ಬೆಂಗಳೂರು: ಫೋಕ್ಸೋ ಪ್ರಕರಣದಲ್ಲಿ ಈಗಾಗಲೇ ಯಡಿಯೂರಪ್ಪ ಅವರಿಗೆ ಸಂಕಷ್ಟ ಎದುರಾಗಿದೆ. ಇದೀಗ ಖುದ್ದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ಕೋರ್ಟ್ ಸಮನ್ಸ್ ಜಾರಿ ಮಾಡಿದೆ. ಫೋಕ್ಸೋ ಪ್ರಕರಣದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ನಾಲ್ವರಿಗೆ ಕೋರ್ಟ್ ಸಮನ್ಸ್ ಜಾರಿ ಮಾಡಿದ್ದು, ಡಿಸೆಂಬರ್ 2 ರಂದು ಖುದ್ದು ಹಾಜರಾಗುವಂತೆ ಸೂಚನೆ ನೀಡಿದೆ.
ಅರುಣ್, ಮರಿಸ್ವಾಮಿ ಹಾಗೂ ರುದ್ರೇಶ್ ಗೂ ಡಿಸೆಂಬರ್ 2 ರಂದು ನೋಟೀಸ್ ಜಾರಿ ಮಾಡಿದೆ. ಟ್ರಯಲ್ ಆರಂಭವಾಗಿರುವ ಕಾರಣ ಆರೋಪಿಗಳು ಕೋರ್ಟ್ ಗೆ ಖುದ್ದು ಹಾಜರಾಗಬೇಕಿದೆ. ಆರೋಪಿಗಳಿಗೆ ಸಮನ್ಸ್ ಜಾರಿ ಮಾಡಲು ಎಸ್ಪಿಪಿ ಅಶೋಕ್ ನಾಯ್ಕ್ ಮನವಿ ಮಾಡಿದ್ದರು. ಪೋಕ್ಸೋ (POCSO) ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಕರ್ನಾಟಕ ಹೈಕೋರ್ಟ್ನಲ್ಲಿ ಕಳೆದ ವಾರ ಹಿನ್ನಡೆಯಾಗಿತ್ತು. ಕೆಳಹಂತದ ನ್ಯಾಯಾಲಯ ತಮಗೆ ಸಮನ್ಸ್ ಜಾರಿ ಮಾಡಿದ್ದನ್ನು ಪ್ರಶ್ನಿಸಿ ಯಡುಯೂರಪ್ಪ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ಯಡಿಯೂರಪ್ಪನವರ ಅರ್ಜಿಯನ್ನು ವಜಾಗೊಳಿಸಿ ಟ್ರಯಲ್ಗೆ ಅನುಮತಿ ನೀಡಿತ್ತು.
ಈ ಕೇಸ್ ದಾಖಲಾಗಿದ್ದು ಕಳೆದ ವರ್ಷ. ಅಂದ್ರೆ 2024ರಲ್ಲಿ ಯಡಿಯೂರಪ್ಪ ಅವರ ಡಾಲರ್ಸ್ ಕಾಲೋನಿ ನಿವಾಸದಲ್ಲಿರುವ ಮನೆಗೆ 17 ವರ್ಷದ ಬಾಲಕಿ ಹಾಗೂ ತಾಯಿ ಹೋಗಿದ್ದರಂತೆ. ಆ ವೇಳೆ ಮಗಳ ಮೇಲೆ ಯಡಿಯೂರಪ್ಪ ಅವರು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ತಾಯಿ ಆರೋಪಿಸಿ, ದೂರು ದಾಖಲು ಮಾಡಿದ್ದರು. ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು, ಈಗ ಖುದ್ದು ಹಾಜರಾಗಲು ಕೋರ್ಟ್ ನೋಟೀಸ್ ಜಾರಿ ಮಾಡಿದೆ.





















