರು ಈ ಸರ್ವೇಗೆ ವಿರೋಧ ವ್ಯಕ್ತಪಡಿಸಿದ್ದು, ನೋಟೀಸ್ ನೀಡದೆ ಸರ್ವೇ ಮಾಡುವುದಕ್ಕೆ ವಿರೋಧಿಸಿದ್ದಾರೆ. ನ್ಯಾಯಾಲಯದ ಸೂಚನೆಯಂತೆ ಗ್ರಾಮದ 2 ಎಕರೆ 33 ಗುಂಟೆ ಜಾಗದ ಸರ್ವೆಗೆ ಬಂದ ಅಧಿಕಾರಿಗಳಿಗೆ ಗ್ರಾಮಸ್ಥರು, ಅರ್ಚಕರು, ಸಾಗುವಳಿ ಮಾಡುತ್ತಿರುವ ರೈತರು ವಿರೋಧ ವ್ಯಕ್ತಪಡಿಸಿ ಹೋರಾಟ ಮಾಡಿದರು. ಮಂತ್ರಾಲಯ ಮಠ ರಾಘವೇಂದ್ರ ಸ್ವಾಮಿಗಳ ಚಾರಿತ್ರಿಕ ಸ್ಥಳಗಳ ಅಭಿವೃದ್ಧಿಗಾಗಿ ಜಮೀನು ಮಂಜೂರಿಗಾಗಿ ಸರ್ಕಾರಕ್ಕೆ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಅದರಂತೆ ಸರ್ಕಾರ 2 ಎಕರೆ 33 ಗುಂಟೆ ಜಮೀನನ್ನು ಮಂಜೂರು ಮಾಡಿತ್ತು. ಇದರಿಂದ ಜಪದ ಕಟ್ಟೆ ಬಿಚ್ಚಾಲಿ ಅಪ್ಪಣ್ಣಚಾರ್ಯ ಸೇವಾ ಟ್ರಸ್ಟ್ ನ್ಯಾಯಾಲಯಕ್ಕೆ ರಿಟ್ ಅರ್ಜಿ ಸಲ್ಲಿಸಿತ್ತು.

ನ್ಯಾಯಾಲಯ ಅರ್ಜಿ ವಜಾಗೊಳಿಸಿದ್ದರಿಂದ ಕೋರ್ಟ್ ಸೂಚನೆಯಂತೆ ಅಧಿಕಾರಿಗಳು ಸ್ಥಳ ಸರ್ವೆ ಮಾಡಿ ಮಂತ್ರಾಲಯ ಮಠಕ್ಕೆ ನೀಡಲು ಮುಂದಾಗಿದ್ದಾರೆ. ಈ ವೇಳೆ, ನಮಗೆ ನೋಟಿಸ್ ಕೊಡದೆ ಸರ್ವೆ ಮಾಡಲು ಬಂದಿದ್ದಾರೆ ಎಂದು ಸಾಗುವಳಿದಾರರು, ಗ್ರಾಮಸ್ಥರು, ಅರ್ಚಕರು ವಿರೋಧ ವ್ಯಕ್ತಪಡಿಸಿದ್ದಾರೆ. ಇದಕ್ಕೆ ವಿರೋಧ ಯಾಕೆ ಅಂದ್ರೆ ಸುಮಾರು ವರ್ಷಗಳಿಂದಾನೂ ಇಲ್ಲಿ ಹಲವು ರೈತರು ಸಾಗುವಳಿ ಮಾಡ್ತಿದ್ದಾರೆ.













