ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936
ಹನುಮಲಿ ಗ್ರಾಮವು ಆರ್. ನುಲೇನೂರು ಪಂಚಾಯಿತಿ ವ್ಯಾಪ್ತಿಯಲ್ಲಿದ್ದು, ಹೊಳಲ್ಕೆರೆಯಿಂದ 16 ಕಿಲೋಮೀಟರ್ ದೂರ ನೈರುತ್ಯಕ್ಕೆ, ಹೊಳಲ್ಕೆರೆ- ದೊಗ್ಗನಾಳು – ಹನುಮಲಿ
ಮಾರ್ಗದಲ್ಲಿದೆ.
ಈ ಗ್ರಾಮದ ಹಳೆಗ್ರಾಮ ನಿವೇಶನ ಗ್ರಾಮದ ಪೂರ್ವಕ್ಕೆ ಹರಿಯುವ ಹಿರೇಹಳ್ಳದ ದಂಡೆಯ ಮೇಲಿದ್ದಿತು ಎನ್ನಲಾಗುತ್ತದೆ. ನಂತರ ಗ್ರಾಮವು ಪಶ್ಚಿಮಕ್ಕೆ ಸ್ಥಳಾಂತರಗೊಂಡಿದೆ. ಜೊತೆಗೆ ಗ್ರಾಮದ ಈಗಿನ ಉತ್ಸವಮೂರ್ತಿ ರಂಗನಾಥ ಸ್ವಾಮಿ ಮಂದಿರದ ಹಿಂಭಾಗದಲ್ಲಿ ಕೋಟೆ ಗೋಡೆಗಳ ಅವಶೇಷಗಳು ಇದ್ದವು ಎನ್ನಲಾಗುತ್ತದೆ. ಆದರೆ ಈಗ ಇವೆಲ್ಲವೂ ನಾಮಾವಶೇಷವಾಗಿದ್ದು ಯಾವುದೇ ಐತಿಹಾಸಿಕ ಕುರುಹುಗಳು ಉಳಿದಿರುವುದಿಲ್ಲ.
ಭೌಗೋಳಿಕವಾಗಿ ಗ್ರಾಮದ ಸುತ್ತಲೂ ಸಮತಟ್ಟು ಮೈದಾನದ ಒಣ ಭೂಪ್ರದೇಶವೇ ಹೆಚ್ಚಾಗಿದೆ.
ಗ್ರಾಮದ ಪೂರ್ವಕ್ಕೆ ಹಿರೇಹಳ್ಳ ಹರಿಯುತ್ತದೆ.ಇದು ಗ್ರಾಮದ ತೋಟಗಳಿಗೆ ಉತ್ತಮ ನೀರಾವರಿ ಸೌಲಭ್ಯ ಕಲ್ಪಿಸುತ್ತದೆ. ಕರ್ನಾಟಕದಲ್ಲಿ ಹನುಮನ ಹೆಸರಿನ ಮೇಲೆ ಮುನ್ನೂರಕ್ಕೂ ಅಧಿಕ ಗ್ರಾಮಗಳಿವೆ. ಅದರಲ್ಲಿ ಈ ಗ್ರಾಮ ಕೂಡ ಒಂದಾಗಿದೆ.
ಹೆಸರಿನ ಮೂಲ :
ಗ್ರಾಮದಲ್ಲಿರುವ ಶ್ರೀ ಆಂಜನೇಯ (ಹನುಮ ) ಸ್ವಾಮಿ ದೇವರಿಂದ ಈ ಗ್ರಾಮಕ್ಕೆ ಹನುಮಲಿ ಎಂಬ ಹೆಸರು ಬಂದಿದೆ. ಹಿಂದೆ ಈ ಗ್ರಾಮಕ್ಕೆ ಹನುಮನಹಳ್ಳಿ ಎಂಬ ಹೆಸರು ಇದ್ದಿದ್ದು, ನಂತರ ಇದು ಅಪಭ್ರಂಶಗೊಂಡು ಹನುಮಲಿ ಎಂಬ ಹೆಸರು ಬಂದಿದೆ ಎಂಬುದು ಹಿರಿಯರ ಅನಿಸಿಕೆಯಾಗಿದೆ. ಆದರೆ ಈ ಗ್ರಾಮದಲ್ಲಿ ಪ್ರತ್ಯೇಕ ಯಾವುದೇ ಆಂಜನೇಯ ಮಂದಿರ ಇರುವುದಿಲ್ಲ.
