ಚೆನ್ನೈ, ಆಗಸ್ಟ್ 24: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ರಾಜ್ಯದ ಜನರಿಗೆ ಹಲವು ಮಹತ್ವದ ಕಲ್ಯಾಣ ಯೋಜನೆಗಳನ್ನು ಘೋಷಿಸಿದ್ದಾರೆ. ಕಡಿಮೆ ಆದಾಯದ ಕುಟುಂಬಗಳಿಗೆ ವರ್ಷಕ್ಕೆ ಮೂರು ಉಚಿತ LPG ಸಿಲಿಂಡರ್ಗಳ ವೆಚ್ಚವನ್ನು ನೀಡುವುದರ ಜೊತೆಗೆ, ಮಹಿಳೆಯರು ಮತ್ತು ತೃತೀಯಲಿಂಗಿಗಳಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯವನ್ನು ವಿಸ್ತರಿಸುವುದಾಗಿ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಅನ್ನಪೂರ್ಣಿ ಸೂಪರ್ ಸಿಕ್ಸ್’ ಯೋಜನೆಯಡಿ ಅರ್ಹ ಕುಟುಂಬಗಳಿಗೆ ಪ್ರತಿ ವರ್ಷ ಮೂರು LPG ಸಿಲಿಂಡರ್ಗಳ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಈ ಯೋಜನೆ 2027ರ ಪೊಂಗಲ್ ಹಬ್ಬದಿಂದ ಜಾರಿಗೆ ಬರಲಿದೆ ಎಂದು ವಿಜಯ್ ಘೋಷಿಸಿದ್ದಾರೆ.
ವಾರ್ಷಿಕ ಆದಾಯ ₹2.5 ಲಕ್ಷಕ್ಕಿಂತ ಕಡಿಮೆ ಇರುವ ಕುಟುಂಬಗಳಿಗೆ ಈ ಯೋಜನೆ ಪ್ರಮುಖವಾಗಿ ಅನ್ವಯವಾಗಲಿದ್ದು, ಸುಮಾರು 1.30 ಕೋಟಿ ಕುಟುಂಬಗಳು ಇದರ ಪ್ರಯೋಜನ ಪಡೆಯುವ ನಿರೀಕ್ಷೆಯಿದೆ. ಸಿಲಿಂಡರ್ ಅನ್ನು ಉಚಿತವಾಗಿ ವಿತರಿಸುವ ಬದಲು, ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣವನ್ನು ನೇರವಾಗಿ ಜಮೆ ಮಾಡುವ ವ್ಯವಸ್ಥೆ ಇರಲಿದೆ. ಈ ಯೋಜನೆಗೆ ಸರ್ಕಾರ ವರ್ಷಕ್ಕೆ ಸುಮಾರು ₹4,000 ಕೋಟಿ ವೆಚ್ಚ ಮಾಡಲಿದೆ ಎಂದು ವರದಿಯಾಗಿದೆ.
ಮಹಿಳೆಯರು, ತೃತೀಯಲಿಂಗಿಗಳಿಗೆ ಉಚಿತ ಬಸ್ ಪ್ರಯಾಣ
ಇದರ ಜೊತೆಗೆ ‘ವೆಟ್ರಿ ಪಯಣಂ’ ಯೋಜನೆಯ ಮೂಲಕ ಮಹಿಳೆಯರಿಗೆ ಈಗಿರುವ ಉಚಿತ ಬಸ್ ಪ್ರಯಾಣದ ಸೌಲಭ್ಯವನ್ನು ಮತ್ತಷ್ಟು ವಿಸ್ತರಿಸಲಾಗುತ್ತಿದೆ.
ಇನ್ನು ಮುಂದೆ ಮಹಿಳೆಯರು ಸಾಮಾನ್ಯ ಬಸ್ಗಳ ಜೊತೆಗೆ ಎಕ್ಸ್ಪ್ರೆಸ್, LSS ಹಾಗೂ ಡಿಲಕ್ಸ್ ಸರ್ಕಾರಿ ಬಸ್ಗಳಲ್ಲೂ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಈ ಸೌಲಭ್ಯ ತೃತೀಯಲಿಂಗಿಗಳಿಗೂ ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಮಹಿಳೆಯರು ಮತ್ತು ತೃತೀಯಲಿಂಗಿಗಳ ಉಚಿತ ಪ್ರಯಾಣಕ್ಕೆ ಆದಾಯ ಮಿತಿ ಅಥವಾ ಪ್ರಯಾಣಗಳ ಸಂಖ್ಯೆಗೆ ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ವಿಜಯ್ ಹೇಳಿದ್ದಾರೆ.
ಆರೋಗ್ಯ ಕ್ಷೇತ್ರಕ್ಕೂ ಮಹತ್ವದ ಘೋಷಣೆ
ತೃತೀಯಲಿಂಗಿಗಳಿಗಾಗಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಹೆಚ್ಚುವರಿ ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಾ ಸೇವೆಗಳನ್ನು ಒದಗಿಸುವುದಾಗಿ ಸರ್ಕಾರ ಘೋಷಿಸಿದೆ. ಮುಖ್ಯಮಂತ್ರಿ ಸಮಗ್ರ ಆರೋಗ್ಯ ವಿಮಾ ಯೋಜನೆಯಡಿ ವೈದ್ಯಕೀಯ ವಿಮಾ ಮೊತ್ತವನ್ನು ₹5 ಲಕ್ಷದಿಂದ ₹25 ಲಕ್ಷಕ್ಕೆ ಹೆಚ್ಚಿಸುವುದಾಗಿ ಕೂಡ ವಿಜಯ್ ತಿಳಿಸಿದ್ದಾರೆ.
ಜನರ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ತಮಿಳುನಾಡು ಸರ್ಕಾರ ಈ ಹಲವು ಕಲ್ಯಾಣ ಕ್ರಮಗಳನ್ನು ಘೋಷಿಸಿದ್ದು, ವಿಶೇಷವಾಗಿ ಮಹಿಳೆಯರು ಹಾಗೂ ಕಡಿಮೆ ಆದಾಯದ ಕುಟುಂಬಗಳಿಗೆ ಇದರಿಂದ ಹೆಚ್ಚಿನ ನೆರವು ಸಿಗಲಿದೆ.











