ಧಾರವಾಡ : ಬಿಜೆಪಿ ಮುಖಂಡ ಯೋಗೇಶ್ ಗೌಡ ಹತ್ಯೆ ಪ್ರಕರಣದ ಅಂತಿಮ ತೀರ್ಪು ಹೊರಬೀಳುವ ಹೊತ್ತಿನಲ್ಲಿ ಅವರ ಕುಟುಂಬದೊಳಗಿನ ಗಲಾಟೆ ಹೊಸ ವಿವಾದಕ್ಕೆ ಕಾರಣವಾಗಿದೆ. ಇದೇ ವೇಳೆ, ಪ್ರಕರಣದ ಆರೋಪಿಯಾಗಿ ಕಾಂಗ್ರೆಸ್ ಮುಖಂಡ ವಿನಯ್ ಕುಲಕರ್ಣಿ ಹೆಸರು ಮತ್ತೊಮ್ಮೆ ಚರ್ಚೆಗೆ ಬಂದಿದೆ.ಪ್ರಕರಣದ ಪ್ರಮುಖ ಸಾಕ್ಷಿಯಾಗಿರುವ ಗುರುನಾಥ್ ಗೌಡ ಹಾಗೂ ಅವರ ಸಹೋದರಿಯರ ನಡುವೆ ತೀವ್ರ ವಾಗ್ವಾದ ಉಂಟಾಗಿ, ಅದು ದೈಹಿಕ ಹಲ್ಲೆಯ ಮಟ್ಟಕ್ಕೂ ತಲುಪಿದೆ ಎಂದು ತಿಳಿದುಬಂದಿದೆ.
ನ್ಯಾಯಾಲಯದ ಆವರಣದ ಸಮೀಪ ನಡೆದ ಈ ಘಟನೆ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಮಾಡಿತು.ಗುರುನಾಥ ಗೌಡ ಅವರು ಸಹೋದರಿಯರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಕುಟುಂಬದ ಒಳಭಿನ್ನಾಭಿಪ್ರಾಯಗಳು ಬಹಿರಂಗಗೊಂಡಿವೆ. ಹತ್ಯೆ ಪ್ರಕರಣದ ತೀರ್ಪಿನ ನಿರೀಕ್ಷೆಯಲ್ಲಿದ್ದ ಕುಟುಂಬದಲ್ಲಿ ಇಂತಹ ಬೆಳವಣಿಗೆ ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಹೆಸರು ಕೇಳಿಬಂದಿರುವ ವಿನಯ್ ಕುಲಕರ್ಣಿ ವಿರುದ್ಧದ ವಿಚಾರಣೆಯೂ ಈಗ ಅಂತಿಮ ಹಂತ ತಲುಪಿದ್ದು, ನ್ಯಾಯಾಲಯದ ತೀರ್ಪಿನತ್ತ ಎಲ್ಲರ ಕಣ್ಣು ನೆಟ್ಟಿದೆ. ಪ್ರಕರಣದ ರಾಜಕೀಯ ಆಯಾಮವೂ ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ತೀರ್ಪು ರಾಜ್ಯ ರಾಜಕೀಯದಲ್ಲೂ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.












