ಸುದ್ದಿಒನ್, ಚಿತ್ರದುರ್ಗ, ನ. 20: ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯವನ್ನು ಹೊಂದಿರುವ ಭಾರತದ ಸಂವಿಧಾನದ ಪೀಠಿಕೆ ಸೇರಿದಂತೆ, ವಿಚಾರಧಾರೆಗಳನ್ನು ಜನಸಾಮಾನ್ಯರಿಗೆ ಮುಟ್ಟಿಸುವಂತಹ ಕಾಯಕವನ್ನು ವಿಮುಕ್ತಿ ವಿದ್ಯಾಸಂಸ್ಥೆ, ಧಮ್ಮ ಕೇಂದ್ರ ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ ಎಂದು ದಾವಣಗೆರೆ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಪ್ರೋ.ಡಾ.ನಟರಾಜ್ ಹೇಳಿದರು.
ಧಮ್ಮ ಸಾಂಸ್ಕøತಿಕ ಕೇಂದ್ರ ಮತ್ತು ವಿಮುಕ್ತಿ ವಿದ್ಯಾಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಧಮ್ಮ ತರಬೇತಿ ಅಧ್ಯಯನ ಕೇಂದ್ರ ಮತ್ತು ಈಜುಕೊಳದ ಉದ್ಘಾಟನೆ ನೆರವೇರಿಸಿ, ಮಾತನಾಡಿದ ಅವರು ಭಾರತ ಸಂವಿಧಾನ ಜಾತ್ಯಾತೀತ ಸಂವಿಧಾನವಾಗಿದ್ದು, ಜಾತಿ, ಧರ್ಮ, ಮತ, ಪಂಥಗಳು ಮತ್ತು ಸಂವಿಧಾನದ ಆಶಯಗಳನ್ನು ರೂಪಕಗಳ ಮೂಲಕ ಜನರಿಗೆ ತಲುಪಿಸುವಂತಹ ಕೆಲಸಗಳನ್ನು ವಿಮುಕ್ತಿ ವಿದ್ಯಾಸಂಸ್ಥೆ ಮತ್ತು ಧಮ್ಮ ಕೇಂದ್ರ ಮಾಡುತ್ತಿದೆ ಎಂದು ಹೇಳಿದರು.
ಯು.ಕೆ.ಯ ಕ್ರಿಸ್ಟಿನಾ ದೊರೊತಿ ಅವರು ಧಮ್ಮ ಕೇಂದ್ರದಲ್ಲಿ ಮಕ್ಕಳು, ಮಹಿಳೆಯರು ಮತ್ತು ಪುರುಷರ ಹಕ್ಕುಗಳಿಗಾಗಿ ತರಬೇತಿ ಮತ್ತು ಅಧ್ಯಯನಕ್ಕಾಗಿ ಆರಂಭಿಸಲಾಗಿರುವ ಕೇಂದ್ರವು ವಿಶೇಷವಾಗಿ ನಿರ್ಮಾಣಗೊಂಡಿದೆ ಎಂದು ಹೇಳಿದರು.
ಗ್ರಾಮೀಣ ಭಾಗದ ಮಕ್ಕಳಿಗಾಗಿ ಈಜುಕೊಳ ನಿರ್ಮಾಣ ಹಾಗೂ ತರಬೇತಿಗಾಗಿ ಕುಟೀರವನ್ನು ನಿರ್ಮಾಣಮಾಡುವ ಮೂಲಕ ಸಾರ್ವಜನಿಕರ ಅನುಕೂಲಕ್ಕಾಗಿ ವಿಮುಕ್ತಿ ವಿದ್ಯಾಸಂಸ್ಥೆ ವಿಶೇಷ ಮುತುವರ್ಜಿ ವಹಿಸಿ, ನಿರ್ಮಾಣಮಾಡಲಾಗಿರುವ ಕೊಳವು ನಿಜಕ್ಕೂ ಅದ್ಭುತವಾಗಿದೆ ಎಂದು ಕ್ರಿಸ್ಟಿನಾ ಹೇಳಿದರು.
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ರವರು ರಚಿಸಿದಂತಹ ಸಂವಿಧಾನದ ಆಧಾರದ ಮೇಲೆ ರೂಪಕಗಳನ್ನು ಮಾಡಿ ಜನರಿಗೆ ಮಾಹಿತಿ ನೀಡುವಂತಹ ಕೆಲಸ ನಡೆಯುತ್ತಿರುವುದು ನಿಜಕ್ಕೂ ಪ್ರಶಂಸನೀಯ ಎಂದು ಹೇಳಿದರು.
ಪ್ರೋ.ಜೆ.ಯಾದವರೆಡ್ಡಿ ಮಾತನಾಡಿ, ಸಂವಿಧಾನದ ಪೀಠಿಕೆಗಳನ್ನು ಬಳಸಿಕೊಂಡು ರೂಪಕಗಳನ್ನು ಮಾಡುವ ಮೂಲಕ ಜನಸಾಮಾನ್ಯರಿಗೆ ಸಂವಿಧಾನದ ಆಶಯಗಳನ್ನು ಭಿತ್ತರಿಸುವಂತಹ ಕೆಲಸ ವ್ಯವಸ್ಥಿತವಾಗಿ ಧಮ್ಮ ಕೇಂದ್ರದಲ್ಲಿ ನಡೆಯುತ್ತಿದೆ ಎಂದು ಹೇಳಿದರು.
