ಗ್ರಾಮೀಣ ಬದುಕಿನ ವೈವಿಧ್ಯತೆ ಅರಿತಾಗ ಮಾತ್ರ ಪರಿಪೂರ್ಣ ಶಿಕ್ಷಣ ಸಾಧ್ಯ : ಡಾ. ಟಿ.ಎಸ್. ರವಿ

1 Min Read

 

ಸುದ್ದಿಒನ್, ಚಿತ್ರದುರ್ಗ, ಜನವರಿ. 29 : ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತವಾಗದೆ, ಹಳ್ಳಿ ಜನರ ಬದುಕಿನ ವೈವಿಧ್ಯತೆ ಹಾಗೂ ಅವರ ಜೀವನ ನಿರ್ವಹಣಾ ಕ್ರಮಗಳನ್ನು ಪ್ರಾಯೋಗಿಕವಾಗಿ ಅರಿತುಕೊಳ್ಳಬೇಕು. ಆಗ ಮಾತ್ರ ಶಿಕ್ಷಣಕ್ಕೆ ಒಂದು ಅರ್ಥ ಸಿಗುತ್ತದೆ ಎಂದು ಎಸ್‌ಆರ್‌ಎಸ್ ಸಂಸ್ಥೆಯ ಆಡಳಿತಾಧಿಕಾರಿಗಳಾದ ಡಾ. ಟಿ.ಎಸ್. ರವಿ ಅಭಿಪ್ರಾಯಪಟ್ಟರು.

 

ಚಿತ್ರದುರ್ಗ ತಾಲ್ಲೂಕಿನ ಅನ್ನೇಹಾಳ್ ಜಂಪಯ್ಯನಹಟ್ಟಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಎಸ್‌ಆರ್‌ಎಸ್ ಪ್ರಥಮ ದರ್ಜೆ ಕಾಲೇಜಿನ 2025-26ನೇ ಸಾಲಿನ ಎನ್.ಎಸ್.ಎಸ್ ವಿಶೇಷ ವಾರ್ಷಿಕ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ನಂದನ್ ಜಿ.ಪಿ ಮಾತನಾಡಿ, ಈ ವಿಶೇಷ ಶಿಬಿರವು ಕೇವಲ ಜಾಗೃತಿ ಮೂಡಿಸುವ ವೇದಿಕೆಯಲ್ಲ, ಬದಲಾಗಿ ವಿದ್ಯಾರ್ಥಿಗಳ ಆತ್ಮಾವಲೋಕನ ಹಾಗೂ ಹೊಸ ವಿಷಯಗಳ ಕಲಿಕೆಗೆ ಪೂರಕವಾದ ತಾಣವಾಗಿದೆ ಎಂದರು.

 

ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿಗಳಾದ ದೇವೇಂದ್ರಪ್ಪ ಕೆ. ಕುಂಚಿಗನಾಳ್ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿ ಜೀವನದ ಅಮೂಲ್ಯ ಕ್ಷಣಗಳಲ್ಲಿ ಈ ಶಿಬಿರವೂ ಒಂದು. ಇಲ್ಲಿ ಸಿಗುವ ಅವಕಾಶಗಳನ್ನು ಬಳಸಿಕೊಂಡು ಅದ್ಭುತ ಸಾಧನೆಯ ಹಾದಿಯಲ್ಲಿ ಸಾಗಬೇಕು  ಎಂದು ಶಿಬಿರಾರ್ಥಿಗಳನ್ನು ಹುರಿದುಂಬಿಸಿದರು.

ಎನ್ ಎಸ್ ಎಸ್ ವಿಶೇಷ ವಾರ್ಷಿಕ ಶಿಬಿರವು ಜ.28 ರಿಂದ ಪ್ರಾರಂಭವಾಗಿದ್ದು, ಫೆ.03 ರವರೆಗೆ ನಡೆಯಲಿದೆ.  ಈ ಶಿಬಿರದಲ್ಲಿ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಗ್ರಾಮದ ಸ್ವಚ್ಛತೆ, ಜನಜಾಗೃತಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಕಾರ್ಯಕ್ರಮದಲ್ಲಿ ಕೆಪಿಎಸ್ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಕೆ. ಜಂಪಣ್ಣ, ಶಿಕ್ಷಕ ರಂಗಸ್ವಾಮಿ ಹಾಗೂ ಕಾಲೇಜಿನ ಉಪನ್ಯಾಸಕರುಗಳಾದ ಪ್ರೊ. ಮಾಧುರಿ, ಪ್ರೊ. ನಾಗರಾಜ್,  ಪ್ರೊ. ಕಲ್ಲಪ್ಪ ಉಪಸ್ಥಿತರಿದ್ದರು.

Share This Article
Enable Notifications OK No thanks