ಸುದ್ದಿಒನ್, ಚಿತ್ರದುರ್ಗ ; ಸಾಮಾನ್ಯವಾಗಿ ರಾಜಕೀಯದಲ್ಲಿರುವವರಿಗೆ ಉತ್ತಮ ಸ್ಥಾನಕ್ಕೆ ಹೋಗಬೇಕು, ಎತ್ತರಕ್ಕೆ ಬೆಳೆಯಬೇಕು ಎಂಬ ಆಸೆ ಇದ್ದೆ ಇರುತ್ತೆ. ಶಾಸಕರಾದ ಮೇಲೆ ಸಚಿವರಾಗಬೇಕೆಂಬ ಹಂಬಲವೂ ಇರುತ್ತೆ. ಅದರಲ್ಲೂ ಮತ್ತೆ ಮತ್ತೆ ನಾವೇ ಶಾಸಕರಾಗಬೇಕೆಂಬ ಬಯಕೆಯೂ ಸಾಕಷ್ಟು ಜನರಲ್ಲಿ ಇರುವುದನ್ನ ನೋಡಿದ್ದೀವಿ. ಇದೀಗ ಸಚಿವರಾಗಬೇಕೆಂಬ ಆಕಾಂಕ್ಷೆ ಹೊಂದಿರುವವರಲ್ಲಿ ಎನ್.ವೈ.ಗೋಪಾಲಕೃಷ್ಣ ಕೂಡ ಇದ್ದಾರೆ. ಅವರೇ ಈ ಬಗ್ಗೆ ಮಾತನಾಡಿದ್ದಾರೆ.
ತಮ್ಮ ಕ್ಷೇತ್ರದ ನಾಯಕನಹಟ್ಟಿಯಲ್ಲಿ ಇಂದು ಕಟ್ಟಡವೊಂದರ ಗುದ್ದಲಿ ಪೂಜೆಗೆ ಬಂದಿದ್ದರು. ಈ ವೇಳೆ ಮಾತನಾಡಿದ ಗೋಪಾಲಕೃಷ್ಣ ಅವರು, 7 ಬಾರಿ ಶಾಸಕನಾಗಿದ್ದೇನೆ. ನನ್ನ ಹಿರಿತನವನ್ನು ಗಮನಿಸಿ, ಸಚಿವ ಸ್ಥಾನವನ್ನು ನೀಡಬೇಕು ಎಂದು ಮನವಿ ಮಾಡಿಕೊಂಡರು. ಏಳು ಬಾರಿ ಶಾಸಕರಾದರೂ ಸಚಿವ ಸ್ಥಾನ ನೀಡದೆ ಇರೋದಕ್ಕೆ ಬೇಸರವನ್ನು ವ್ಯಕ್ತಪಡಿಸಿದರು.
ಮಾತು ಮುಂದುವರೆಸಿದ ಗೋಪಾಲಕೃಷ್ಣ ಅವರು, ನನ್ನ ಸಾಮರ್ಥ್ಯ, ಕ್ಷಮತೆ ಮತ್ತು ಯೋಗ್ಯತೆ ಇಷ್ಟು ಕೂಡ ಹೈಕಮಾಂಡ್ ಗೆ ಗೊತ್ಯಿದೆ. ನನ್ನನ್ನು ಆಯ್ಕೆ ಮಾಡುವ ಜನ ಮಂತ್ರಿಯಾಗಿ ಕೆಲಸ ಮಾಡುವುದನ್ನು ನೋಡಲು ಉತ್ಸುಕರಾಗಿದ್ದಾರೆ. ಮೂರನೇ ಸಲ ಶಾಸಕರಾಗಿ ಆಯ್ಕೆಯಾದರೆ ಮಂತ್ರಿ ಮಾಡುವ ಪರಿಪಾಠ ಮಾಯವಾಗಿರುವುದಕ್ಕೆ ಬೇಸರವಿದೆ. ಆದರೆ ವರಿಷ್ಠರು ಗಮನ ಹರಿಸಬೇಕು. ಒಂದು ಅವಕಾಶ ಕೊಟ್ಟರೆ ಇನ್ನು ಹೆಚ್ಚಿನ ಕೆಲಸವನ್ನು ಮಾಡುತ್ತೇನೆ. ಜನಗಳ ಅಭಿಪ್ರಾಯ ಕೂಡ ಹಾಗೇ ಇದೆ. ಮಂತ್ರಿಯಾಗಿ ಇವರನ್ನ ನೋಡೋಣಾ ಅಂತ ನಮ್ಮ ಕ್ಷೇತ್ರದ ಜನ ಕೂಡ ಕಾಯ್ತಾ ಇದ್ದಾರೆ. ಜನರ ಅಭಿಪ್ರಾಯಕ್ಕನುಗುಣವಾಗಿ ಅವರು ಮಾಡಲೇಬೇಕು ಎಂದು ತಮ್ಮ ಮನಸ್ಸಿನ ಆಸೆಯನ್ನ ವ್ಯಕ್ತಪಡಿಸಿದ್ದಾರೆ. ಆದರೆ ಏಳು ಬಾರಿ ಶಾಸಕರಾದರು ಒಂದೇ ಒಂದು ಬಾರಿಯೂ ಸಚಿವರನ್ನಾಗಿ ಮಾಡಿಲ್ವಲ್ಲ ಎಂಬ ಬೇಸರ ಆ ಕ್ಷೇತ್ರದ ಜನರಿಗಿದೆ.


