ಹುಬ್ಬಳ್ಳಿ: ದಕ್ಷ ಅಧಿಕಾರಿ ಎಂದು ಹೆಸರು ಮಾಡಿದ್ದ ಪಂಚಾಕ್ಷರಿ ಸಾಲಿಮಠ ನಿನ್ನೆ ತಮ್ಮದೇ ಕಾರಿನಲ್ಲಿ ಸುಟ್ಟು ಕರಕಲಾಗಿದ್ದರು. ಅವರದ್ದೇನಾ ಈ ದೇಹ ಎಂಬಷ್ಟು ಭೀಕರವಾಗಿ ಸಾವನ್ನಪ್ಪಿದ್ದಾರೆ. ಕೆಲಸ ಮುಗಿಸಿ, ಹೆಂಡತಿ, ಮಕ್ಕಳನ್ನು ನೋಡುವ ಖುಷಿಯಲ್ಲಿ ಹೋಗ್ತಾ ಇದ್ದರು. ಆದರೆ ಇದ್ದಕ್ಕಿದ್ದ ಹಾಗೇ ಧಾರವಾಡ ಅಣ್ಣಿಗೇರಿ ಎಂಬಲ್ಲಿ ಈ ದುರ್ಘಟನೆ ನಡೆದಿದೆ. ಇಂದು ಸಾಲಿಮಠ ಅವರ ಅಂತ್ಯಕ್ರಿಯೆ ಮುಗಿದಿದೆ. ಅಷ್ಟಕ್ಕೂ ಸಾಲಿಮಠ ಅವರು ಹೊರಗಡೆ ಬರುವುದಕ್ಕೆ ಆಗದಂತ ಪರಿಸ್ಥಿತಿ ನಿರ್ಮಾಣವಾಗಿದ್ದೇಗೆ..? ಕಾರು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದ್ದು ಹೇಗೆ ಎಂಬ ಮಾಹಿತಿ ಇಲ್ಲಿದೆ.
ಹುಬ್ಬಳ್ಳಿಯಿಂದ ಗದಗಿಗೆ ಹೋಗುವಾಗ ಡಿವೈಡರ್ ಮೊದಲು ಕಾರು ಡಿಕ್ಕಿಯಾಗಿ, ಪಕ್ಕದಲ್ಲಿ ರಸ್ತೆಗೆ ಕಾರು ಜಂಪ್ ಆಗಿದೆ. ತಾವೂ ಹೋಗುತ್ತಿದ್ದ ಮಾರ್ಗದ ಎದುರು ಬದಿಗಿನ ರಸ್ತೆಯನ್ನು ಇಳಿದು, ಮತ್ತೆ ಮೇಲಕ್ಕೆ ಬಂದು ನಂತರ ಮತ್ತೆ ರಸ್ತೆ ಪಕ್ಕದಲ್ಲಿ ಹೋಗಿ ನಿಂತಿದೆ. ಈ ಸಮಯದಲ್ಲಿ ಪೆಟ್ರೋಲ್ ಸೋಎಇಕೆಯಿಂದ ಹೊತ್ತಿಕೊಂಡ ಬೆಂಕಿಯಿಂದಾಗಿ ಸಜೀವವಾಗಿ ದಹನವಾಗಿದ್ದಾರೆ. ಕಾರಿನಿಂದ ಹೊರಗಡೆ ಬರುವುದಕ್ಕಾಗದೆ ಒಳಗಡೆಯೇ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ.
44 ವರ್ಷದ ಸಿಪಿಐ ಪಿ.ವಿ ಸಾಲಿಮಠ, ಹಾವೇರಿಯಲ್ಲಿ ಲೋಕಾಯುಕ್ತ ಸಿಪಿಐ ಆಗಿ ಕಳೆದ ಮೂರು ತಿಂಗಳಿಂದ ಕೆಲಸ ನಿರ್ವಹಿಸುತ್ತಿದ್ದ ಸಾಲಿಮಠ, ಇಂದು ಬೆಳಗಾವಿಯಲ್ಲಿ ಕೋರ್ಟ್ ಎವಿಡೆನ್ಸ್ಗೆ ಹೊರಟಿದ್ದರು. ಈ ಹಿನ್ನೆಲೆಯಲ್ಲಿ ನಿನ್ನೆ ಕೆಲಸ ಮುಗಿಸಿ, ಗದಗನಲ್ಲಿರುವ ಪತ್ನಿ ಮತ್ತು ಮಕ್ಕಳನ್ನು ನೋಡಿಕೊಂಡು ಬೆಳಗಾವಿಗೆ ಹೋಗ್ತೇನೆ ಅಂತ ಹೇಳಿ ತಮ್ಮ ಸ್ವಂತ ಐ 20 ಕಾರ್ನಲ್ಲಿ ಹೋಗಿದ್ದರಂತೆ. ಇನ್ನು ಅರ್ಧಗಂಟೆ ಪ್ರಯಾಣ ಮಾಡಿದ್ದರೆ ಗದಗ ತಲುಪುತ್ತಿದ್ದರು. ಆದರೆ ರಾತ್ರಿ 7-30 ಸಮಯದಲ್ಲಿ ನಡೆದ ಅಪಘಾತದಲ್ಲಿ ಬಾರದ ಲೋಕಕ್ಕೆ ಹೋಗಿದ್ದಾರೆ.






