ಚಿತ್ರದುರ್ಗ, ಏ. 13 : ಚಳ್ಳಕೆರೆ ತಾಲ್ಲೂಕು, ತಳಕು ಹೋಬಳಿಯ ಗ್ರಾಮವೊಂದರಲ್ಲಿ ಶಿಕ್ಷಕ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಗರ್ಭಪಾತ ಮಾಡಿಸಿರುವ ಕುಕೃತ್ಯಕ್ಕೆ ಸಂಬಂಧಿಸಿದಂತೆ, ಶಿಕ್ಷಕನನ್ನು ನೌಕರಿಯಿಂದ ವಜಾಗೊಳಿಸಿ, ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಫೆವಾರ್ಡ್-ಕೆ. ರಾಜ್ಯ ಸಂಯೋಜಕ ಕೃಷ್ಣಮೂರ್ತಿ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.

ಚಿತ್ರದುರ್ಗದ ವಿ.ಪಿ. ಬಡಾವಣೆಯಲ್ಲಿ ಸಭೆ ನಡೆಸಿದ ಫೆವಾರ್ಡ್-ಕೆ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ರಾಜ್ಯ ಸಂಯೋಜಕ ಕೃಷ್ಣಮೂರ್ತಿ ಅವರು ರಾಜ್ಯದ ಜನತೆ ತಲೆ ತಗ್ಗಿಸುವಂತಹ ಹೀನ ಕೃತ್ಯ ಇದಾಗಿದ್ದು, ಶಾಲಾ ಶಿಕ್ಷಕನನ್ನು ವೃತ್ತಿಯಿಂದ ವಜಾಗೊಳಿಸಿ, ಆತನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆಗೆ ಒತ್ತಾಯಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಇದುವರೆಗೆ ಅತ್ಯಾಚಾರ, ಗರ್ಭಪಾತ ಮಾಡಿಸಿದ ಪ್ರಕರಣದಲ್ಲಿ ಭಾಗಿಯಾಗಿರುವಂತಹ ಶಿಕ್ಷಕರುಗಳ ಸಮಗ್ರ ತನಿಖೆ ನಡೆಸಿ, ಕೇಸು ಅಂತ್ಯಗೊಂಡಿದ್ದರೂ ಸಹ ಪುನರ್ ಆರಂಭಿಸಿ, ಅಂತಹವರನ್ನು ಜೈಲಿಗೆ ಕಳುಹಿಸುವಂತಹ ಕೆಲಸ ಜಿಲ್ಲಾಡಳಿತದ ಕಡೆಯಿಂದ ಆಗಬೇಕು ಎಂದು ಕೃಷ್ಣಮೂರ್ತಿ ಹೇಳಿದರು.
ಈ ಅತ್ಯಾಚಾರ ಮತ್ತು ಗರ್ಭಪಾತ ಪ್ರಕರಣವು ಅಮಾನವೀಯ ಕೃತ್ಯವಾಗಿದ್ದು, ಅಪ್ರಾಪ್ತ ವಯಸ್ಸಿನ ಬಾಲಕಿಯರನ್ನು ಟಾರ್ಗೇಟ್ ಮಾಡಿಕೊಂಡು ಶಿಕ್ಷಕರು ಅತ್ಯಾಚಾರದಂತಹ ಘಟನೆಗಳನ್ನು ಪದೇ ಪದೇ ಮರುಕಳಿಸುವಂತೆ ಮಾಡುತ್ತಿದ್ದು, ಇಂತಹ ಶಿಕ್ಷಕರಿಗೆ ಕಠಿಣ ಕ್ರಮ ಕೈಗೊಂಡರೆ ಇನ್ನೊಮ್ಮೆ ಇಂತಹ ಪ್ರಕರಣಗಳಲ್ಲಿ ಬೇರೆಯವರು ಭಾಗಿಯಾಗದಂತೆ ಎಚ್ಚರಿಕೆ ನೀಡಬಹುದಾಗಿದೆ. ಆದ್ದರಿಂದ ಶಿಕ್ಷಕರ ವಿರುದ್ಧ ಶಿಕ್ಷಣ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಅಧಿಕಾರಿಗಳು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಫೆವಾರ್ಡ್-ಕೆ ರಾಜ್ಯ ಸಂಯೋಜಕ ಕೃಷ್ಣಮೂರ್ತಿ ಆಗ್ರಹಿಸಿದರು.
ಸೂರ್ಯಘರ್: ಕೇಂದ್ರ ಸರ್ಕಾರದ ವಿನೂತನ ಕಾರ್ಯಕ್ರಮವಾಗಿರುವ ಹರ್ಘರ್ ಸೂರ್ಯ ಎಂಬ ವಿನೂತನ ಮತ್ತು ಪರ್ಯಾಯ ಕಾರ್ಯಕ್ರಮವನ್ನು ಕೆಂದ್ರ ಸರ್ಕಾರವು ಜಾರಿ ಮಾಡಿದ್ದು, ಪ್ರತಿಯೊಬ್ಬ ನಾಗರೀಕರು ತಮ್ಮ ನಿವಾಸಗಳ ಮೇಲೆ ಸೋಲಾರ್ ವ್ಯವಸ್ಥೆಯನ್ನು ಮಾಡಿಕೊಳ್ಳುವ ಮೂಲಕ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿಕೊಳ್ಳಬೇಕೆಂದು ಕೃಷ್ಣಮೂರ್ತಿ ತಿಳಿಸಿದರು.
ಫೆವಾರ್ಡ್-ಕೆ ಕರ್ನಾಟಕ ಸಂಘಟನೆಯಿಂದ ಚಿತ್ರದುರ್ಗ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲು ಉದ್ದೇಶಿಸಲಾಗಿದ್ದು, ಸಾಮಾಜಿಕ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ, ಪರಿಹರಿಸುವ ನಿಟ್ಟಿನಲ್ಲಿ ಸಾಮಾಜಿಕ ಕಾರ್ಯಕರ್ತರು ಮುಂದಾಗಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಫೆವಾರ್ಡ್-ಕೆ ಜಿಲ್ಲಾಧ್ಯಕ್ಷ ಬೈಲಪ್ಪ, ಗೌರವಾಧ್ಯಕ್ಷ-ಶೇಷಣ್ಣ, ಬೈಲಮ್ಮ, ತಿಪ್ಪಮ್ಮ, ಹರೀಶ್, ರಾಜಶೇಖರ್, ರೇಣುಕಾ, ಮರಿಪಾಲಯ್ಯ ಮುಂತಾದವರು ಹಾಜರಿದ್ದರು. ಡಿ.ಜಿ.ಫ್ಲೆಕ್ಸ್ ಮುಖ್ಯಸ್ಥರಾದ ಬಿಂಧು ಮತ್ತು ದಾವಣೆಗೆರೆಯ ಮ್ಯಾನೇಜರ್ ಮಂಜುನಾಥ್ ಅವರು ಉಪಸ್ಥಿತರಿದ್ದರು.















