ರಾಮನಗರ: ಶಾಸಕ ಇಕ್ಬಾಲ್ ಹುಸೇನ್ ಅಂದಿನಿಂದಾನೂ ಡಿಕೆ ಶಿವಕುಮಾರ್ ಅವರ ಬೆಂಬಲಕ್ಕೆ ನಿಂತಿದ್ದಾರೆ. ಸಿಎಂ ವಿಚಾರವೂ ಅಷ್ಟೇ. ಅವರೇ ಸಿಎಂ ಆಗ್ತಾರೆ ಎಂಬ ಮಾತನ್ನು ಸಾಕಷ್ಟು ಸಲ ಹೇಳಿದ್ದಾರೆ. ಅದಕ್ಕೆ ಒಮ್ಮೆ ನೋಟೀಸ್ ಕೊಟ್ಟು, ಎಚ್ಚರಿಕೆಯನ್ನು ನೀಡಲಾಗಿತ್ತು. ಆಪ್ತರಾಗಿರೋ ಕಾರಣಕ್ಕೆ ಡಿಕೆಶಿ ಕೂಡ ಸಾಫ್ಟ್ ಆಗಿ ಹೇಳಿ ಸುಮ್ಮನೆ ಮಾಡಿದ್ದರು. ಇದೀಗ ಡಿಕೆಶಿ ಸಿಎಂ ಆಗುವ ದಿನಾಂಕವನ್ನೇ ಅನೌನ್ಸ್ ಮಾಡಿದ್ದಾರೆ ಇಕ್ಬಾಲ್ ಹುಸೇನ್ ಅವರು.
ರಾಮನಗರದಲ್ಲಿ ಈ ಸಂಬಂಧ ಮಾತನ್ನಾಡಿದ ಅವರು, ಡಿಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನವನ್ನು ಬಿಟ್ಟುಕೊಡಬೇಕು. ಅವರಿಗೆ ಅವಕಾಶ ಸಿಗಬೇಕು ಅನ್ನೋದೆ ನಮ್ಮ ಬೇಡಿಕೆ. ಇದಕ್ಕೆ ಹೈಕಮಾಂಡ್ ಕೂಡ ಸ್ಪಂದಿಸುತ್ತಿದೆ. ಬಹುಶಃ ಜನವರಿ 6 ರಂದು ಸಿಎಂ ಸ್ಥಾನ ಸಿಗುವ ಶೇಕಡ 99 ರಷ್ಟು ವಿಶ್ವಾಸ ನಮಗಿದೆ.
ಜನವರಿ 6 ಹಾಗೂ ಜನವರಿ 9 ಅದೃಷ್ಟದ ದಿನವಾಗಿದೆ. ಲಕ್ಕಿ ನಂಬರ್ ಎಂದೇ ಹೇಳಬಹುದು. ನಮ್ಮಲ್ಲಿ ಯಾವುದೇ ಬಣ ಇಲ್ಲ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಇಬ್ಬರೂ ಕೂಡ ರಾಜ್ಯದ ಆಸ್ತಿ. ನಮ್ಮ ಬೇಡಿಕೆ, ಡಿಕೆಶಿ ಹೋರಾಟಕ್ಕೆ, ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕು ಅಷ್ಟೇ. ನಾಳೆ ನಾನು ದೆಹಲಿಗೆ ಹೋಗ್ತಾ ಇದ್ದೀನಿ. ವೋಟ್ ಚೋರಿ ವಿರುದ್ಧ ಬೃಹತ್ ಪ್ರತಿಭಟನೆ ಇದೆ. ಡಿಕೆ ಶಿವಕುಮಾರ್ ನೇತೃತ್ವದಲ್ಲಿ ದೆಹಲಿಗೆ ಹೋಗುತ್ತಿದ್ದೇವೆ. ಪ್ರತಿ ಕ್ಷೇತ್ರದಿಂದ ತೆರಳಿ ಪ್ರತಿಭಟನೆ ಬೆಂಬಲ ಸೂಚಿಸುತ್ತಿದ್ದೇವೆ. ನಾವು ಯಾವುದೇ ವರಿಷ್ಠರನ್ನು ಭೇಟಿ ಮಾಡುವುದಿಲ್ಲ. ನಮ್ಮ ಮನವಿಯನ್ನು ವರಿಷ್ಠರಿಗೆ ತಿಳಿಸಿದ್ದೇವೆ ಎಂದು ತಿಳಿಸಿದ್ದಾರೆ.











