ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ ಆಯೋಜನೆ ಸಂಬಂಧ ಇದ್ದಂತ ಗೊಂದಲಗಳಿಗೆ ಸದ್ಯಕ್ಕೆ ಬ್ರೇಕ್ ಬಿದ್ದಿದೆ. ಈ ಮೂಲಕ ಕ್ರಿಕೆಟ್ ಅಭಿಮಾನಿಗಳಿಗೆ ಕೆಎಸ್ಸಿಎನಿಂದ ಗುಡ್ ನ್ಯೂಸ್ ಸಿಕ್ಕಿದೆ. ಚಿನ್ನಸ್ವಾಮಿ ಮೈದಾನದಲ್ಲಿಯೇ ಐಪಿಎಲ್ ಟೂರ್ನಿ ಆಯೋಜನೆ ಮಾಡಲಾಗಿದೆ. ಆರ್ಸಿಬಿಯ ತವರಿನ ಎಲ್ಲಾ ಪಂದ್ಯಗಳು ಚಿನ್ನಸ್ವಾಮಿಯಲ್ಲಿಯೇ ನಡೆಯಲಿವೆ.
ಈ ಸಂಬಂಧ ಕೆಎಸ್ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಮಾಹಿತಿ ನೀಡಿದ್ದು, ಮಾರ್ಚ್ ತಿಂಗಳ ಅಂತ್ಯದಲ್ಲಿ ಐಪಿಎಲ್ ಪಂದ್ಯಗಳು ಶುರುವಾಗಲಿವೆ. ಉದ್ಘಾಟನಾ ಪಂದ್ಯವನ್ನು ಗೆದ್ದ ತಂಡದ ತವರು ಸ್ಟೇಡಿಯಂನಲ್ಲಿ ನಡೆಸುವುದು ವಾಡಿಕೆ. ಹೀಗಾಗಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ಐಪಿಎಲ್ ಉದ್ಘಾಟನಾ ಪಂದ್ಯವನ್ನು ಆಯೋಜನೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಕಳೆದ ಬಾರಿ ಆರ್ಸಿಬಿ ಕಪ್ ಗೆದ್ದ ಸಂಭ್ರಮದಲ್ಲಿ ಇಡೀ ಟೀಂ ಬೆಂಗಳೂರಿಗೆ ಬಂದಿತ್ತು. ಆರ್ಸಿಬಿ ಕಪ್ ನೋಡೋದಕ್ಕೆ, ವಿರಾಟ್ ಕೊಹ್ಲಿಯನ್ನ ಕಾಣೋದಕ್ಕೆ ಜಿಲ್ಲೆಯ ಮೂಲೆಮೂಲೆಯಿಂದಾನೂ ಜನ ಸೇರಿದ್ದರು. ಅದರಿಂದಾದ ಅನಾಹುತವನ್ನ ಯಾರೂ ಈಗಲೂ ಮರೆಯುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ ಬೆಂಗಳೂರಿನಲ್ಲಿ ಪಂದ್ಯಗಳನ್ನ ನಡೆಸುವುದಕ್ಕೆ ಹಿಂದೇಟು ಹಾಕಲಾಗುತ್ತಿತ್ತು. ಈ ಬಾರಿಯ ಮ್ಯಾಚ್ ಗಳು ಬೆಂಗಳೂರಿನಲ್ಲಿ ನಡೆಯುವುದಿಲ್ಲ ಎಂಬ ಅನುಮಾನದಿಂದಾನೇ ಕ್ರಿಕೆಟ್ ಪ್ರೇಮಿಗಳು ಬೇಸರದಲ್ಲಿದ್ದರು. ಆ ಬೇಸರಕ್ಕೆ ತೆರೆ ಬಿದ್ದಿದೆ. ಪಂದ್ಯಗಳು ಬೆಂಗಳೂರಿನಲ್ಲಿಯೇ ನಡೆಯಲಿವೆ ಎಂಬ ಮಾಹಿತಿಯೂ ಅಧಿಕೃತವಾಗಿ ಸಿಕ್ಕಿದೆ. ಕೆಎಸ್ ಸಿಎ ತಂಡದವರು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ, ಮಾತುಕತೆಯನ್ನು ಕೂಡ ನಡೆಸಿದ್ದಾರೆ. ಬಿಗಿ ಭದ್ರತೆ, ಎಲ್ಲಾ ರೀತಿಯ ಸೆಕ್ಯುರಿಟಿಯೊಂದಿಗೆ ಪಂದ್ಯಗಳು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿಯೇ ನಡೆಯಲಿದೆ.


