Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ ಜಿಲ್ಲೆಗೆ ಕೆ.ಎಂ.ಇ.ಆರ್.ಸಿ. ಅಡಿ ₹3,574 ಕೋಟಿ ಅನುದಾನ: ನಿರ್ಗಮಿತ ಡಿಸಿ ಟಿ. ವೆಂಕಟೇಶ್

---Advertisement---

ಚಿತ್ರದುರ್ಗ, ಸೆ.04: ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಗಣಿ ಭಾಧಿತ ಪ್ರದೇಶಗಳ ಪುನರುಜ್ಜೀವನಕ್ಕಾಗಿ 33 ಇಲಾಖೆಗಳಿಗೆ ಒಟ್ಟಾರೆಯಾಗಿ ರೂ.3,574 ಕೋಟಿ ಕಾಮಗಾರಿಗಳಿಗೆ ಕೆ.ಎಂ.ಇ.ಆರ್.ಸಿಯಿAದ ಅನುದಾನಕ್ಕೆ ಅನುಮೋದನೆ ದೊರಕಿದೆ ಎಂದು ನಿರ್ಗಮಿತ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ತಿಳಿಸಿದ್ದಾರೆ.

ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಚಿತ್ರದುರ್ಗ ಜಿಲ್ಲಾ ಘಟಕ ವತಿಯಿಂದ ನಗರದ ಪತ್ರಿಕಾ ಭನದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಚಿತ್ರದುರ್ಗ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ನಂತರ, ಹಿಂದುಳಿದ ಈ ಜಿಲ್ಲೆಯ ಅಭಿವೃದ್ಧಿಗೆ ಆದ್ಯತೆ ನೀಡಿ, ಕೆ.ಎಂ.ಇ.ಆರ್.ಸಿ ಸೆಲ್ ನೊಂದಿಗೆ 100 ಹೆಚ್ಚು ಸಭೆಗಳನ್ನು ನಡೆಸಿ ಸತತ ಪ್ರಯತ್ನ ನಡೆಸಿದ್ದರ ಪರಿಣಾಮವಾಗಿ, ಜಿಲ್ಲೆಯ ಪುನರುಜ್ಜೀವನ ಮತ್ತು ಅಭಿವೃದ್ಧಿಗಾಗಿ ಸಲ್ಲಿಸಲಾಗಿದ್ದ ಎಲ್ಲಾ ಪ್ರಸ್ತಾಪನೆಗಳಿಗೆ ಅನುಮೋದನೆ ದೊರೆತಿದೆ.

ಅರಣ್ಯೀಕರಣ, ಸಸಿ ನೆಡುವುದು, ವನ್ಯಜೀವಿಗಳಿಗೆ ನೀರಿನ ವ್ಯವಸ್ಥೆ ಸೇರಿದಂತೆ ಅರಣ್ಯ ಅಭಿವೃದ್ಧಿಗೆ ರೂ.485 ಕೋಟಿ, ಭೀಮಸಮುದ್ರ ಭಾಗದಲ್ಲಿ ಗಣಿಗಾರಿಕೆ ಸಾರಿಗೆಗೆ ರೂ. 450 ಕೋಟಿ ವೆಚ್ಚದಲ್ಲಿ ಪ್ರತ್ಯೇಕ ಕ್ಯಾರಿಡಾರ್ ನಿರ್ಮಾಣ, ಜಿಲ್ಲೆಯ ಅಂಗನವಾಡಿಗಳ ನಿರ್ಮಾಣ ಮತ್ತು ನವೀಕರಣಕ್ಕಾಗಿ ರೂ.375 ಕೋಟಿ, ಜಲಾನಯನ ಇಲಾಖೆಗೆ ರೂ.354 ಕೋಟಿ, ಗ್ರಾಮೀಣ ಕುಡಿಯುವ ನೀರುಗೆ ರೂ.496 ಕೋಟಿ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಕಾಮಗಾರಿಗಳಿಗೆ ರೂ.165 ಕೋಟಿ, ಗ್ರಾಮೀಣ ಭಾಗದ ರಸ್ತೆಗಳಿಗೆ ರೂ.280 ಕೋಟಿ, ಸಣ್ಣ ನೀರಾವರಿ ಇಲಾಖೆಗೆ ರೂ.270 ಕೋಟಿ, ಸಮಾಜ ಕಲ್ಯಾಣ ವಿದ್ಯಾರ್ಥಿನಿಲಯಗಳ ಅಭಿವೃದ್ದಿ ರೂ.185 ಕೋಟಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿದ್ಯಾರ್ಥಿ ನಿಲಯಗಳಿಗೆ ರೂ.150 ಕೋಟಿ, ಆರೋಗ್ಯ ಇಲಾಖೆಗೆ ರೂ.141 ಕೋಟಿ ಹಾಗೂ ಜಿಲ್ಲಾ ಆಸ್ಪತ್ರೆಗೆ ರೂ.114 ಕೋಟಿ, ಅಲ್ಪಸಂಖ್ಯಾತರ ಇಲಾಖೆಗೆ ರೂ.20 ಕೋಟಿ, ಶಿಕ್ಷಣ ಕ್ಷೇತ್ರಕ್ಕೆ ರೂ.280 ಕೋಟಿ, ಚಿತ್ರದುರ್ಗ ಕೋಟೆಗೆ ‘ಸೌಂಡ್ ಅಂಡ್ ಲೈಟ್’ ವ್ಯವಸ್ಥೆಗೆ ರೂ.30 ಕೋಟಿ ಅನುದಾನ ಕೆ.ಎಂ.ಇ.ಆರ್.ಸಿ ಅಡಿ ಲಭ್ಯವಾಗಿದೆ.

ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿಯು ಈ ಅನುದಾನಕ್ಕೆ ಅನುಮೋದನೆ ನೀಡಿದ್ದು, ಎಲ್ಲಾ ಯೋಜನೆಗಳ ಡಿಪಿಆರ್ ಸಿದ್ಧಗೊಂಡು ಹಣ ಬಿಡುಗಡೆಯಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ಈ ಕಾಮಗಾರಿಗಳು ಪೂರ್ಣಗೊಳ್ಳಲಿವೆ ಎಂದು ವಿವರಿಸಿದರು.
ಮೈನಿಂಗ್ ಸಂತ್ರಸ್ತರಿಗೆ ರೂ.11 ಲಕ್ಷ ವೆಚ್ಚದಲ್ಲಿ ಉಚಿತ ಮನೆ:
ಗಣಿಗಾರಿಕೆ ಪೀಡಿತ ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ ಹಾಗೂ ಮೊಳಕಾಲ್ಮೂರು ತಾಲೂಕುಗಳ 5 ಕಿ.ಮೀ ವ್ಯಾಪ್ತಿಯಲ್ಲಿ ಬರುವ ಸುಮಾರು 15,000 ಮನೆರಹಿತ ಕುಟುಂಬಗಳಿಗೆ ಕೆ.ಎಂ.ಇ.ಆರ್.ಸಿ ಅಡಿಯಲ್ಲಿ ತಲಾ ರೂ.11 ಲಕ್ಷ ವೆಚ್ಚದಲ್ಲಿ ಉಚಿತ ಮನೆ ನಿರ್ಮಿಸಲಾಗುತ್ತಿದೆ. ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ.

ನಿವೇಶನ ರಹಿತ ಜಿಲ್ಲೆ’ ಮಾಡುವ ಗುರಿ:
ಜಿಲ್ಲೆಯನ್ನು ನಿವೇಶನ ರಹಿತ ಜಿಲ್ಲೆಯನ್ನಾಗಿ ಮಾಡಲು 1,000 ಎಕರೆಗೂ ಹೆಚ್ಚು ಭೂಮಿ ಕಾಯ್ದಿರಿಸಲಾಗಿದ್ದು, ಇದರಿಂದ 30,000 ಕುಟುಂಬಗಳಿಗೆ ನಿವೇಶನ ಲಭಿಸಲಿದೆ. ‘ಭೂ ಸುರಕ್ಷಾ’ ಅಡಿಯಲ್ಲಿ 5.17 ಕೋಟಿ ಪುಟಗಳ ದಾಖಲೆ ಗಣಕೀಕರಣ ಮಾಡಲಾಗಿದೆ. ರಾಜ್ಯದಲ್ಲಿಯೇ ಗಣಕೀಕರಣ ಮಾಡುವಲ್ಲಿ ಮೊಳಕಾಲ್ಮೂರು ತಾಲೂಕು ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆದಿದೆ. 72,731 ರೈತರಿಗೆ ಪೌತಿ ಖಾತೆ, 6,000 ಎಸ್‌ಸಿ/ಎಸ್‌ಟಿ ರೈತ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ, ಜಿಲ್ಲೆಯ 390 ತಾಂಡಾ/ಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಣೆ ಹೀಗೇ ಕಂದಾಯ ಇಲಾಖೆಯ ಸೇವೆಗಳನ್ನು ಜನರಿಗೆ ದೊರಕುವಂತೆ ಮಾಡಿದ್ದಾನೆ. ಕಂದಾಯ ದಾಖಲೆಗಳ ಡಿಜಿಟಲೀಕರಣಗೊಳಿಸಿದ್ದಕ್ಕಾಗಿ ರಾಜ್ಯ ಮಟ್ಟದಲ್ಲಿ ಜಿಲ್ಲೆಗೆ ಪ್ರಶಸ್ತಿ ಸಹ ಲಭಿಸಿದ್ದನ್ನು ಟಿ.ವೆಂಕಟೇಶ್ ಈ ವೇಳೆ ಸ್ಮರಿಸಿದರು.