ಭಾರತದ ಸಂವಿಧಾನ ಈ ದೇಶದ ಪ್ರಜಾಪ್ರಭುತ್ವ ಸೇರಿದಂತೆ, ಸರ್ವಧರ್ಮಗಳಿಗೂ ಸಮಾನತೆ ಮತ್ತು ರಕ್ಷಣೆ ನೀಡುವಂತಹ ಹೊಣೆಗಾರಿಕೆ ಹೊಂದಿದೆ ಎಂದು ಹೇಳಿದರು. ದೇಶದಲ್ಲಿ ಶಾಂತಿ & ಸಾಮರಸ್ಯವನ್ನು ಕಾಪಾಡಿಕೊಂಡು ಹೋಗುವಂತಹ ಜವಾಬ್ದಾರಿ ಪ್ರತಿಯೊಬ್ಬ ನಾಗರೀಕರ ಮೇಲಿದೆ ಎಂದು ಹೇಳಿದರು.
ಕುಟೀರ ಮತ್ತು ಕೊಳ ಉದ್ಥಾಟನಾ ಸಮಾರಂಭದಲ್ಲಿ ವಿಮುಕ್ತಿ ವಿದ್ಯಾಸಮಸ್ಥೆಯ ನಿರ್ದೇಶಕರಾದ ಆರ್.ವಿಶ್ವಸಾಗರ್ ಅವರು ಮಾತನಾಡಿ, ಓಪನ್ ಹ್ಯಾಂಡ್ ಇಂಡಿಯಾ ಪ್ರಾಜೆಕ್ಟ್ ವತಿಯಿಂದ ಕ್ರಿಸ್ಟಿನಾ ಅವರು ತಾವು ದುಡಿದ ಮತ್ತು ಸಂಪಾದನೆಮಾಡಿದ ಹಣವನ್ನು ವಿಮುಕ್ತಿ ವಿದ್ಯಾಸಂಸ್ಥೆಗೆ ನೆರವು ನೀಡುವ ಮೂಲಕ ಇಲ್ಲಿನ ಗಿಡ, ಮರ, ಪಕ್ಷಿ, ಪ್ರಾಣಿ, ಜೀವ ಸಂಕುಲನಗಳ ಬೆಳವಣಿಗೆ ಮತ್ತು ಜೀವಿಸಲು ಅವಕಾಶ ಮಾಡಿಕೊಟ್ಟಿರುವ ಹಿಂದೆ ಇವರ ನೆರವು ಇದೆ ಎಂದು ಹೇಳಿದರು.
ಧಮ್ಮ ಕೇಂದ್ರದಲ್ಲಿ ಸಾವಿರಾರು ಗಿಡಮರಗಳನ್ನು ಕಳೆದ 2015 ರಿಂದ ಪೋಷಿಸಿಕೊಂಡು ಬರಲಾಗಿದೆ. ಈಗ ಈ ಗಿಡ ಮರಗಳ ಮಧ್ಯೆ, ಹಕ್ಕಿ, ಜೀವ ಸಂಕುಲನಗಳು ಬದುಕುವಂತಹ ವಾತಾವರಣ ನಿರ್ಮಾಣವಾಗಿದ್ದು, ಇದಕ್ಕೆ ಬಹಳಷ್ಟು ಕಾರಣಕರ್ತರು ಯು.ಕೆ.ಯ ಕ್ರಿಸ್ಟಿನಾ ಮೆಡಮ್ ಅವರು ಎಂದು ಹೇಳಿದರು.
ಸಮಾರಂಭದಲ್ಲಿ ನಿವೃತ್ತ ಉಪನ್ಯಾಸಕರು ಮತ್ತು ದಲಿತ ಪರ ಚಿಂತಕರಾದ ಶಿವಕುಮಾರ್, ಫಾದರ್ ಪಾಲ್, ವಿಮುಕ್ತಿ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಅನ್ನಪೂರ್ಣಮ್ಮ, ಕರ್ನಾಟಕ ಶಾಂತಿ & ಸೌಹಾರ್ದ ವೇದಿಕೆಯ ಅಧ್ಯಕ್ಷರಾದ ನರೇನಹಳ್ಳಿ ಅರುಣ್ಕುಮಾರ್, ಪ್ರಗತಿಪರ ಹೋರಾಟಗಾರ ಪುರುಷೋತ್ತಮ್, ಶ್ರೀಮತಿ ನಾಗರತ್ನ, ಶ್ರೀಮತಿ ಬಿಬಿಜಾನ್, ಅರಣ್ಯಸಾಗರ್, ನಾಗಪ್ಪ, ಚಿಂಚೊಳ್ಳಿ ಭಾಗದ ಕಾರ್ಯಕರ್ತರು ಭಾಗವಹಿಸಿದ್ದರು.