ವೀರಗಲ್ಲು :
ಗ್ರಾಮದ ಪ್ರಮುಖರ ಮನೆಯ ಕಾಂಪೌಂಡಿನಲ್ಲಿ ಸಂರಕ್ಷಿಸಲಾದ ವೀರಗಲ್ಲು 16 -17 ನೇ ಶತಮಾನಕ್ಕೆ ಸೇರಿದ್ದು, ಇದನ್ನು ಇಲ್ಲಿಯ ಮನೆಯವರು ವಾರ್ಷಿಕವಾಗಿ ಕುಂಭಾಭಿಷೇಕ ಮುಂತಾದ ಆಚರಣೆಗಳನ್ನು ನಡೆಸುತ್ತಾರೆ.
ಇದರಲ್ಲಿ ವೀರನು ಬಿಲ್ಲು -ಬಾಣ ಹಿಡಿದಿದ್ದು ಯುದ್ಧದಲ್ಲಿ ಹುತಾತ್ಮನಾಗಿರುವುದನ್ನು ಚಿತ್ರಿಸಲಾಗಿದೆ. ಇದರಿಂದ ಈ ಗ್ರಾಮವು ಹಿಂದೆ ವೀರರ ಭೂಮಿಯಾಗಿತ್ತು ಎಂಬುದನ್ನು ತಿಳಿಯಬಹುದು.
ದೊಗ್ಗನಾಳು,ತಾಳಿಕಟ್ಟೆ ಕಾವಲು, ರಂಗಾಪುರ..
ಹತ್ತಿರದ ಗ್ರಾಮಗಳಾಗಿವೆ.
ಗ್ರಾಮದಲ್ಲಿರುವ ದೇವಾಲಯಗಳು :
1.ರಂಗನಾಥ ಸ್ವಾಮಿ ದೇವಾಲಯ:
ಗ್ರಾಮದ ಮಧ್ಯಭಾಗದಲ್ಲಿ ಪೂರ್ವಾಭಿಮುಖವಾಗಿ ಪಾಳೇಗಾರರ ಶೈಲಿಯಲ್ಲಿ 17-18 ನೆಯ ಶತಮಾನದಲ್ಲಿ ಈ ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ. ಗರ್ಭಗೃಹ, ಅಂತರಾಳ,ದೀಪಸ್ತಂಭಗಳನ್ನು ಒಳಗೊಂಡ ದೇವಾಲಯ ಇದಾಗಿದೆ. ದೇವಾಲಯದ ಅಂತರಾಳದಲ್ಲಿ ಆಂಜನೇಯ ಸ್ವಾಮಿ ದೇವರನ್ನು ಪೂಜಿಸಲಾಗುತ್ತದೆ. ಇದೇ ಊರಿನ ಮೂಲ ಆಂಜನೇಯ ಮೂರ್ತಿ ಎಂದು ಹೇಳಲಾಗುತ್ತದೆ. ಗರ್ಭಗೃಹದಲ್ಲಿ ಉದ್ಭವ ರಂಗನಾಥ ಸ್ವಾಮಿ ದೇವರಿದ್ದು ಪೂಜಿಸಲಾಗುತ್ತದೆ. ದೇವಾಲಯದ ಹೊರಗೋಡೆಯ ಮೇಲೆ ಮೀನು, ಸಿಂಹ, ನಾಗರಹಾವಿನ ಉಬ್ಬು ಕೆತ್ತನೆಗಳಿವೆ.