ಜಿಲ್ಲೆಯ ಕೈಗಾರಿಕೆ ಅಭಿವೃದ್ಧಿಗಾಗಿ ಮೆಟಿಕುರ್ಕೆ ಬಳಿ ಕೆಎಐಡಿಬಿ ಮೂಲಕ 300-400 ಎಕರೆ ಜಮೀನು ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಕೈಗಾರಿಕಾ ಲೇ ಔಟ್‌ಗಳು ಸಹ ನಿರ್ಮಾಣವಾಗುತ್ತಿವೆ. ಜಿಲ್ಲೆಯ ಬಹುದಿನಗಳ ಬೇಡಿಕೆಯಾದ ತುಮಕೂರು-ದಾವಣಗೆರೆ ನೇರ ರೈಲು ಮಾರ್ಗಕ್ಕೆ 1,200 ಎಕರೆ ಭೂಸ್ವಾಧೀನ, ಎನ್.ಹೆಚ್. 150ಎ ಹಾಗೂ ಹೊಸದುರ್ಗ-ಹುಳಿಯಾರ್ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿರುವುದಾಗಿ ಟಿ.ವೆಂಕಟೇಶ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ನಗರದ ಹೃದಯ ಭಾಗದಲ್ಲಿ ನಿರ್ಮಾಣ ಮಾಡುವ ದೃಷ್ಠಿಯಿಂದ 15 ಎಕರೆ ಜಮೀನು ಮಂಜೂರು ಮಾಡಿ, ತಾತ್ವಿಕ ಒಪ್ಪಿಗೆ ಪಡೆಯಲಾಗಿದೆ. ಜನರು ತಮ್ಮನ್ನು ಬರಿ ಮಾತಿನಿಂದ ಅಥವಾ ನಡವಳಿಕೆಯಿಂದ ನೆನಪಿನಲ್ಲಿಟ್ಟುಕೊಳ್ಳುವುದಕ್ಕಿಂತ, ಜಿಲ್ಲೆಯಲ್ಲಿ ಮಾಡಿದ ಕೆಲಸಗಳಿಂದ ಗುರುತಿಸಬೇಕು ಎಂಬುದು ತಮ್ಮ ಆಶಯ ಎಂದರು. ಇನ್ನು ಎರಡು ವರ್ಷಗಳ ನಂತರ ಜಿಲ್ಲೆಯಲ್ಲಿ ಹೊಸ ಅಂಗನವಾಡಿ, ಶಾಲಾ ಕಟ್ಟಡ, ಹಾಸ್ಟೆಲ್ ಹಾಗೂ ರಸ್ತೆಗಳು ನಿರ್ಮಾಣಗೊಂಡಿದ್ದರೆ, ಅದು ತಮ್ಮ ಆಡಳಿತ ಅವಧಿಯ ಕೊಡುಗೆಯಾಗಿ ನೆನಪಿರಲಿದೆ ಎಂದು ಟಿ. ವೆಂಕಟೇಶ್ ಅಭಿಪ್ರಾಯಪಟ್ಟರು.

ಮಾಧ್ಯಮಗಳು, ಸಾರ್ವಜನಿಕರು ಮತ್ತು ಜನಪ್ರತಿನಿಧಿಗಳ ಸಹಕಾರದಿಂದ ತಮ್ಮ ಅವಧಿಯಲ್ಲಿ ಯಾವುದೇ ಕಾನೂನು-ಸುವ್ಯವಸ್ಥೆ ಸಮಸ್ಯೆ ಅಥವಾ ಭಿನ್ನಾಭಿಪ್ರಾಯಗಳು ಎದುರಾಗಲಿಲ್ಲ. ಪತ್ರಕರ್ತರು ತೋರಿದ ಪ್ರೀತಿ, ಆತ್ಮೀಯತೆ ಮತ್ತು ಸಹಕಾರಕ್ಕೆ ಈ ಸಂದರ್ಭದಲ್ಲಿ ಅವರು ಕೃತಜ್ಞತೆ ಸಲ್ಲಿಸಿದರು.

ಈ ವೇಳೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ವಾರ್ತಾ ಮತ್ತು ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರು ಜುಂಜಣ್ಣ,  ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ವಿನಾಯಕ.ಬಿ.ಎಸ್, ರಾಜ್ಯ ಮಾದ್ಯಮ ಆಕಾಡೆಮಿ ಸದಸ್ಯ ಎಂ.ಎನ್.ಅಹೊಬಲಪತಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ರಾಜ್ಯ ಸಮಿತಿ ಸದಸ್ಯ ಸಿದ್ದರಾಜು ಎಸ್, ಪ್ರಧಾನ ಕಾರ್ಯದರ್ಶಿ ವೀರೇಶ್.ವಿ, ಕಾರ್ಯಕಾರಿ ಸಮಿತಿ ಸದಸ್ಯ ಎಸ್.ಬಿ.ರವಿಕುಮಾರ್, ಹಿರಿಯ ಪತ್ರಕರ್ತರಾದ ಹೆಂಜಾರಪ್ಪ, ರವಿಮಲ್ಲಾಪುರ ಜಡೇಕುಂಟೆ ಮಂಜುನಾಥ್,ಕುಮಾರಸ್ವಾಮಿ, ಸಿ.ಪಿ.ಮಾರುತಿ ಸೇರಿದಂತೆ ಮಾಧ್ಯಮ ಮಿತ್ರರು, ರೈತ ಸಂಘದ ಮುಖಂಡರು ಉಪಸ್ಥಿತರಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now