ಹುಬ್ಬಳ್ಳಿ – ಧಾರವಾಡ ರೈತರಿಗೆ ಗುಡ್ ನ್ಯೂಸ್ ನೀಡಿದ ಜಿಲ್ಲಾಧಿಕಾರಿ

1 Min Read

ಹುಬ್ಬಳ್ಳಿ: ರೈತರಿಗೆ ಬೇಸರದ ಸಂಗತಿ ಅಂದ್ರೆ ಕಷ್ಟ ಪಟ್ಟು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ಇರುವುದು. ಮೆಕ್ಕಜೋಳ ಬೆಳೆದ ರೈತರು ಕೂಡ ಅದೇ ಸಮಸ್ಯೆಯನ್ನ ಎದುರಿಸುತ್ತಿದ್ದಾರೆ. ಆದರೆ ಹುಬ್ಬಳ್ಳಿ – ಧಾರವಾಡ ರೈತರಿಗೆ ಅಲ್ಲಿನ ಜಿಲ್ಲಾಧಿಕಾರಿ ದಿವ್ಯ ಪ್ರಭು ಗುಟ್ ನ್ಯೂಸ್ ನೀಡಿದ್ದಾರೆ. ರೈತರಿಂದ ಮೆಕ್ಕೆಜೋಳ ಖರೀದಿಯಲ್ಲಿ ಪಾರದರ್ಶಕತೆ ಇರಲಿ, ಮಧ್ಯವರ್ತಿಗಳಿಗೆ ಅವಕಾಶ ಬೇಡ ಎಂದೇ ಹೇಳಿದ್ದಾರೆ.

ರೈತರಲ್ಲಿ ಮೆಕ್ಕೆಜೋಳ ಖರೀದಿ ಕುರಿತು ಅರಿವು ಮೂಡಿಸಿ, ಬ್ಯಾನರ್ ಗಳನ್ನು ಅಳವಡಿಸಬೇಕು. ರೈತರು ನೇರವಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಕಚೇರಿಗೆ ಬಂದು ನೋಂದಣಿ ಮಾಡಿಕೊಳ್ಳಬೇಕು. ಹಾಗೇ ರೈತರಿಂದ ಮೆಕ್ಕೆಜೋಳ ಖರೀದಿ ಪಾರದರ್ಶಕವಾಗಿರಲಿ. ದಲ್ಲಾಳಿ ಅಥವಾ ಮಧ್ಯವರ್ತಿಗಳಿಗೆ ಅವಕಾಶವಿಲ್ಲ. ಏನೇ ಲಾಭವಿದ್ದರು ರೈತರಿಗೆ ಸಿಗುವಂತೆ ಅಧಿಕಾರಿಗಳು ನಿಗಾವಹಿಸಬೇಕು ಎಂದಿದ್ದಾರೆ.

ಮೆಕ್ಕೆಜೋಳ ಉತ್ಪನ್ನ ಪ್ರಚಲಿತ ಮಾರುಕಟ್ಟೆಗಳಲ್ಲಿ ಸರಾಸರಿ ಮಾದರಿ ಧಾರಣಿ ಪ್ರತಿ ಕ್ವಿಂಟಾಲ್‍ಗೆ ರೂ.1900 ದರದಲ್ಲಿ ವಹಿವಾಟು ಆಗುತ್ತಿದ್ದು, ಮಾರುಕಟ್ಟೆ ಮಧ್ಯ ಪ್ರವೇಶ ದರ (ಎಂಐಎಸ್-Market Intervention scheme) ಪ್ರತಿ ಕ್ವಿಂಟಾಲ್‍ಗೆ ಗರಿಷ್ಠ ರೂ.2150 ನಿಗದಿ ಪಡಿಸಲಾಗಿದೆ. ಪ್ರತಿ ಎಕರೆಗೆ 12 ಕ್ವಿಂಟಾಲ್‍ನಂತೆ ಗರಿಷ್ಠ 50 ಕ್ವಿಂಟಾಲ್ ಮೆಕ್ಕೆಜೋಳವನ್ನು ಫ್ರುಟ್ಸ್ ತಂತ್ರಾಂಶದಲ್ಲಿನ ರೈತರು ಹೊಂದಿರುವ ಜಮೀನಿನ ವಿಸ್ತ್ರೀರ್ಣಕ್ಕನುಗುಣವಾಗಿ ಪ್ರತಿ ರೈತರಿಂದ ಖರೀದಿಸಬಹುದು. ಮೆಕ್ಕೆಜೋಳದ ಎಫ್.ಎ.ಕ್ಯೂ ಗುಣಮಟ್ಟವನ್ನು ಕಡ್ಡಾಯವಾಗಿ ಪರಿಶೀಲಿಸಿ ದೃಢಪಡಿಸಿಕೊಳ್ಳಬೇಕು. ನೋಡಲ್ ಅಧಿಕಾರಿಗಳಾಗಿ ಉಪವಿಭಾಗಾಧಿಕಾರಿ ಹಾಗೂ ಎಲ್ಲ ತಹಶಿಲ್ದಾರರನ್ನು ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ನೇಮಿಸಲಾಗಿದೆ. ಮೆಕ್ಕೆಜೋಳ ಖರೀದಿ ಹಾಗೂ ರೈತರ ನೋಂದಣಿ ಕಾರ್ಯವು ಜನವರಿ 8ರಿಂದ ಆರಂಭವಾಗಿ ಫೆಬ್ರವರಿ 7, 2026ಕ್ಕೆ ಮುಕ್ತಾಯಗೊಳ್ಳಲಿದೆ. ಜಿಲ್ಲೆಯಲ್ಲಿ 1.85 ಲಕ್ಷ ಕ್ವಿಂಟಾಲ್ ಮೆಕ್ಕೆಜೋಳ ಖರೀದಿಗೆ ಸರ್ಕಾರವು ಅನುಮತಿ ನೀಡಿದೆ. ಈಗಾಗಲೇ 120 ಜನ ರೈತರು ನೋಂದಣಿಯಾಗಿದ್ದು, 399 ಕ್ವಿಂಟಾಲ್ ಮೆಕ್ಕೆಜೋಳ ಖರೀದಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

Share This Article