ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188
ಸುದ್ದಿಒನ್, ಚಳ್ಳಕೆರೆ, ಮಾರ್ಚ್. 28 : ಜಿಲ್ಲೆಯಲ್ಲಿ ಬಿಸಿಲಿನ ತಾಪ ದಿನೇದಿನೇ ಏರಿಕೆಯಾಗುತ್ತಿದ್ದು, ಜನರು ತತ್ತರಿಸುವಂತಾಗಿದೆ. ಬೆಳಗ್ಗೆಯಿಂದಲೇ ಸುಡುಬಿಸಿಲು ಕಾಡುತ್ತಿದ್ದು, ಸಂಜೆ ವೇಳೆಯಲ್ಲಿಯೂ ಉಷ್ಣತೆ ಕಡಿಮೆಯಾಗದೆ ಜನರನ್ನು ಹೈರಾಣಾಗುವಂತೆ ಮಾಡುತ್ತಿದೆ.ಇಂತಹ ತಾಪಮಾನ ಹೆಚ್ಚಳದ ನಡುವೆಯಲ್ಲಿ, ಬೇಸಿಗೆಯಲ್ಲಿ ದಾಹ ತಣಿಸಲು ಜನರು ಸಾಮಾನ್ಯವಾಗಿ ಎಳನೀರು, ಕಬ್ಬಿನ ಹಾಲು, ಹಣ್ಣಿನ ಜ್ಯೂಸ್ಗಳನ್ನು ಅವಲಂಬಿಸುವರು. ಆದರೆ ಈ ಬಾರಿ ತಾಳೆಹಣ್ಣು (ಐಸ್ ಆ್ಯಪಲ್)ಗೆ ವಿಶೇಷ ಬೇಡಿಕೆ ಹೆಚ್ಚಾಗಿದೆ.

ಚಳ್ಳಕೆರೆ ನಗರದಲ್ಲಿ ತಾಳೆಹಣ್ಣಿನ ಮಾರಾಟ ಜೋರಾಗಿದ್ದು, ಬಿಸಿಲಿನ ತಾಪದಿಂದ ಬಳಲುತ್ತಿರುವ ಜನರು ಈ ಹಣ್ಣಿನ ಮೊರೆ ಹೋಗುತ್ತಿದ್ದಾರೆ. ದೇಹಕ್ಕೆ ತಂಪು ನೀಡುವ ಗುಣ ಹೊಂದಿರುವ ಈ ಹಣ್ಣು ಬೇಸಿಗೆಯಲ್ಲಿ ಅತ್ಯುತ್ತಮ ಪ್ರಕೃತಿ ದತ್ತ ಪಾನೀಯವೆಂದು ಪರಿಗಣಿಸಲಾಗಿದೆ.
ತಾಳೆಹಣ್ಣು ನೋಡಲು ಎಳನೀರಿನ ತಿರುಳಿನಂತಿದ್ದು, ಲಿಚ್ಚಿ ಹಣ್ಣಿನಂತೆ ಮೃದುವಾದ ತಳಿರು ಹೊಂದಿರುತ್ತದೆ. ಇದು ದೇಹವನ್ನು ಹೈಡ್ರೇಟ್ ಆಗಿರಿಸಲು ಸಹಾಯ ಮಾಡುತ್ತಿದ್ದು, ಕಬ್ಬಿಣಾಂಶ, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಹಾಗೂ ವಿಟಮಿನ್ ಬಿ ಸೇರಿದಂತೆ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ.
ಆರೋಗ್ಯದ ದೃಷ್ಟಿಯಿಂದಲೂ ತಾಳೆಹಣ್ಣು ಮಹತ್ವದ್ದಾಗಿದ್ದು, ಹೊಟ್ಟೆಯ ಉರಿ, ಅಜೀರ್ಣ, ಮಲಬದ್ಧತೆ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಕಾರಿ. ಕಡಿಮೆ ಕ್ಯಾಲೊರಿ ಹೊಂದಿರುವುದರಿಂದ ತೂಕ ಇಳಿಸಿಕೊಳ್ಳುವವರಿಗೆ ಇದು ಉತ್ತಮ ಆಹಾರವಾಗಿದೆ. ಜೊತೆಗೆ ತ್ವಚೆಯ ಆರೈಕೆಯಲ್ಲೂ ಸಹಾಯಕವಾಗಿದ್ದು, ಮೊಡವೆ ಮತ್ತು ಉರಿಯೂತವನ್ನು ತಗ್ಗಿಸುವ ಗುಣ ಹೊಂದಿದೆ.ಸಾಮಾನ್ಯವಾಗಿ ಆಂಧ್ರಪ್ರದೇಶ ಗಡಿ ಭಾಗಗಳಲ್ಲಿ ದೊರೆಯುವ ಈ ಹಣ್ಣುಗಳನ್ನು ವ್ಯಾಪಾರಿಗಳು ಮರದ ಸಮೇತ ಖರೀದಿಸಿ ಈ ಸೀಸನ್ಗೆ ನಗರಕ್ಕೆ ತರಲಾಗುತ್ತಿದೆ.
ಪ್ರಸ್ತುತ ಒಂದು ತಾಳೆಹಣ್ಣು ರೂ.40 ದರದಲ್ಲಿ ಮಾರಾಟವಾಗುತ್ತಿದ್ದು, ಇದರ ಆರೋಗ್ಯ ಪ್ರಯೋಜನಗಳ ಬಗ್ಗೆ ಅರಿವು ಹೊಂದಿದ ಜನರು ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಮಾಡುತ್ತಿದ್ದಾರೆ. ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳಲು ಜನರು ತಾಳೆಹಣ್ಣಿನತ್ತ ಮುಖ ಮಾಡುತ್ತಿರುವುದು ಕಂಡುಬರುತ್ತಿದ್ದು, ಬೇಸಿಗೆಯ ಈ ಹಣ್ಣು ಇದೀಗ ಜನಪ್ರಿಯತೆಯ ಶಿಖರಕ್ಕೇರಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.









