ಬೆಂಗಳೂರು: 2026-27 ನೇ ಸಾಲಿನ ದಾಖಲೆಯ ಬಜೆಟ್ ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ರೈತರಿಗೆ ನಹತ್ವದ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ರೈತ ಸಮೃದ್ಧನಾದರೆ ಕರ್ನಾಟಕ ಸಮೃದ್ಧವಾಗುತ್ತದರ ಎಂಬ ಆಶಯದೊಂದಿಗೆ ಒಂದಷ್ಟು ರೈತಪರ ಯೋಜನೆಗಳನ್ನ ಘೋಷಣೆ ಮಾಡಿದ್ದಾರೆ. ಅದರಲ್ಲಿ ಮುಖ್ಯಮಂತ್ರಿ ಕೃಷಿ ವಿಸ್ತಾರ ಯೋಜನೆಯೂ ಒಂದು.
ಉತ್ಪಾದೋತ್ತರ ಕೃಷಿ ಚಟುವಟಿಕೆಗಳಾದ ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಸಂಪರ್ಕ ಕಲ್ಪಿಸಿ ರೈತರಿಗೆ ಹೆಚ್ಚುವರಿ ಆದಾಯ ತಂದುಕೊಡಲು ಮುಂದಿನ ಮೂರು ವರ್ಷಗಳಲ್ಲಿ 100 ಕೋಟಿ ರೂಪಾಯಿ ವೆಚ್ಚದಲ್ಲಿ ಮುಖ್ಯಮಂತ್ರಿ ಕೃಷಿ ವಿಸ್ತಾರ ಯೋಜನೆಯನ್ನು ಜಾರಿಗೆ ತರಲಾಗಿದೆ. ಹಾಗೇ ಎಐ ಆಧಾರಿತ ರೈತ ಕರೆ ಕೇಂದ್ರ ಸ್ಥಾಪನೆಗೆ ತೀರ್ಮಾನ ಮಾಡಲಾಗಿದೆ. ಇದರಲ್ಲಿ ರೈತರಿಗೆ ಹವಮಾನ, ಮಾರುಕಟ್ಟೆ ದರ, ಕೃಷಿ ತಾಂತ್ರಿಕತೆ ಮತ್ತು ಇಲಾಖಾ ಮಾಹಿತಿಯನ್ನು ಒಂದೇ ಸೂರಿನಡು ತ್ವರಿತವಾಗಿ ಒದಗಿಸಲು ಕೃಷಿ ಇಲಾಖೆಯ ರೈತ ಕರೆ ಕೇಂದ್ರವನ್ನು ಕೃತಕ ಬುದ್ದಿಮತ್ತೆ ತಂತ್ರಜ್ಞಾನದೊಂದಿಗೆ ಉನ್ನತೀಕರಿಸಲಾಗುವುದು.
ಮಣ್ಣಿನ ಆರೋಗ್ಯ ಕಾಪಾಡಲು ವಸುಧಾಮೃತ ಕಾರ್ಯಕ್ರಮ ಮಾಡಲಾಗುತ್ತದೆ. ಇದರಲ್ಲಿ ಮಣ್ಣಿನಲ್ಲಿ ಸಾವಯವ ಇಂಗಾಲ ಮತ್ತು ಭೌತಿಕ, ರಾಸಾಯನಿಕ ಗುಣಮಟ್ಟ ಹೆಚ್ವಿಸಲು ಹಾಗೂ ಪರಿಸರ ಸ್ನೇಹಿ ಸುಸ್ಥಿರ ಕೃಷಿ ಪದ್ಧತಿ ಉತ್ತೇಜಿಸಲು ಮುಂದಿನ 3 ವರ್ಷಗಳಲ್ಲಿ ವಸುಧಾಮೃತ ಎಂಬ ಹೊಸ ಕಾರ್ಯಕ್ರಮ ಜಾರಿಗೊಳಿಸಲಾಗುವುದು. ರೈತರ ಅನುಕೂಲಕ್ಕಾಗಿ ಕೋಲಾರದಲ್ಲಿ ಎಂಎಸ್ಐಎಲ್ ರೈತ ಮಾಲ್, ಖೋಟಾ ಬೀಜ, ಕೀಟನಾಶಕ ಜಾಲಕ್ಕೆ ಬ್ರೇಕ್ ಹಾಕಲು ಕ್ರಮ, ಮಿಲೆಟ್ ಹಬ್ ಸ್ಥಾಪನೆ, ಪಾಂಡವಪುರವನ್ನು ಸಂಪೂರ್ಣ ಸಾವಯವ ತಾಲೂಕು ಮಾಡುವ ಪ್ಲ್ಯಾನ್, ಅಥಣಿಯಲ್ಲಿ ಕೃಷಿ ಕಾಲೇಜು ಸೇರಿದಂತೆ ಹಲವು ಯೋಜನೆಗಳನ್ನ ರೈತರಿಗೆ ಘೋಷಣೆ ಮಾಡಲಾಗಿದೆ.




