ಇರಾನ್ – ಇಸ್ರೇಲ್ ಯುದ್ಧದಿಂದಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪೆಟ್ರೋಲ್ – ಡಿಸೇಲ್ ದರ ಏರಿಕೆಯಾಗಿದೆ. ಇದರಿಂದ ಕರ್ನಾಟಕದ ಜನರು ಕೂಡ ಆತಂಕದಲ್ಲಿದ್ದಾರೆ. ಇಲ್ಲಿಯೂ ಬೆಲೆ ಏರಿಕೆಯಾಗುತ್ತೆ ಎಂಬ ಆತಂಕದಲ್ಲಿದ್ದಾರೆ. ಆದ್ರೆ ಆ ರೀತಿಯ ಆತಂಕ ಬೇಡ ಎಂಬ ಅಭಯವನ್ನು ಕೇಂದ್ರ ಸರ್ಕಾರ ನೀಡಿದೆ. ಕಾರಣ ರಷ್ಯಾದಿಂದ ತೈಲ ಖರೀದಿ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.
ಈ ಮನವಿಯನ್ನು ಭಾರತಕ್ಕೆ ಅಮೆರಿಕಾನೇ ಮಾಡಿದೆ ಎನ್ನಲಾಗಿದೆ. ನಿನ್ನೆಯಷ್ಟೇ ರಷ್ಯಾದಿಂದ ತೈಲ ಖರೀದಿ ಮಾಡಲು ಭಾರತಕ್ಕೆ ಅಮೆರಿಕಾ 30 ದಿನಗಳ ವಿನಾಯಿತಿಯನ್ನು ನೀಡಿದೆ. ಇಲ್ಲಿ ನಾವೂ ರಷ್ಯಾದಿಂದ ದುಡ್ಡು ಕೊಟ್ಟು ಖರೀದಿಸಲು ದೊಡ್ಡಣ್ಣ ಎಂಬ ದೊಣ್ಣೆ ನಾಯಕನ ಅಪ್ಪಣೆ ಬೇಕಾ ಎಂಬ ಆಕ್ರೋಶವೂ ಹೆಚ್ಚಾಗಿದೆ. ಈ ರೀತಿಯ ಆಕ್ರೋಶದ ಬೆನ್ನಲ್ಲೇ ಕೇಂದ್ರ ಸರ್ಕಾರ ಕೂಡ ಸ್ಪಷ್ಟನೆ ನೀಡಿದ್ದು, ತೈಲ ಖರೀದಿ ಮಾಡುವುದಕ್ಕೆ ನಮಗೆ ಯಾರ ಅಪ್ಪಣೆಯೂ ಬೇಕಿಲ್ಲ ಎಂದಿದೆ.
ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯಿಂದ ಕಡಿಮೆ ದರದಲ್ಲಿ ಲಭ್ಯವಿರುವ ಕಡೆ ಭಾರತ ತೈಲ ಖರೀದಿಸುತ್ತದೆ ಎಂದಿದೆ. ಭಾರತದಲ್ಲಿ ಸಾಕಷ್ಟು ಇಂಧನ ಸಂಗ್ರಹವಿದೆ. ಪೂರೈಕೆ ಮತ್ತು ವಿತರಣಾ ಜಾಲ ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ದೇಶದಾದ್ಯಂತ ನಿರಂತರ ಇಂಧನ ಪೂರೈಕೆಯನ್ನು ನಿರ್ವಹಿಸಲು ಇಂಡಿಯನ್ ಆಯಿಲ್ ಬದ್ಧವಾಗಿದೆ. ದೇಶದ ಜನತೆ ತೈಲದ ಬಗ್ಗೆ ಗಾಬರಿಯಾಗುವುದು ಬೇಡ. ಕಚ್ಚಾ ತೈಲ, ಪೆಟ್ರೋಲಿಯಂ ಉತ್ಪನ್ನ, ಎಲ್ಪಿಜಿ ಕೊರತೆ ಇಲ್ಲ. ಹಾರ್ಮುಜ್ ಜಲಸಂಧಿ ಬಂದ್ ನಿಂದ ತೊಂದರೆಯಾಗಿಲ್ಲ. ವಿವಿಧ ಕಡೆಯಿಂದ ಭಾರತವೂ ತೈಲವನ್ನು ಆಮದು ಮಾಡಿಕೊಳ್ಳುತ್ತಿರುವ ಕಾರಣ ಯಾವುದೇ ತೊಂದರೆ ಇಲ್ಲ ಎಂದು ಪೆಟ್ರೊಲಿಯಂ ಸಚಿವ ಹರ್ದಿಪ್ ಸಿಂಗ್ ಪುರಿ ಸ್ಪಷ್ಟನೆ ನೀಡಿದ್ದಾರೆ.




