ಬೆಂಗಳೂರು: ಬೇಸಿಗೆ ಶುರುವಾಗಿ ಬಹಳ ದಿನಗಳೇ ಆಗಿವೆ. ಆಗಲೇ ಭೂಮಿ ಮೇಲೆ ಕಾಲಿಟ್ಟರೆ ಬೆಂದು ಹೋಗುವ ಅನುಭವ, ಹೊರಗೆ ಬಂದರೆ ನೆತ್ತಿ ಮೇಲೆ ಸುಡುವ ಸೂರ್ಯ. ಇದರಿಂದ ಅಂತು ಜನ ಸಾಕಷ್ಟು ಬೆಂದಿದ್ದರು. ಜನರ ಬಿಸಿಲಿನ ಬೇಗೆಯ ತಾಪವನ್ನ ಕಂಡ ವರುಣ ರಾಯ ಕೊಂಚ ಸಮಾಧಾನ ಮಾಡೋಣಾ ಅಂತ ಸಿಲಿಕಾನ್ ಸಿಟಿಗೆ ದರ್ಶನ ಕೊಟ್ಟಿದ್ದಾನೆ. ಸಂಜೆ ವೇಳೆಗೆ ಸಿಲಿಕಾನ್ ಸಿಟಿಯಲ್ಲಿ ಸಣ್ಣಗೆಮಳೆ ಬಂದಿದೆ.
ಮೆಜೆಸ್ಟಿಕ್, ಜೆಸಿ ರೋಡ್, ಕಾರ್ಪೋರೇಷನ್, ಕೆ ಆರ್ ಮಾರ್ಕೆಟ್, ಶಾಂತಿ ನಗರ, ಚಾಮರಾಜಪೇಟೆ ಸುತ್ತ ಮುತ್ತ ಮಳೆರಾಯ ತಂಪೆರೆದಿದ್ದಾನೆ. ಈ ಸಮಯಕ್ಕೊಮ್ಮೆ ಮಳೆ ಬರಬೇಕಿತ್ತು. ಮಳೆಯನ್ನ ಕಂಡು ಹಲವರು ನೆಮ್ಮದಿಯ ಉಸಿರು ಬಿಟ್ಟಿದ್ದಾರೆ. ಯುಗಾದಿ ಹಿಂದೆ ಮುಂದೆ ಮಳೆ ಸುರಿಯುವ ವಾಡಿಕೆ ಇದೆ. ಯುಗಾದಿಗೂ ಮುನ್ನ ಕರಗದಂತ ಆಲಿಕಲ್ಲು ಮಳೆಯೇ ಬಂದಿತ್ತು. ಇದೀಗ ತಣ್ಣನೆಯ ಮಳೆ ಸುರಿದಿದೆ.

ಭೂಮಿ ಮೇಲಿನ ಉಷ್ಣಾಂಶ ದಿನೇ ದಿನೇ ಹೆಚ್ಚಾಗ್ತಾ ಇತ್ತು. ಇದರಿಂದ ಜನರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿತ್ತು. ಡಿಹೈಡ್ರೇಷನ್ ಸಮಸ್ಯೆಯಿಂದ ಜನ ಬಳಲುವಂತಾಗುತ್ತಿತ್ತು. ಅದೆಷ್ಟೋ ಜನ ಅನಾರೋಗ್ಯಕ್ಕೆ ಈಡಾಗಿದ್ದರು. ಸದ್ಯ ಮಳೆಯಿಂದ ವಾತಾವರಣ ಕೊಂಚ ತಂಪು ಎನಿಸಿದೆ.