ಇದೇ ಹೆಸರಿನ ಉತ್ಸವಮೂರ್ತಿ ಮಂದಿರವು ಗ್ರಾಮದ ಪೂರ್ವ ಭಾಗದಲ್ಲಿದೆ. ಹಿಂದೆ ಇದ್ದ ಇಲ್ಲಿನ ಮಂದಿರವನ್ನು ತೆಗೆದು ಸ್ಥಳೀಯ ಶೈಲಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿದೆ. ಗರ್ಭಗೃಹ ಹಾಗೂ ಸಭಾಮಂಟಪಗಳನ್ನು ಈ ಮಂದಿರ ಒಳಗೊಂಡಿದ್ದು ಉತ್ಸವ ಮೂರ್ತಿಯನ್ನು ಹತ್ತಿರದ ಗ್ರಾಮಗಳ ಧಾರ್ಮಿಕ ಕಾರ್ಯಕ್ರಮಗಳಿಗೆ ತೆಗೆದುಕೊಂಡು ಹೋಗಲಾಗುತ್ತದೆ.
2.ಕುಕ್ಕುವಾಡೇಶ್ವರಿ ದೇವಾಲಯ:
ಗ್ರಾಮದ ಮಧ್ಯಭಾಗದಲ್ಲಿರುವ ಈ ದೇವಾಲಯವು ಸ್ಥಳೀಯ ಶೈಲಿಯಲ್ಲಿ ನಿರ್ಮಿಸಲಾಗಿದೆ. ಗರ್ಭಗೃಹದಲ್ಲಿ ಕುಕ್ಕುವಾಡೇಶ್ವರಿ ದೇವಿಯ ಶಿಲ್ಪವಿದ್ದು ಪೂಜಿಸಲಾಗುತ್ತದೆ.
3.ಹಟ್ಟಿ ಮಾರಮ್ಮ ದೇವಸ್ಥಾನ
ಗ್ರಾಮದ ಮಧ್ಯಭಾಗದಲ್ಲಿರುವ ಶ್ರೀ ಹಟ್ಟಿ ಮಾರಮ್ಮ ದೇವಸ್ಥಾನವನ್ನು ಸ್ಥಳೀಯ ಶೈಲಿಯಲ್ಲಿ ಪೂರ್ವಾಭಿಮುಖವಾಗಿ ನಿರ್ಮಾಣ ಮಾಡಲಾಗಿದೆ.
4. ಈಶ್ವರ ದೇವಸ್ಥಾನ :
ಗ್ರಾಮದ ಪೂರ್ವ ಭಾಗದಲ್ಲಿರುವ ಈ ದೇವಾಲಯವು ಪೂರ್ವಾಭಿಮುಖವಾಗಿದೆ. ಗರ್ಭಗೃಹ ಹಾಗೂ ಸಭಾಮಂಟಪ ಇರುವ ದೇವಾಲಯ ಇದಾಗಿದೆ. ಗರ್ಭಗೃಹದಲ್ಲಿ ಇದೀಗ ನೂತನವಾಗಿ ಈಶ್ವರ ಲಿಂಗ ಹಾಗೂ ಬಸವಣ್ಣ ದೇವರನ್ನು ಪ್ರತಿಷ್ಠಾಪಿಸಲಾಗಿದೆ.
ಹಿಂದೆ ಇಲ್ಲಿ ಪ್ರತಿಷ್ಠಾಪಿಸಲಾಗಿದ್ದ ಪಚ್ಚೆಲಿಂಗವನ್ನು ಕಿಡಿಗೇಡಿಗಳು ಕದ್ದ ಕಾರಣ ಇದೀಗ ನೂತನ ಬೇರೊಂದು ಈಶ್ವರ ಲಿಂಗವನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ.
ದೇವಾಲಯದ ಬಳಿಯಲ್ಲಿ ಗಣಪತಿ ವಿಗ್ರಹವನ್ನು ಕಾಣಬಹುದು.



